ಕಲಘಟಗಿ: ಯೋಗಿಗೆ ಯೋಗ, ಯೋಧನಿಗೆ ಕಾದಾಡುವ, ತಂದೆಗೆ ಮಕ್ಕಳ, ರೈತರಿಗೆ ಬೆಳೆಯ ಚಿಂತೆ ಇರುವಂತೆ ಶ್ರೀ ಗುರುವಿಗೆ ಶಿಷ್ಯನ ಉದ್ಧಾರದ ಚಿಂತೆ ಇರುತ್ತದೆ. ಶ್ರೀ ಗುರುವಿನ ಬೋಧಾಮೃತದಿಂದ ಜೀವನದಲ್ಲಿ ಸುಖ-ಶಾಂತಿ ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶುಕ್ರವಾರ ಪಟ್ಟಣದ ಶ್ರೀಮದ್ ರಂಭಾಪುರಿ ಶಾಖಾ ಹನ್ನೆರಡುಮಠದಲ್ಲಿ ಲಿಂ. ಶ್ರೀ ಮಡಿವಾಳ ಶಿವಾಚಾರ್ಯರ 34ನೇ ಪುಣ್ಯಸ್ಮರಣೋತ್ಸವ-ನೂತನ ಶ್ರೀಗಳ ಗುರು ಪಟ್ಟಾಧಿಕಾರ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೀವನದಲ್ಲಿ ಗುರಿ ಮತ್ತು ಗುರುವನ್ನು ಆಶ್ರಯಿಸಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ. ಲಿಂ. ಶ್ರೀ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಆದರ್ಶ ಗುರು ಪರಂಪರೆಗೆ ಶ್ರಮಿಸಿದರು. ಧರ್ಮಮುಖಿಯಾಗಿ ಸಮಾಜಮುಖಿಯಾಗಿ ನಿರ್ವಹಿಸಿದ ಶ್ರೇಯಸ್ಸು ಅವರದಾಗಿತ್ತು. ಇಂದಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ತಮ್ಮ ಉತ್ತರಾಧಿಕಾರಿಯನ್ನು ಗುರುತಿಸಿ ಇಂದು ಗುರು ಪಟ್ಟಾಧಿಕಾರ ನೆರವೇರಿಸಿದ್ದು, ಸಂತೋಷದ ಸಂಗತಿ. ಪಟ್ಟಾಭಿಷಿಕ್ತರಾದ ನೂತನ ಅಭಿನವ ಮಡಿವಾಳ ಶಿವಾಚಾರ್ಯರು ಶ್ರೀ ಮಠದ ಅಭಿವೃದ್ಧಿ ಮತ್ತು ಭಕ್ತರಿಗೆ ಅಮೂಲ್ಯ ಮಾರ್ಗದರ್ಶನ ನೀಡಲು ಎಂದು ಆಶಿಸಿ ರೇಶ್ಮೆ ಮಡಿ ಸ್ಮರಣಿಕೆ ಫಲವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಪಂಚಮುದ್ರಾ ಸಮೇತ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಲಿಂ. ಮಡಿವಾಳ ಶಿವಾಚಾರ್ಯರ 34ನೇ ವರ್ಷದ ಪುಣ್ಯಾರಾಧನೆ ಹಾಗೂ ಇಂದಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳ 71ನೇ ವರ್ಷದ ಜನ್ಮ ವರ್ಧಂತಿ ಆಚರಿಸಲಾಯಿತು. ಪಟ್ಟಾಭಿಷಿಕ್ತರಾದ ನೂತನ ಅಭಿನವ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮ ಪರಂಪರೆ–ಗುರುಸ್ಥಾನದ ಹಿರಿಮೆ ಹಾಗೂ ಸಕಲ ಧರ್ಮ ಬಾಂಧವರ ಏಳಿಗೆಗಾಗಿ ಸದಾ ಶ್ರಮಿಸುತ್ತೇವೆ. ಶ್ರೀ ರೇವಣಸಿದ್ಧ ಶಿವಾಚಾರ್ಯರಿಗೆ ಕೊಟ್ಟ ಸಹಕಾರ ಸೇವಾ ಮನೋಭಾವ ನಮ್ಮ ಕಾಲದಲ್ಲಿ ಇರಬೇಕು ಎಂದು ಬಯಸಿದರು. ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಅಭಿವೃದ್ಧಿ, ಭಕ್ತರ ಕಲ್ಯಾಣ ಮಾಡುವುದಾಗಿ ಸಂಕಲ್ಪ ಕೈಗೊಂಡರು.ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಧರ್ಮ ಸಮಾರಂಭವನ್ನು ಅ.ಭಾ. ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ನಂತರ ನೂತನ ಶ್ರೀಗಳ ಪಲ್ಲಕ್ಕಿ ಮಹೋತ್ಸವ ನಗರದಲ್ಲಿ ಸಂಭ್ರಮದಿಂದ ಜರುಗಿತು. ಅನ್ನ ದಾಸೋಹ ಜರುಗಿತು.