ಎರಡು ತಿಂಗಳ ಹಸುಗೂಸು ಅಗಲಿದ ತಾಯಿ । ತೊಟ್ಟಿಲು ತೂಗುವ ಕೈ ಶವವಾದ ದುರ್ಘಟನೆ । ಕಾಲು ಜಾರಿ ಕೆರೆಗೆ ಬಿದ್ದು ಮಹಿಳೆ ಸಾವು
ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕನ್ನಡಪ್ರಭ ವಾರ್ತೆ ಕುಕನೂರುದೇವಿಗೆ ಪೂಜೆ ಸಲ್ಲಿಸಿ ಮನೆಗೆ ತೆರಳಿ ಹೆತ್ತ ಕಂದನ ಹಣೆಗೆ ದೇವರ ಅಂಗಾರ ಹಚ್ಚಿ ಕೈ ಕಾಲು ಸವರಬೇಕಿದ್ದ ಹಡೆದವ್ವ ಮನೆಗೆ ಬರಲೇ ಇಲ್ಲ!
ಕಾಲು ಜಾರಿ ಕೆರೆಗೆ ಬಿದ್ದಿದ್ದ ಗೌರಮ್ಮಳನ್ನು ಸ್ಥಳೀಯರು ಹುಡುಕಾಡಿ ತಂದಾಗ ಜೀವ ಇನ್ನೂ ಇತ್ತು. ಆಸ್ಪತ್ರೆಗೆ ದಾಖಲಿಸಲು ತೆರಳುವ ದಾರಿ ಮಧ್ಯೆ ಜೀವ ಹೋಯಿತು ಎನ್ನುತ್ತಾರೆ ಗ್ರಾಮಸ್ಥರು.
ಎರಡು ತಿಂಗಳ ಹಿಂದೆ ಹೆರಿಗೆ ಮುಗಿಸಿಕೊಂಡು ತವರ ಮನೆಯಲ್ಲಿದ್ದ ಗೌರಮ್ಮ ಕಲ್ಲೇಶ ಗುರುಮಠ (23) ಶರವನ್ನವರಾತ್ರಿ ಪ್ರಯುಕ್ತ ಬೆಳ್ಳಂಬೆಳಗ್ಗೆ ಎದ್ದು ಬನ್ನಿಗಿಡಕ್ಕೆ ಹೋಗಿ ಪೂಜೆ ಸಲ್ಲಿಸಿ ನಂತರ ಕೆರೆಯಲ್ಲಿರುವ ಗಂಗಾ ಮಾತೆಗೆ ಪೂಜೆ ಸಲ್ಲಿಸುತ್ತಿದ್ದಳು. ಆದರೆ ಎಂದಿನಂತೆ ಗುರುವಾರ ಸಹ ಬನ್ನಿಗಿಡಕ್ಕೆ ಪೂಜೆ ಸಲ್ಲಿಸಿ ಗಂಗೆಗೆ ಪೂಜೆ ಸಲ್ಲಿಸಲು ಕೆರೆ ದಡದಲ್ಲಿರುವ ಮೆಟ್ಟಿಲುಗಳನ್ನು ಇಳಿದು ಪೂಜೆ ಸಲ್ಲಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದಾಳೆ.ಗೌರಮ್ಮ 2 ತಿಂಗಳ ಕಂದ ತೇಜಸ್ನನ್ನು ಅಗಲಿದ್ದು, ಹಸಿವಿನಿಂದ ಅಳುವ ಮಗುವಿಗೆ ತಾಯಿಯ ಹಾಲು ಇಲ್ಲ. ಅವನ ಹಸಿದ ಒಡಲು ಸಹ ತುಂಬದು. ಕಂದನ ಒಡಲಿಗೆ ತಾಯಿಯ ಮಮಕಾರ ಕಣ್ಮರೆಯಾಯಿತು.
ಗೋಗರೆದ ಕುಟುಂಬ:ಗೌರಮ್ಮಳ ಅಗಲಿಕೆಗೆ ಇಡೀ ಕುಟುಂಬ ಕಣ್ಣೀರಿಟ್ಟಿತು. ಬನ್ನಿಕೊಪ್ಪ ಗ್ರಾಮಸ್ಥರು ಹಾಗೂ ಕಲ್ಲೂರಿನ ಪತಿ ಮನೆಯವರು ದೇವರಿಗೆ ಕರುಣೆ ಎಂಬುದು ಇಲ್ಲವೇ ಎಂದು ಹಿಡಿಶಾಪ ಹಾಕಿದರು. ದೇವರ ಪೂಜೆಗೆ ಹೋದಾಕಿಗೆ ದೇವರು ಹೀಗೆ ಮಾಡಬಹುದಿತ್ತೇ ಎಂದು ಗೌರಮ್ಮಳ ತಾಯಿ ಅನಸೂಯಮ್ಮ ಮಮ್ಮಲ ಮರಗಿದರು.