ಹಗರಿಬೊಮ್ಮನಹಳ್ಳಿ: ಪಟ್ಟಣದ ಹಾಲಶಂಕರ ಮಠವು ಧರ್ಮ ಜಾಗೃತಿ ಮತ್ತು ಉಪನಯನ ಹಾಗೂ ಸಾಮೂಹಿಕ ಮದುವೆಗಳ ಸಮಾಜ ಸೇವೆಯ ಮೂಲಕ ಮಧ್ಯ ಕರ್ನಾಟಕದ ಎಲ್ಲ ಸಮಾಜದ ಭಕ್ತ ಜನರ ಆಶಾ ಕಿರಣವಾಗಿ ಬೆಳೆದಿದೆ ಎಂದು ಶಾಸಕ ನೇಮರಾಜ್ ನಾಯ್ಕ ಸಂತಸ ವ್ಯಕ್ತಪಡಿಸಿದರು.
ಕೊಟ್ಟೂರು, ಮರಿಯಮ್ಮನಹಳ್ಳಿ ಹಾಗೂ ತಾಲೂಕಿನ ನಂದೀಪುರ ಸಹಿತ ಅನೇಕ ಗ್ರಾಮಗಳಲ್ಲಿ ಬಹುದೊಡ್ಡ ಗುರು ಪರಂಪರೆಯ ಅನೇಕ ಹರಚರ ಗುರು ಮೂರ್ತಿಗಳು ರಾಜಕೀಯವಾಗಿ ತಮ್ಮನ್ನು ಎಚ್ಚರದ ಸ್ಥಿತಿಯಲ್ಲಿಡುವ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದರು. ಸಮುದಾಯ ಭವನಕ್ಕೆ ಮತ್ತೆ ಪೂರಕ ಅನುದಾನ ಒದಗಿಸುವೆ. ಶೀಘ್ರದಲ್ಲಿ ಸಮುದಾಯ ಪೂರ್ಣಗೊಳಿಸುವಂತೆ ಗುತ್ತಿಗೆದಾರ ಕುಮಾರ್ ಅವರಿಗೆ ಸೂಚಿಸಿದರು.
ಸಮಾರಂಭದಲ್ಲಿ ಪುರಸಭೆ ಸದಸ್ಯ ನೆಲ್ಲು ಇಸ್ಮಾಯಿಲ್, ಬೈಪಾಸ್ ರಸ್ತೆ ಸಂಚರಿಸಲು ಯೋಗ್ಯವಾಗಿಲ್ಲ. ಅನುದಾನ ಒದಗಿಸಿ ರಿಪೇರಿ ಮಾಡಿ ಎಂದು ಶಾಸಕರ ಗಮನ ಸೆಳೆದಾಗ, ಕ್ಷೇತ್ರ ವ್ಯಾಪ್ತಿಯ ಚೆಕ್ ಡ್ಯಾಂ ಹಾಗೂ ರಸ್ತೆಗಳ ಅಭಿವೃದ್ಧಿಗೆ ಕೆಎಂಆರ್ಸಿಯಿಂದ ₹೬೦೦ ಕೋಟಿ ಅನುದಾನ ಬಿಡುಗಡೆ ಆಗುವಲ್ಲಿ ವಿಳಂಬವಾಗಿದೆ. ಈ ವರ್ಷಾಂತ್ಯದೊಳಗೆ ಕ್ಷೇತ್ರದ ಎಲ್ಲ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವುದಾಗಿ ನೇಮರಾಜ್ ನಾಯ್ಕ ತಿಳಿಸಿದರು.ನಂದೀಪುರ ಡಾ.ಮಹೇಶ್ವರ ಶ್ರೀ, ಗಂಗಾಧರ ಶ್ರೀ, ಹಾಲಶಂಕರ ಶ್ರೀ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಪುರಸಭೆ ಸದಸ್ಯ ದೀಪಕ್ ಕಠಾರೆ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ್, ವಿಶ್ವಕರ್ಮ ಸಮಾಜದ ಸಿ.ಎಚ್. ಸಿದ್ದರಾಜ್, ಬಿ.ಜಿ. ಬಡಿಗೇರ್, ಈ.ಕೃಷ್ಣಮೂರ್ತಿ, ಚಿತವಾಡಗಿ ಪ್ರಕಾಶ್, ತಂಬ್ರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಣಕಾರ್ ಕೊಟ್ರೇಶ್, ಬನಶಂಕರಿ ಮತ್ತು ನೀಲಕಂಠೇಶ್ವರ ದೇವಸ್ಥಾನದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.