ಬಂಗಾರಪೇಟೆ: ಚಾಮರಾಜನಗರ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ರೈತರ ಮೇಲೆ ನಡೆದಿರುವ ಗುಂಡಿನ ದಾಳಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ, ಮೃತಪಟ್ಟಿರುವ ಪ್ರತಿಯೊಬ್ಬ ರೈತರ ಕುಟುಂಬಕ್ಕೆ ತಲಾ ₹5 ಕೋಟಿ ಪರಿಹಾರ ನೀಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಸರ್ಕಾರವನ್ನು ಒತ್ತಾಯಿಸಿದರು.
ನೊಂದ ಕುಟುಂಬಗಳಿಗೆ ಅರಣ್ಯ ಸಚಿವರು ನ್ಯಾಯ ಒದಗಿಸದಿದ್ದರೆ ಆ.18ರಂದು ರಾಜ್ಯದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಅಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ರೈತರ ಮೇಲಿನ ಶೂಟೌಟ್ ಪ್ರಕರಣದ ಕುರಿತು ವಿರೋಧ ಪಕ್ಷಗಳು ಧ್ವನಿ ಎತ್ತಬೇಕು. ಪ್ರಕರಣದ ಸತ್ಯಾಸತ್ಯತೆ ಹೊರಬರಲು ನ್ಯಾಯಾಂಗ ತನಿಖೆ ನಡೆಸಿ, ಸಮಗ್ರ ವರದಿ ನೀಡಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಕದರಿನತ್ತ ಅಪ್ಪೋಜಿರಾವ್, ಮಂಗಸಂದ್ರ ತಿಮ್ಮಣ್ಣ, ಕಾ.ಹೋ.ಅ ಮುನಿಕೃಷ್ಣ, ಮುನಿರಾಜು, ವಿಶ್ವ, ಸಂತೋಷ್, ಲಕ್ಷ್ಮಣ್, ಚಾಂದ್ಪಾಷ, ಪುತ್ತೇರಿ ರಾಜು, ಗಿರೀಶ್, ಶೈಲಜ, ರಾಧಮ್ಮ, ಶೋಭಾ, ರತ್ನಮ್ಮ, ಚೌಡಮ್ಮ ಇದ್ದರು.