ಹಾಸನ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂಲ್ಕಿಯ ಮಹಿಳೆ ಸಾವು

KannadaprabhaNewsNetwork |  
Published : Jul 29, 2026, 02:45 AM IST
ಶಶಿಪ್ರಭಾ | Kannada Prabha

ಸಾರಾಂಶ

ರಾ.ಹೆ.75ರ ಹಾಸನ ಸಮೀಪದ ಚೌಡೇನಹಳ್ಳಿ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಮೂೂಲ್ಕಿ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಕಾರಿನಲ್ಲಿದ್ದ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೂಲ್ಕಿ: ರಾ.ಹೆ.75ರ ಹಾಸನ ಸಮೀಪದ ಚೌಡೇನಹಳ್ಳಿ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಮೂೂಲ್ಕಿ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಕಾರಿನಲ್ಲಿದ್ದ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಕಾರ್ನಾಡ್ ಕೆ.ಎಸ್. ರಾವ್ ನಗರ ಕೊರಂಟಬೆಟ್ಟು ನಿವಾಸಿ, ಮುಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ದಿ. ಶಶಿಕಾಂತ್ ಶೆಟ್ಟಿ ಅವರ ಸಹೋದರಿ ಶಶಿಪ್ರಭಾ (47) ಮೃತರು. ಗಾಯಾಳುಗಳಾದ ಕಾರ್ಕಳ ನಿವಾಸಿ ದಿನೇಶ್ (34), ಮಂಡ್ಯ ನಿವಾಸಿ ಸುಜನ್ (20) ಹಾಗೂ ಕಾರು ಚಾಲಕ ಅಖಿಲ್ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಶಿಪ್ರಭಾ ಅವರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ಬಳಿ ಹೋಟೆಲ್‌/ಡಾಬಾ ನಡೆಸುತ್ತಿದ್ದರು. ಭಾನುವಾರ ರಾತ್ರಿ ಕಾರಿನಲ್ಲಿ ತಮ್ಮ ಊರಾದ ಮುಲ್ಕಿಗೆ ಪ್ರಯಾಣಿಸುತ್ತಿದ್ದಾಗ, ರಾತ್ರಿ 1.10ರ ಸುಮಾರಿಗೆ ಚೌಡೇನಹಳ್ಳಿ ಬಳಿ ರಸ್ತೆಯಲ್ಲಿ ಹಂದಿಯೊಂದು ಸತ್ತು ಬಿದ್ದಿರುವುದನ್ನು ಗಮನಿಸಿ ಚಾಲಕ ಅಖಿಲ್ ಕಾರನ್ನು ನಿಧಾನಗೊಳಿಸಿ ಬದಿಗೆ ಸರಿಸಿದ್ದರು.

ಈ ಸಂದರ್ಭದಲ್ಲಿ ಹಿಂಭಾಗದಿಂದ ಅತಿ ವೇಗವಾಗಿ ಬಂದ ಫೋರ್ಡ್ ಕಾರು, ಸತ್ತಿದ್ದ ಹಂದಿಯ ಮೇಲೆಯೇ ಹರಿದು ಚಾಲಕನ ನಿಯಂತ್ರಣ ತಪ್ಪಿ ಶಶಿಪ್ರಭಾ ಪ್ರಯಾಣಿಸುತ್ತಿದ್ದ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದೆ.

ಅಪಘಾತದ ರಭಸಕ್ಕೆ ಶಶಿಪ್ರಭಾ ಪ್ರಯಾಣಿಸುತ್ತಿದ್ದ ಕಾರು ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ವೇಳೆ ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ಶಶಿಪ್ರಭಾ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಉಳಿದ ಮೂವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಶಶಿಪ್ರಭಾ ಅವರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳೂರಿನಲ್ಲಿ ಡಾಬಾ ನಡೆಸುತ್ತಿದ್ದ ಶಶಿಪ್ರಭಾ ಅವರು ಕಷ್ಟಪಟ್ಟು ದುಡಿಯುವ ಶ್ರಮಜೀವಿಯಾಗಿದ್ದರು. ಆಗಾಗ ತಮ್ಮ ಊರಾದ ಮುಲ್ಕಿಗೆ ಬಂದು ಹೋಗುತ್ತಿದ್ದರು. ಅಪಾರ ದೈವಭಕ್ತಿಯಾಗಿದ್ದ ಅವರು, ತಮ್ಮ ಸಾವಿಗೂ ಅರ್ಧ ಗಂಟೆ ಮುಂಚೆಯಷ್ಟೇ ಮೂಲ್ಕಿ ಕೊಲಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಅವರ ಬಳಿ ಫೋನ್‌ನಲ್ಲಿ ಮಾತನಾಡಿ ತಮ್ಮ ಮನೆಯಲ್ಲಿ ಪೂಜೆ ನಡೆಸುವ ಬಗ್ಗೆ ಚರ್ಚಿಸಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕಿದಿಯೂರು ಕ್ರೆ.ಕೋ.ಆಪ್ ಸೊಸೈಟಿ ಕಿನ್ನಿಮುಲ್ಕಿ ಶಾಖೆ ಶುಭಾರಂಭ
ಧರ್ಮ ಜಾಗೃತಿಗೆ ಚಾತುರ್ಮಾಸ್ಯ ಸ್ಫೂರ್ತಿ: ಏಲಾಚಾರ್ಯ ಮುನಿಶ್ರೀ