2.5 ದಶಕದ ಬಳಿಕ ಹಲಸೂರು ಕೆರೆ ಹೂಳು ತೆರವು

KannadaprabhaNewsNetwork |  
Published : Mar 16, 2026, 03:30 AM IST
ಕೆರೆ ಹೂಲು ತೆಗೆಯುತ್ತಿರುವುದು | Kannada Prabha

ಸಾರಾಂಶ

ಬರೋಬ್ಬರಿ ಎರಡುವರೆ ದಶಕಗಳ ಬಳಿಕ 100 ಎಕರೆಗೂ ಹೆಚ್ಚು ವಿಸ್ತೀರ್ಣದ ಹಲಸೂರು ಕೆರೆಯ ಹೂಳು ತೆಗೆದು ಸಮಗ್ರ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಸುಂದರೀಕರಣ ಮತ್ತು ಶುದ್ಧ ನೀರಿನ ಸಂಗ್ರಹಣೆಯ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಕಾಮಗಾರಿ ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬರೋಬ್ಬರಿ ಎರಡುವರೆ ದಶಕಗಳ ಬಳಿಕ 100 ಎಕರೆಗೂ ಹೆಚ್ಚು ವಿಸ್ತೀರ್ಣದ ಹಲಸೂರು ಕೆರೆಯ ಹೂಳು ತೆಗೆದು ಸಮಗ್ರ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಸುಂದರೀಕರಣ ಮತ್ತು ಶುದ್ಧ ನೀರಿನ ಸಂಗ್ರಹಣೆಯ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಕಾಮಗಾರಿ ಆರಂಭಿಸಲಾಗಿದೆ.

ಕೆರೆಯ ನೀರಿನ ಸಾಮರ್ಥ್ಯ ಹೆಚ್ಚಳಕ್ಕಾಗಿ ಕಳೆದ 25 ವರ್ಷಗಳಿಂದ ಸಂಗ್ರಹವಾಗಿರುವ ಹೂಳೆತ್ತುವ ಕೆಲಸ ಭರದಿಂದ ಸಾಗಿದೆ. ಹೀಗಾಗಿ, ಕೆರೆಯಲ್ಲಿನ ಸಂಪೂರ್ಣ ನೀರನ್ನು ಹೊರಗೆ ಹರಿಯಬಿಟ್ಟು ಖಾಲಿ ಮಾಡಲಾಗಿದೆ. ಜೆಸಿಬಿ ಯಂತ್ರಗಳು, ಲಾರಿಗಳೊಂದಿಗೆ ಸಿಬ್ಬಂದಿ ಹೂಳೆತ್ತುವ ಕೆಲಸದಲ್ಲಿ ತೊಡಗಿದ್ದಾರೆ. ಮಳೆಗಾಲ ಆರಂಭಕ್ಕೂ ಮೊದಲೇ ಹೂಳೆತ್ತುವ ಕಾಮಗಾರಿಯನ್ನು ಮುಗಿಸುವ ಗುರಿಯನ್ನು ಕೇಂದ್ರ ನಗರ ಪಾಲಿಕೆ ಹಾಕಿಕೊಂಡಿದೆ.

ಸುಂದರೀಕರಣ:

ಕೆರೆಯ ಸುತ್ತಮುತ್ತ ತಡೆ ಗೋಡೆ, ಎರಡು ಹಂತದಲ್ಲಿ ವಾಯು ವಿಹಾರಿಗಳಿಗೆ ಪಾದಚಾರಿ ಮಾರ್ಗ, ಅಲ್ಲಲ್ಲಿ ಕಿರು ವಿಶ್ರಾಂತಿ ತಾಣಗಳು, ಬೆಂಚ್‌ಗಳನ್ನು ಅಳವಡಿಸಲಾಗುತ್ತದೆ. ಕೆರೆಯ ಗಡಿ ಭಾಗದಲ್ಲಿ ಸುರಕ್ಷಾ ಕ್ರಮವಾಗಿ ಅಲಂಕಾರಿಕ ಗ್ರಿಲ್‌ಗಳನ್ನು ಅಳವಡಿಸುವ ಕಾರ್ಯವೂ ನಡೆಯುತ್ತಿದೆ. ಇದು ನಾಗರಿಕರ ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಕೆರೆಯ ಸೌಂದರ್ಯವನ್ನು ಮತ್ತಷ್ಟು ವೃದ್ಧಿಸಲಿದೆ ಎಂದು ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಸೌಂದರ್ಯ ಹೆಚ್ಚಿಸುವ ಸೇತುವೆ ನಿರ್ಮಾಣ:

ಕೆರೆಯ ಸೌಂದರ್ಯವನ್ನು ಹೆಚ್ಚಿಸಲು ಕೆರೆ ಪ್ರದೇಶವನ್ನು ಸಮೀಪದ ಉದ್ಯಾನವನದೊಂದಿಗೆ ಸಂಪರ್ಕಿಸುವ ಸಂಪರ್ಕ ಸೇತುವೆ ನಿರ್ಮಾಣ ಕಾರ್ಯವನ್ನೂ ಕೈಗೊಳ್ಳಲಾಗುತ್ತಿದೆ. ಜೊತೆಗೆ ಹೊಸ ಕಲ್ಯಾಣಿಯನ್ನು ನಿರ್ಮಿಸಲಾಗುತ್ತದೆ.

ದ್ವೀಪಗಳ ಮರುನಿರ್ಮಾಣ:

ಕೆರೆಯಲ್ಲಿ 3 ದ್ವೀಪಗಳಿದ್ದು, ಅಲ್ಲಲ್ಲಿ ಕುಸಿದು ದುಃಸ್ಥಿತಿಯಲ್ಲಿವೆ. ಅವುಗಳನ್ನು ಕೂಡ ದುರಸ್ತಿ ಮಾಡಿ ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಕೆರೆಯ ಹೂಳು ತೆಗೆಯುವುದರಿಂದ ಕೆರೆಗೆ ಹೊಂದಿಕೊಂಡಂತೆ ಇರುವ ಸೇನೆಯ ಸಿಬ್ಬಂದಿ ತರಬೇತಿಗೆ ಅನುಕೂಲವಾಗಲಿದೆ. ಇನ್ನು ಪ್ರದೇಶದಲ್ಲಿ ಉದ್ಯಾನ ಅಭಿವೃದ್ಧಿಯ ಜೊತೆಗೆ ವಿವಿಧ ಮಾದರಿಯ ಸಸಿಗಳನ್ನು ನೆಟ್ಟು ಆಕರ್ಷಣೀಯಗೊಳಿಸುವ ಉದ್ದೇಶವಿದೆ. ಅಲ್ಲದೇ, ಮಕ್ಕಳಿಗೆ ಆಟದ ಪಾರ್ಕ್, ಓಪನ್ ಜಿಮ್ ನಿರ್ಮಿಸಲಾಗುತ್ತಿದೆ ಎಂದು ಆಯುಕ್ತರು ಹೇಳಿದ್ದಾರೆ.ಹಲಸೂರು ಕೆರೆಯ ಪರಿಸರ ಸಮತೋಲನವನ್ನು ಕಾಪಾಡುವುದರ ಜೊತೆಗೆ ನಾಗರಿಕರಿಗೆ ಉತ್ತಮ ವಿಶ್ರಾಂತಿ ಹಾಗೂ ಮನರಂಜನಾ ವಾತಾವರಣವನ್ನು ಒದಗಿಸುವುದು ಮುಖ್ಯ ಉದ್ದೇಶವಾಗಿದೆ.

-ರಾಜೇಂದ್ರ ಚೋಳನ್, ಆಯುಕ್ತ, ಕೇಂದ್ರ ನಗರ ಪಾಲಿಕೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ನೋಟು: ಇಬ್ಬರಿಗೆ 5 ವರ್ಷ ಜೈಲು, ₹40 ಸಾವಿರ ದಂಡ
ಪಿಎಂ ಪೋಷಣ್ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ತರಬೇತಿ