ಜಲ್ಲಿ ಕ್ರಷರ್‌ನ ಟಿಪ್ಪರ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಬರದಲ್ಲಿ ಬಸ್‌ನ ಹಿಂಭಾಗಕ್ಕೆ ಟಿಪ್ಪರ್ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ.

ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ಡಿಕ್ಕಿಯಾಗಿ, ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿಯಾಗಿ ಚಾಲಕ ಸೇರಿದಂತೆ ಎಂಟು ಜನರಿಗೆ ಗಂಭೀರ ಗಾಯಗಳಾಗಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಮುದ್ದೇನಹಳ್ಳಿ ವಿಟಿಯು ಕ್ಯಾಂಪಸ್ ಬಳಿ ಶನಿವಾರ ನಡೆದಿದೆ.

ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದ 26 ಜನ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ ಕಣಿವೆ ನಾರಾಯಣಪುರ - ಮುದ್ದೇನಹಳ್ಳಿ ವಿಟಿಯು ಕ್ಯಾಂಪಸ್ ಬಳಿಯ ಕ್ರಾಸ್‌ನಲ್ಲಿ ಎದುರಿನಿಂದ ಬರುತ್ತಿದ್ದ ಜಲ್ಲಿ ಕ್ರಷರ್‌ನ ಟಿಪ್ಪರ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಬರದಲ್ಲಿ ಬಸ್‌ನ ಹಿಂಭಾಗಕ್ಕೆ ಟಿಪ್ಪರ್ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಚಾಲಕ ಜಯಚಂದ್ರ ಸೇರಿದಂತೆ ಎಂಟು ಮಂದಿಗೆ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಉಳಿದ 18 ಜನ ಸಣ್ಣಪುಟ್ಟ ಗಾಯಗಗಿದ್ದು, ಗಾಯಾಳುಗಳಿಗೆ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಶ್ರೀ ಮಧುಸೂಧನ ಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಚಿಂತಾಜನಕವಾಗಿರುವ ಮೂವರಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದನಿಂಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ನಂದಿ ಗಿರಿಧಾಮ ಪೋಲಿಸ್ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಕೆಬಿ-4 ಅಪಘಾತದಲ್ಲಿ ಪಲ್ಟಿಯಾಗಿರುವ ಕೆಎಸ್ ಆರ್ ಟಿಸಿ ಬಸ್