ಹಂಪಿ ಉತ್ಸವಕ್ಕೆ ಮೊದಲ ದಿನ ಜನೋತ್ಸಾಹ

KannadaprabhaNewsNetwork |  
Published : Feb 14, 2026, 02:30 AM IST
ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವಕ್ಕೆ ಜನೋತ್ಸಾಹ ಕಂಡು ಬಂದಿದ್ದು, ಸಾವಿರಾರು ಜನರು ಸ್ಮಾರಕಗಳ ನಗರಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. | Kannada Prabha

ಸಾರಾಂಶ

ಹಂಪಿಗೆ ಪ್ರವಾಸಿಗರು ಸೇರಿದಂತೆ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿ ಉತ್ಸವ ವೀಕ್ಷಣೆಗೆ ಆಗಮಿಸಿದ್ದರು.

ಮಂಜುನಾಥ ಕೆ.ಎಂ.

ಕನ್ನಡಪ್ರಭ ವಾರ್ತೆ ಹಂಪಿ

ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವಕ್ಕೆ ಜನೋತ್ಸಾಹ ಕಂಡು ಬಂದಿದ್ದು, ಸಾವಿರಾರು ಜನರು ಸ್ಮಾರಕಗಳ ನಗರಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಹಂಪಿಗೆ ಪ್ರವಾಸಿಗರು ಸೇರಿದಂತೆ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿ ಉತ್ಸವ ವೀಕ್ಷಣೆಗೆ ಆಗಮಿಸಿದ್ದರು. ಮಧ್ಯಾಹ್ನದವರೆಗೆ ನೀರಸವಾಗಿ ಕಂಡು ಬಂದ ಹಂಪಿ ಪರಿಸರ ಸಂಜೆಯಾಗುತ್ತಿದ್ದಂತೆಯೇ ಜನರಿಂದ ತುಂಬಿಕೊಂಡಿತು.

ಎತ್ತುಗಳ ಪ್ರದರ್ಶನ, ವಸ್ತು ಪ್ರದರ್ಶನ, ಮತ್ಸ್ಯಮೇಳ, ಫಲಪುಷ್ಪ ಪ್ರದರ್ಶನದಲ್ಲಿ ಜನಜಂಗುಳಿ ಕಂಡು ಬಂತು. ಆಹಾರ ಮೇಳ ತೋಪೆದ್ದು ಹೋಗಿತ್ತು. ಯಾವುದೇ ತಯಾರಿಯಿಲ್ಲದೇ ನಡೆದ ಆಹಾರ ಮೇಳ ರಸ್ತೆಬದಿಯ ಹೋಟೆಲ್‌ಗಳಿಗೆ ಸೀಮಿತವಾಗಿತ್ತು. ಕಮಲಾಪುರ ಬಳಿ ಜರುಗಿದ ಎತ್ತುಗಳ ಪ್ರದರ್ಶನದಲ್ಲಿ ೨೦೦ ಜೋಡಿ ಎತ್ತುಗಳು ಪ್ರದರ್ಶನಕ್ಕೆ ಬಂದಿದ್ದವು. ಹೊಸಪೇಟೆ ಹಾಗೂ ಹಂಪಿ ಸುತ್ತಮುತ್ತಲಿನ ರೈತರು ಎತ್ತುಗಳ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆಂಧ್ರಪ್ರದೇಶದಿಂದ ಆಗಮಿಸಿದ್ದ ಗಜಗಾತ್ರದ ಎತ್ತುಗಳು ಗಮನ ಸೆಳೆದವು. ಹಳ್ಳಿಕಾರ್ ದೇಸಿ ಎತ್ತುಗಳ ಬಳಿ ನಿಂತು ರೈತರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಮಿಶ್ರ ತಳಿಯ ಎತ್ತುಗಳು ಸಹ ಪ್ರದರ್ಶನಕ್ಕೆ ಬಂದಿದ್ದವು.

ಆಗಸದಿಂದ ಹಂಪಿ ನೋಡಿದರು:

ಕಮಲಾಪುರದ ಮಯೂರ ಭುವನೇಶ್ವರಿ ಆವರಣದಲ್ಲಿ ಫೆ.೧೨ರಿಂದ ಶುರುಗೊಂಡಿರುವ ಹಂಪಿ ಬೈಸ್ಕೈಗೆ ಹೆಚ್ಚಿನ ಬೇಡಿಕೆಯಿತ್ತು. ಬೆಳಿಗ್ಗೆಯಿಂದ ಆಗಸದಿಂದ ಹಂಪಿ ನೋಡುವ ಕೌತುಕ ಮುಂದುವರಿದಿತ್ತು. ಮಹಿಳೆಯರು, ಮಕ್ಕಳು ಹೆಲಿಕಾಪ್ಟರ್ ಹತ್ತಲು ಉತ್ಸಾಹದಿಂದ ಬೇರೆ ಬೇರೆ ಊರುಗಳಿಂದ ಆಗಮಿಸಿದ್ದರು.

ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಮುಂಭಾಗ ಜರುಗಿದ ರಂಗೋಲಿ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ ಮತ್ತಿತರ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಜರುಗಿದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಬಹುಮಾನ ವಿತರಣೆ ಮಾಡಿದರು. ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ವಿಜಯನಗರ ಕಾಲದ ಸಂವಹನ ವ್ಯವಸ್ಥೆ, ಮಹಿಳೆಯರ ಸ್ಥಿತಿಗತಿ ಸೇರಿದಂತೆ ವಿವಿಧ ಸಾಹಿತ್ಯ ಗೋಷ್ಠಿಗಳು ಜರುಗಿದವು. ಬಳಿಕ ಜರುಗಿದ ಕವಿಗೋಷ್ಠಿಯಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ರಾಯಚೂರು, ಗದಗ, ಬೆಂಗಳೂರು, ಹಾವೇರಿ, ನಿಪ್ಪಾಣಿ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ೩೮ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಮತ್ಸ್ಯಮೇಳದಲ್ಲಿ ೬೦ಕ್ಕೂ ಹೆಚ್ಚು ವಿವಿಧ ಬಗೆಯ ತಳಿಗಳಿದ್ದವು. ಅಲಂಕಾರಿಕ ಮೀನುಗಳು, ವಾಸ್ತುಮೀನುಗಳು ಹಾಗೂ ಆಹಾರ ಮೀನುಗಳು ಮೇಳದಲ್ಲಿದ್ದವು. ಅರವನ್ ಹೆಸರಿನ ಅಲಂಕಾರಿಕ ಮೀನು ಗಮನ ಸೆಳೆಯಿತು. ಇದರ ಬೆಲೆ ₹೬೦ ಸಾವಿರದಿಂದ ₹೧ ಲಕ್ಷ ರು.ವರೆಗೆ ಇರಲಿದೆ ಎಂದು ಸಂಘಟಕರು ತಿಳಿಸಿದರು. ಮತ್ಸ್ಯಮೇಳದಲ್ಲಿ ತುಂಗಭದ್ರಾ ಜಲಾಶಯದ ಮಾದರಿ ಗಮನ ಸೆಳೆಯಿತು.

ಹೊಸಪೇಟೆಗೆ ಬಂತು ಕಾಂಗ್ರೆಸ್ ದಂಡು:

ಹಂಪಿ ಉತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೆರೆಯ ಬಳ್ಳಾರಿ, ರಾಯಚೂರು ಜಿಲ್ಲೆಗಳ ಕಾಂಗ್ರೆಸ್ ನ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಹೊಸಪೇಟೆಗೆ ಆಗಮಿಸಿದ್ದು ವಿವಿಧ ಲಾಡ್ಜ್‌ಗಳಲ್ಲಿ ತಂಗಿದ್ದರು. ಸಂಜೆಯಾಗುತ್ತಿದ್ದಂತೆಯೇ ಕೈ ನಾಯಕರು ಮುಖ್ಯವೇದಿಕೆಯ ಕಡೆಗೆ ದುಬಾರಿ ವಾಹನಗಳೊಂದಿಗೆ ಬರುವ ದೃಶ್ಯ ಕಂಡು ಬಂತು.

ಸ್ವಚ್ಛತೆಗೆ ಇರಲಿಲ್ಲ ಆದ್ಯತೆ, ನಿರ್ವಹಣೆ ಕೊರತೆ:

ಉತ್ಸವಕ್ಕೆ ಬರುವ ವಾಹನ ನಿಲುಗಡೆಗಾಗಿ ೧೨೦ ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ವಿವಿಐಪಿ, ವಿಐಪಿ ಹಾಗೂ ಕಲಾವಿದರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಇತ್ತು. ವಿಜಯನಗರ ಜಿಲ್ಲೆಗಳ ಎಲ್ಲ ತಾಲೂಕುಗಳ ಗ್ರಾಮೀಣ ಪ್ರದೇಶಗಳಿಗೆ ಜನರನ್ನು ಕರೆತರಲು ಉಚಿತ ಬಸ್‌ಗಳನ್ನು ಬಿಡಲಾಗಿತ್ತು. ಆದರೆ, ಕಂಪ್ಲಿ, ಕುರುಗೋಡು ಉತ್ಸವ ಹಾಗೂ ಶಿವರಾತ್ರಿ ಹಬ್ಬ ಹಿನ್ನೆಲೆಯಲ್ಲಿ ಈ ಬಾರಿ ಗ್ರಾಮೀಣ ಭಾಗದಿಂದ ಹೆಚ್ಚಿನ ಜನರು ಹಂಪಿಯತ್ತ ಸುಳಿಯಲಿಲ್ಲ. ಉತ್ಸವಕ್ಕಾಗಿ ಬರುವ ಜನರು ಮಧ್ಯಾಹ್ನ ಊಟಕ್ಕಾಗಿ ಪರದಾಡಿದರು. ಜಿಲ್ಲಾಡಳಿತ ಅಥವಾ ದಾನಿಗಳ ನೆರವಿನಿಂದ ಲಘು ಉಪಹಾರ ಅಥವಾ ಊಟದ ವ್ಯವಸ್ಥೆ ಮಾಡಿರಲಿಲ್ಲ.

ಹೀಗಾಗಿ ರಸ್ತೆ ಬದಿಯ ಹೋಟೆಲ್‌ಗಳನ್ನು ಜನರು ಆಶ್ರಯಿಸಿದರು. ಉತ್ಸವಕ್ಕೆ ಬರುವವರಿಗೆ ಕುಡಿವ ನೀರು, ಸುಲಭ ಶೌಚಾಲಯದ ಕೊರತೆ ಎದುರಾಯಿತು. ಸ್ವಚ್ಛತೆಗೆ ಜಿಲ್ಲಾಡಳಿತ ಆದ್ಯತೆ ನೀಡಿದಂತೆ ಕಂಡು ಬರಲಿಲ್ಲ. ಶೌಚಾಲಯಗಳು ನಿರ್ವಹಣೆಯಿಲ್ಲದೇ ಗಬ್ಬು ನಾರುತ್ತಿದ್ದವು. ಹೀಗಾಗಿ ಜಲಬಾಧೆ ನೀಗಿಸಿಕೊಳ್ಳಲು ಜನರು ಪರದಾಡುವಂತಾಯಿತು.

ಹೊಸಪೇಟೆ ನಗರದಿಂದಲೇ ಹೆಚ್ಚಿನ ಸಂಖ್ಯೆಯ ಜನರನ್ನು ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ ನಿರೀಕ್ಷಿಸಿದೆ. ಸುಗಮ ಸಂಚಾರ ಹಾಗೂ ಜನದಟ್ಟಣೆ ನಿಯಂತ್ರಣಕ್ಕಾಗಿ ಹಂಪಿಯಲ್ಲಿ ನೂರಾರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮುಖ್ಯವೇದಿಕೆಗೆ ವಿಐಪಿ ಪಾಸ್ ಹಿಡಿದು ಆಗಮಿಸಿದ್ದ ರಾಜಕೀಯ ನಾಯಕರು ಹಾಗೂ ಪೊಲೀಸರ ನಡುವೆ ವಾಗ್ವಾದದ ಪ್ರಸಂಗಗಳು ನಿರಂತರವಾಗಿ ನಡೆದವು. ಪಾರ್ಕಿಂಗ್ ಸೇರಿದಂತೆ ಅನೇಕ ಕಡೆ ಪೊಲೀಸರ ಜೊತೆ ಸಾರ್ವಜನಿಕರು ಹಾಗೂ ರಾಜಕಾರಣಿಗಳು ವಾಗ್ವಾದ ನಡೆಸುತ್ತಿರುವ ದೃಶ್ಯ ಕಂಡು ಬಂದವು. ಉತ್ಸವದ ಮುಖ್ಯವೇದಿಕೆಯತ್ತ ಬರುವವರ ಸಂಖ್ಯೆ ಹೆಚ್ಚಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಯಿ ಮಂದಿರದ ಅವ್ಯವಹಾರ: ತನಿಖೆಗೆ ಕಮಿಟಿ ರಚನೆ
ಹಂಪಿಯ ಗತ ವೈಭವ ಸಾರಿದ ಐತಿಹಾಸಿಕ ರಾಜಬೀದಿ