ರಾಮನಗರ: ರಾಮನಗರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸೆಗಾರರಿಗೆ ಅಕ್ರಮವಾಗಿ ವೋಟರ್ ಐಡಿ ನೀಡುವ ಸ್ಕ್ಯಾಮ್ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿಯವರು ಅದಕ್ಕೆ ಪೂರಕ ದಾಖಲೆಗಳನ್ನು ನೀಡಲಿ. ಅದು ಸಾಧ್ಯವಾಗದಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಜಿಲ್ಲಾಧ್ಯಕ್ಷ ಅಮ್ಜದ್ ಷರೀಫ್ ಒತ್ತಾಯಿಸಿದರು.
ಕುಮಾರಸ್ವಾಮಿಯವರು ತೋರಿಸಿದ ವಿಡಿಯೋದಲ್ಲಿ ಸಮುದಾಯ ಭವನದಲ್ಲಿ ಜನರನ್ನು ಕೂರಿಸಿ ಪರಿಶೀಲನೆ ನಡೆಸುತ್ತಿರುವ ದೃಶ್ಯ ಇದೆ. ಅದನ್ನು “ಅಕ್ರಮ ಬಾಂಗ್ಲಾದೇಶಿ ವಲಸೆಗಾರರಿಗೆ ಅಕ್ರಮವಾಗಿ ವೋಟರ್ ಐಡಿ ನೀಡುವ ಸ್ಕ್ಯಾಮ್'''''''' ಎಂದು ಬಣ್ಣಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಸಾಮುದಾಯಿಕ ದ್ವೇಷ ಹರಡುವ ರಾಜಕೀಯ ಪ್ರಯತ್ನ ಎಂದು ಟೀಕಿಸಿದರು.
ಎಸ್ ಐಆರ್ ಎಂಬುದು ಭಾರತೀಯ ಚುನಾವಣಾ ಆಯೋಗದ ಸಂವಿಧಾನಬದ್ಧ ಕರ್ತವ್ಯ. ನಕಲು ಮತದಾರರು, ಮೃತಪಟ್ಟವರು ಮತ್ತು ಅರ್ಹತೆ ಇಲ್ಲದವರನ್ನು ತೆರವುಗೊಳಿಸಿ ಅರ್ಹ ಪ್ರಜೆಗಳನ್ನು ಸೇರಿಸುವ ಪ್ರಕ್ರಿಯೆ. ಇದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ರಾಮನಗರದಲ್ಲಿ ಬಿಎಲ್ ಒಗಳು ದಕ್ಷತೆಗಾಗಿ ಸಾಮೂಹಿಕ ಕೇಂದ್ರಗಳಲ್ಲಿ ಪರಿಶೀಲನೆ ಮಾಡಿದ್ದು, ಇದು ನಿಯಮ ಉಲ್ಲಂಘನೆಯಾಗಿದ್ದರೆ ತನಿಖೆಯಾಗಬೇಕು. ಆದರೆ, ಅದನ್ನು ಸಂಪೂರ್ಣವಾಗಿ ಅಕ್ರಮ ವಲಸೆಗಾರರ ಸಮಸ್ಯೆ ಎಂದು ಸಾಮಾನ್ಯೀಕರಿಸಿ ವಿಶೇಷವಾಗಿ ಮುಸ್ಲಿಂ ಬಹುಳ್ಯ ಪ್ರದೇಶಗಳೊಂದಿಗೆ ಜೋಡಿಸುವುದು ಸುಳ್ಳು ಮತ್ತು ದ್ವೇಷಪೂರಿತ ಎಂದು ದೂರಿದರು.ಕೋಮು ವಿಷ ಹರಡುವ ವರ್ತನೆ:
ಚುನಾವಣಾ ಆಯೋಗವು ಎಸ್ಐಆರ್ ಪ್ರಕ್ರಿಯೆಯನ್ನು ಪೂರ್ಣ ಪಾರದರ್ಶಕತೆಯಿಂದ ಮನೆ-ಮನೆ ಪರಿಶೀಲನೆಯ ಮೂಲಕ ನಡೆಸಬೇಕು ಮತ್ತು ಯಾವುದೇ ರಾಜಕೀಯ ಪ್ರೇರಿತ ಹಸ್ತಕ್ಷೇಪವನ್ನು ಎಚ್ಚರಿಕೆಯಿಂದ ನೋಡಬೇಕು. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆ ಮತ್ತು ಸಾರ್ವಜನಿಕ ವಿಷಯಗಳನ್ನು ಸಾಮುದಾಯಿಕ ಧ್ರುವೀಕರಣ ಮತ್ತು ದ್ವೇಷ ಪ್ರಚಾರಕ್ಕೆ ಬಳಸಬಾರದು ಎಂದು ಅಮ್ಜದ್ ಷರೀಫ್ ಹೇಳಿದರು.
4ಕೆಆರ್ ಎಂಎನ್ 3.ಜೆಪಿಜಿ