ಕನ್ನಡಪ್ರಭ ವಾರ್ತೆ ಶಿರಸಿ
ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿರುವ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಧಿತ ಐದು ಮಂದಿಯಲ್ಲಿ ಇಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಯೇ ಇಲ್ಲ ಎಂದು ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾರೆ.
ಈ ವಿಚಾರವನ್ನು ಪೊಲೀಸರಿಗೂ ತಿಳಿಸಿರುವುದಾಗಿ ಆಕೆ ಹೇಳಿದ್ದಾಳೆ. ಇದರಿಂದಾಗಿ ಈಗಾಗಲೇ ರಾಜಕೀಯ ಜಟಾಪಟಿಗೆ ಕಾರಣವಾಗಿರುವ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಹಾನಗಲ್ನ ಸಾಂತ್ವನ ಕೇಂದ್ರದಲ್ಲಿದ್ದ ಮಹಿಳೆಯನ್ನು ಭಾನುವಾರ ದಿಢೀರ್ ಆಗಿ ಶಿರಸಿಯಲ್ಲಿರುವ ಆಕೆಯ ಊರಿಗೆ ಪೊಲೀಸರು ಬಿಟ್ಟು ಬಂದಿದ್ದು, ಈ ಸಂಬಂಧವೂ ಆಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.
ನನ್ನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಐದು ಮಂದಿಯನ್ನು ಬಂಧಿಸಿದ್ದು, ಇವರಲ್ಲಿ ಇಬ್ಬರು ನನ್ನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸಗಿಯೇ ಇಲ್ಲ.
ಪೊಲೀಸರು ಬಂಧಿತರಿಬ್ಬರ ಫೋಟೋ ತೋರಿಸಿದ್ದು, ಅವರಿಬ್ಬರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಲ್ಲ ಎಂದು ಹೇಳಿದ್ದೇನೆ. ಜತೆಗೆ, ನನ್ನ ಮೇಲೆ ನಡೆದ ದೌರ್ಜನ್ಯದ ವಿಡಿಯೋದಲ್ಲೂ ಆ ಇಬ್ಬರು ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಭದ್ರತೆ ಒದಗಿಸಿಲ್ಲ: ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ನನ್ನನ್ನು ಹಾನಗಲ್ ಪೊಲೀಸರು ಸ್ಥಳ ಪರಿಶೀಲನೆ ಎಂದು ಹೇಳಿ ಇದೀಗ ಮನೆಗೆ ತಂದು ಬಿಟ್ಟಿದ್ದಾರೆ. ನನ್ನ ಕುಟುಂಬಸ್ಥರಿಗೂ ಮಾಹಿತಿ ನೀಡದೆ ಬಿಟ್ಟು ಹೋಗಿದ್ದಾರೆ. ಜೀವ ಭಯವಿದ್ದರೂ ಪೊಲೀಸರನ್ನು ಮನೆ ಬಳಿ ಭದ್ರತೆಗೆ ನಿಯೋಜಿಸಿಲ್ಲ ಎಂದು ಸಂತ್ರಸ್ತೆ ಮತ್ತು ಆಕೆಯ ಪತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯ ಸಿಗುವ ನಿರೀಕ್ಷೆ ಇಲ್ಲಬಿಜೆಪಿ ಮಹಿಳಾ ನಿಯೋಗ ಹಾಗೂ ಮುಖಂಡರು ಸಂತ್ರಸ್ತೆಯನ್ನು ಭೇಟಿಯಾಗುತ್ತಾರೆ ಎಂದು ತಿಳಿದು ಆಕೆಯನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಇಂಥವರಿಂದ ಸಂತ್ರಸ್ತೆಗೆ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.