ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣಕಾಲೇಜಿನ ಅಭಿವೃದ್ಧಿಗಾಗಿ ನಾನು ಸದಾ ಕೈಜೋಡಿಸಿ ದುಡಿಯುವೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಬರವಸೆ ನೀಡಿದರು.ಇಲ್ಲಿನ ಹರವೆ ಮಲ್ಲರಾಜ ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಕ್ರೀಡಾ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ನೂತನ ಗ್ರಂಥಾಲಯದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಯುವನಿಧಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿ ಪದವಿ ವ್ಯಾಸಂಗದ ಮೂಲಕ ವಿದ್ಯಾರ್ಥಿ ತನ್ನ ಬದುಕನ್ನ ಉತ್ತಮವಾಗಿ ಕಟ್ಟಿಕೊಳ್ಳಬೇಕು ಕಾಲೇಜಿನ ವಿದ್ಯಾರ್ಥಿಗಳ ಮೂಲಭೂತ ಸಮಸ್ಯೆ ಬಗೆಹರಿಸಿ ಕೊಡುವೆ ಎಂದರು. ಸಿಡಿಸಿ ಉಪಾಧ್ಯಕ್ಷ ಬಸವರಾಜು ಮಾತನಾಡಿ ಪಿರಿಯಾಪಟ್ಟಣದಲ್ಲೇ ತುಂಬಾ ಹಳೆಯ ಕಾಲೇಜು ಆಗಿದ್ದು ಇಲ್ಲಿ ಓದಿದವರು ರಾಜ್ಯ ದೇಶ ವಿದೇಶದಲ್ಲಿ ಕೆಲಸ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪದವಿ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳಬೇಕು ಶಿಕ್ಷಣದ ಮಹತ್ವವನ್ನು ಅರಿತರೆ ನೀವೇ ನಿಮ್ಮ ಬದುಕಿನ ಶಿಲ್ಪಿಗಳಾಗುತ್ತೀರಿ. ಪ್ರತಿ ವರ್ಷ ಈ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು 25,000 ರೂಗಳನ್ನು ತಮ್ಮ ಧರ್ಮಪತ್ನಿ ದಿ. ಮಂಜುಳಾ ಬಸವರಾಜು ಅವರ ಹೆಸರಿನಲ್ಲಿ ನೀಡುವುದಾಗಿ ಹೇಳಿದರು.ಉದ್ಯಮಿ ನಿಂಗರಾಜು ಮಾತನಾಡಿ, ವಿದ್ಯಾರ್ಥಿಗಳ ಉತ್ತಮ ಭವಿಷ್ಯ ಕಟ್ಟಿಕೊಡುವುದೇ ಪದವಿ ಶಿಕ್ಷಣ ಉದ್ಯೋಗ ಉನ್ನತ ಶಿಕ್ಷಣ ಬದುಕು ಹೀಗೆ ನಾನಾ ಆಯ್ಕೆಗಳಿರುತ್ತದೆ. ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ಓದಿದರೆ ಅವರ ಬದುಕು ಉತ್ತಮವಾಗುತ್ತದೆ. ಉತ್ತಮ ಶಿಕ್ಷಣ ಉತ್ತಮ ಪ್ರಜೆಯನ್ನ ರೂಪಿಸುತ್ತದೆ ಎಂದರು.ಕಾಲೇಜಿನಲ್ಲಿ ಪಿಎಚ್.ಡಿ ಪದವಿ ಪಡೆದ ಡಾ. ಸ್ವಾತಿ ಡಾ. ಮಹೇಂದ್ರ, ಡಾ. ಸಂಧ್ಯಾ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು.ಕಾಲೇಜಿನ ಪ್ರಾಂಶುಪಾಲ ಪ್ರೊ. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಸದಸ್ಯರಾದ ಎಚ್.ಎಸ್. ಪುಟ್ಟರಾಜು, ಹರೀಶ್, ಅಜೀಜ್, ಮಲ್ಲಾರಾಧ್ಯ, ಕಾಲೇಜಿನ ಪ್ರಾಧ್ಯಾಪಕರಾದ ವಿಶ್ವನಾಥ್, ರೂಪಾ, ರಾಜಗೋಪಾಲ್, ಡಾ. ಶೈಲಾಶ್ರೀ, ಸಾಗರ್, ಅಧೀಕ್ಷಕಿ ಬಿ.ಜಿ. ಕವಿತಾ, ಹಿರಿಯ ಅತಿಥಿ ಉಪನ್ಯಾಸಕರಾದ ಕೆ.ಪಿ. ಅನಿತಾ ಇದ್ದರು.ಅತಿಥಿ ಉಪನ್ಯಾಸಕ ಕೆ. ನಂಜುಂಡಸ್ವಾಮಿ ನಿರೂಪಿಸಿದರು. ಡಾ. ವಿಜಯ ಕುಮಾರಿ ಪ್ರಾರ್ಥಿಸಿದರು ರಾಜಗೋಪಾಲ್ ವಂದಿಸಿದರು.