ಸುಳ್ಳು ದಾಖಲಾತಿ ನೀಡಿ ಹಂದಿ ಜೋಗಿಸ್ ಸವಲತ್ತು ಕಬಳಿಕೆ

KannadaprabhaNewsNetwork |  
Published : Jan 18, 2026, 01:30 AM IST
 | Kannada Prabha

ಸಾರಾಂಶ

ಅಕ್ರಮವಾಗಿ ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡು ನಮ್ಮ ಜನಾಂಗಕ್ಕೆ ಸೇರಿಬೇಕಾದ ಸರ್ಕಾರದ ಸೌಲಭ್ಯಗಳು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ಹಂದಿಜೋಗಿಸ್ ಜನಾಂಗದ ಜಾತಿ ಪ್ರಮಾಣಪತ್ರಗಳನ್ನು ಇತರೆ ಜನಾಂಗದವರು ಸುಳ್ಳು ದಾಖಲೆಗಳನ್ನು ನೀಡಿ ಅಕ್ರಮವಾಗಿ ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡು ನಮ್ಮ ಜನಾಂಗಕ್ಕೆ ಸೇರಿಬೇಕಾದ ಸರ್ಕಾರದ ಸೌಲಭ್ಯಗಳು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಹಂದಿಜೋಗಿಸ್ ಸಂಘದ ಅಧ್ಯಕ್ಷ ಎಚ್.ಆರ್.ಮುಕುಂದ ಅವರು ಆರೋಪಿಸಿದ್ದಾರೆ.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣಾಧಿಕಾರಿ, ತಹಸೀಲ್ದಾರ್ ಸೇರಿದಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಹೆಳವ ಜನಾಂಗದವರು ಹಂದಿ ಸಾಕುವ ಹಾಗೂ ಹಂದಿ ಮಾರಾಟ ಮಾಡುವ ಹೆಸರಿನಲ್ಲಿ ನಾವೇ ಹಂದಿಜೋಗಿಸ್ ಎಂದು ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡು ನಿಜವಾದ ಹಂದಿಜೋಗಿಸ್ ಜನಾಂಗದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಗುಬ್ಬಿ ತಾಲೂಕಿನ ಸಾತೇನಹಳ್ಳಿಯ ನಲ್ಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂ. 49ರಲ್ಲಿ ನಮ್ಮ ಜನಾಂಗಕ್ಕೆ ಮೀಸಲಾಗಿದ್ದ ೨ ಎಕರೆ ಜಮೀನಿನಲ್ಲಿ ಹೆಳವ ಜಾತಿಯವರು ತಾವು ಹಂದಿಜೋಗಿಸ್ ಎಂದು ಸುಳ್ಳು ದಾಖಲೆ ಒದಗಿಸಿ ಅಕ್ರಮವಾಗಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ತಾಲ್ಲೂಕಿನ ಬಂಗ್ಲೊಪಾಳ್ಯ ಸರ್ಕಾರಿ ಕಿರಿಯ ಶಾಲಾ ದಾಖಲಾತಿಗಳಲ್ಲಿ ಹೆಳವ ಜಾತಿ ಇರುತ್ತದೆ. ಸಾತೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವರ ಜಾತಿ ಹೆಳವ ಬದಲು ಹಂದಿ ಜೋಗಿಸ್ ಎಂದು ದಾಖಲಿಸಿರುತ್ತಾರೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಸಾಕಷ್ಟಿವೆ ಸರಿಯಾದ ತಪಾಸಣೆ ಮಾಡಿ ನಿಜವಾದ ಹಂದಿಜೋಗಿಸ್ ಜಾತಿಯವರಿಗೆ ನ್ಯಾಯ ನೀಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಡಾ.ಹೆಚ್.ವಿ.ರಂಗಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಕ್ಕೆ ಸೇರಿರುವ ಹಂದಿಜೋಗಿಸ್ ಜಾತಿಯವರಿಗೆ ಸಾಂವಿಧಾನಿಕವಾಗಿ ಸಿಗಬೇಕಾಗಿರುವ ಸವಲತ್ತು, ಅವಕಾಶಗಳನ್ನು ಅನ್ಯ ಜಾತಿಯವರು ಕಬಳಿಸಿ ನಮಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಪಾಲು ನಮಗೆ, ನಿಮ್ಮ ಪಾಲು ನಿಮಗೆ, ಆದರೆ ನಾವೆಲ್ಲಾ ಒಟ್ಟಿಗೆ ಎಂಬ ಆಶಯದೊಂದಿಗೆ ಈ ಹೋರಾಟ ಮಾಡುತ್ತಿದ್ದೇವೆ ಎಂದರು.

ಸಂಘದ ರಾಜ್ಯ ಸಂಚಾಲಕ ವೆಂಕಟರಾಮಯ್ಯ ಮಾತನಾಡಿ, ಹೆಳವ ಜಾತಿಗೆ ಸೇರಿದ ನಗರದ ರಾಮಕ್ಕ ಎಂಬುವರು ಸಂಘಟನೆ ಮೂಲಕ ಹೆಳವರಿಗೆ ಹಂದಿಜೋಗಿಸ್ ಜಾತಿ ಪ್ರಮಾಣಪತ್ರ ಪಡೆಯಲು ಸಹಕರಿಸುತ್ತಿದ್ದಾರೆ. ಸುಳ್ಳು ದಾಖಲಾತಿ ನೀಡಿ ಪಡೆದ ಹಂದಿಜೋಗಿಸ್ ಜಾತಿ ಪ್ರಮಾಣಪತ್ರವನ್ನು ತಕ್ಷಣ ರದ್ದುಪಡಿಸಬೇಕು ಹಾಗೂ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಗುಬ್ಬಿ ತಾಲೂಕು ಸಾತೇನಹಳ್ಳಿಯಲ್ಲಿ ಹಂದಿಜೋಗಿಸ್ ಜನಾಂಗಕ್ಕೆ ಮೀಸಲಾದ 2 ಎಕರೆ ಜಮೀನಿನಲ್ಲಿ ಅಕ್ರಮ ನಿವೇಶನಗಳನ್ನು ಪಡೆದುಕೊಂಡಿರುವ ವೆಂಕಟೇಶ್ ಎಂಬುವವರ ಶಾಲಾ ದಾಖಲಾತಿಗಳಲ್ಲಿ ಅವರ ಜಾತಿ ಹೆಳವ ಎಂದಿದೆ. ಆದರೆ ಹಂದಿಜೋಗಿಸ್ ಎಂದು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಆಪಾದಿಸಿದರು.

ಹೈ ಕೊರ್ಟ್ ನ್ಯಾಯವಾದಿ ಎಚ್.ವಿ.ಮಂಜುನಾಥ್ ಮಾತನಾಡಿಹಂದಿಜೋಗಿಸ್ ಜಾತಿಗೆ ಸೇರಬೇಕಾದ ಸವಲತ್ತು, ಅವಕಾಶಗಳನ್ನು ಸುಳ್ಳು ದಾಖಲಾತಿ ನೀಡಿ ಕಬಳಿಸಿರುವ ಪ್ರಕರಣಗಳ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ಅದಕ್ಕೆ ಸಂಬಂಧಿಸಿದ ದಾಖಲೆ, ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು. ಸಂಘದ ಕಾರ್ಯದರ್ಶಿ ಚಂದ್ರಶೇಖರ್, ವಕ್ತಾರ ರಾಜಣ್ಣ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ.೨೭ಕ್ಕೆ ಕೆ.ಆರ್.ಪೇಟೆಗೆ ನಿಖಿಲ್ ಆಗಮನ: ಶಾಸಕ ಎಚ್.ಟಿ.ಮಂಜು
ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆ ಶಿಕ್ಷಾರ್ಹ: ನ್ಯಾ.ಕ್ರಾಂತಿ ಕಿರಣ್