;Resize=(412,232))
ಹಾವೇರಿ : 15 ದಿನಗಳ ಹಿಂದಷ್ಟೇ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಭಾನುವಾರ ನಸುಕಿನ ಜಾವ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಶಿಗ್ಗಾಂವಿ ತಾಲೂಕು ಕಡಹಳ್ಳಿ ಗ್ರಾಮದ ಬಳಿ ಸಂಭವಿಸಿದೆ.
ಹಾವೇರಿ ನಗರದ ಕಾರ್ತಿಕ ಹೂಗಾರ (33), ಪತ್ನಿ ಐಶ್ವರ್ಯ ಹೂಗಾರ್ (26) ಸ್ಥಳದಲ್ಲೇ ಮೃತಪಟ್ಟವರು. ಹುಬ್ಬಳ್ಳಿ ಕಡೆಯಿಂದ ಶಿಗ್ಗಾಂವಿ ಕಡೆಗೆ ಬರುತ್ತಿದ್ದ ವ್ಯಾಗನ್-ಆರ್ ಕಾರು ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಹಾವೇರಿಯ ಹಿರಿಯ ಪತ್ರಕರ್ತ ಗಂಗಾಧರ ಹೂಗಾರ ಅವರ ಪುತ್ರ. ಫೆ.13ರಂದು ಮದುವೆಯಾಗಿದ್ದ ಈ ಜೋಡಿ ನವಲಗುಂದ ಕಾಮಣ್ಣನಿಗೆ ಪೂಜೆ ಸಲ್ಲಿಸಿ ಮರಳಿ ಹಾವೇರಿಗೆ ಬರುವಾಗ ಈ ದುರ್ಘಟನೆ ನಡೆದಿದೆ.