ಕನ್ನಡಪ್ರಭ ವಾರ್ತೆ ಕುಣಿಗಲ್ ತಾಲೂಕು ಹಾಗೂ ಪಟ್ಟಣದಲ್ಲಿ ಬಿ ಎಲ್ ಒಗಳು ಎಸ್ಐಆರ್ ಮಾಡುವ ಸಂದರ್ಭದಲ್ಲಿ ಎನ್ ಡಿ ಎ ಕಾರ್ಯಕರ್ತರು ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ದೀಪಕ್ ಆರೋಪಿಸಿದ್ದಾರೆ. ಕುಣಿಗಲ್ ಪಟ್ಟಣದ ಶಾಸಕರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮತಪರಿಷ್ಕರಣೆಗಾಗಿ ತಮ್ಮ ಅಂಗನವಾಡಿ ಕಚೇರಿಯಲ್ಲಿ ಮತದಾರರ ಅರ್ಜಿ ಫಾರ್ಮಗಳನ್ನು ವಿಂಗಡಣೆ ಮಾಡುವ ಸಂದರ್ಭದಲ್ಲಿ ಕೆಲವು ಸಾರ್ವಜನಿಕರು ಅಲ್ಲಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮುಖಾಂತರ ಅಧಿಕಾರಿಗಳ ಮನಸ್ಥಿತಿ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಡಿಎಸ್ ಅಧ್ಯಕ್ಷ ಬಿ ಎನ್ ಜಗದೀಶ್ ಅವರು ಯಾವುದೋ ಮನೆಯಲ್ಲಿ ಕುಳಿತು ಎಂದು ಹೇಳಿದ್ದಾರೆ. ಅದು ಅಂಗನವಾಡಿ ಕಚೇರಿ ಬೇಕಾದರೆ ಒಮ್ಮೆ ಅವರು ಸ್ಥಳಕ್ಕೆ ಭೇಟಿ ನೀಡಲಿ. ಅಧಿಕಾರಿಗಳನ್ನು ಸರ್ಕಾರ ನಿಯೋಜನೆ ಮಾಡಿದೆ ಎಂದರು. ತಾಲೂಕಿನಲ್ಲಿ ಇರುವ ಮತದಾರರ ಜೊತೆಯಲ್ಲಿ ಬಾಂಗ್ಲಾ ದೇಶದ ಮತದಾರರಿದ್ದಾರೆ ಎಂದು ಬಿಎನ್ ಜಗದೀಶ್ ಹೇಳಿಕೆ ನೀಡಿರುವುದು ಖಂಡನೀಯ ಅಂತಹ ಅಕ್ರಮ ನುಸುಳುಕೋರರು ಕುಣಿಗಲ್ ಪಟ್ಟಣ ಅಥವಾ ತಾಲೂಕಿನ ವ್ಯಾಪ್ತಿಯಲ್ಲಿ ಇದ್ದರೆ ನಮಗೆ ದಾಖಲಾತಿ ನೀಡಲಿ. ನಾವು ಅದನ್ನು ಅಧಿಕಾರಿಗಳ ಸಮೇತ ಪರಿಶೀಲಿಸುತ್ತೇವೆ ಅದನ್ನು ಹೊರತುಪಡಿಸಿ ಸುಮ್ಮನೆ ದಾಖಲೆ ರಹಿತವಾಗಿ ಹೇಳಿಕೆ ನೀಡಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಲೋಹಿತ್, ಯಾಚಘಟ್ಟ ಶಿವು , ಸೋಮಸುಂದರ ಸೇರಿದಂತೆ ಇತರರು ಇದ್ದರು.