ಕನ್ನಡಪ್ರಭ ವಾರ್ತೆ ಅಫಜಲ್ಪುರ
ನಿಷ್ಕಳಂಕ ರಾಜಕೀಯ ನಾಯಕನ ಹೆಸರು ಕೆಡಿಸಲು ಬಿಜೆಪಿ ಮತ್ತು ಜೆಡಿಎಸ್ ಅನಗತ್ಯವಾಗಿ ಮುಡಾ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆನ್ನಿಗೆ ಹಿಂದುಳಿದ, ಶೋಷಿತ ವರ್ಗದ ಜನರು ನಿಂತಿದ್ದಾರೆ ಎಂಬುದು ವಿಪಕ್ಷಗಳು ಮರೆಯಬಾರದು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ.ಕೊರಬು ಹೇಳಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ವಿಚಾರದಲ್ಲಿ ನಾಟಕವಾಡುತ್ತಿರುವ ಬಿಜೆಪಿ-ಜೆಡಿಎಸ್ಗೆ ಜನರು ತಕ್ಕ ಪಾಠ ಕಲಿಸಬೇಕು.
1935ರಲ್ಲಿ ನಿಂಗಾ ಬಿನ್ ಜವರ ಅವರು 3.5 ಎಕರೆ ಜಾಗವನ್ನು ಹರಾಜಿನಲ್ಲಿ ಸ್ವಾಧೀನಪಡಿಸಿಕೊಂಡರು. ಬ್ರಿಟಿಷರ ಕಾಲದಲ್ಲಿ ಈ ಭೂಮಿಯನ್ನು ಬಿಡ್ಡಿಂಗ್ ಮೂಲಕ ಪಡೆಯಲಾಗಿದೆ ಎಂದು ದಾಖಲೆಗಳು ತೋರಿಸುತ್ತವೆ. ಆಗ ಹರಾಜು ಕೂಗಿದವರಿಗೆ ಜಮೀನು ನೀಡಲಾಗಿತ್ತು. ನಿಂಗನಿಗೆ ಈ ರೀತಿ ಭೂಮಿ ಮಂಜೂರಾಗಿದೆ. ಅವರಿಗೆ ಮೈಲಾರಯ್ಯ, ಮಲ್ಲಯ್ಯ ಮತ್ತು ದೇವರಾಜು ಎಂಬ ಮೂವರು ಮಕ್ಕಳಿದ್ದರು.ಮೈಲಯ್ಯ ನಿಧನರಾಗಿದ್ದು, ಅವರ ಪತ್ನಿ ಪುಟ್ಟಗೌರಮ್ಮ ಈಗ ಬದುಕಿದ್ದಾರೆ. 3.15 ಎಕರೆಯನ್ನು ದೇವರಾಜು ಅವರಿಗೆ ಬಿಟ್ಟುಕೊಡಲಾಗಿದೆ. ದೇವರಾಜು ಅವರು 2004ರಲ್ಲಿ ಸಿದ್ದರಾಮಯ್ಯ ಅವರ ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಜಮೀನು ನೀಡಿದ್ದರು. ಮಲ್ಲಿಕಾರ್ಜುನ ಸ್ವಾಮಿ ಅವರು ಸಿದ್ದರಾಮಯ್ಯ ಅವರ ಪತ್ನಿಗೆ ಗಿಫ್ಟ್ ಡೀಡ್ನಲ್ಲಿ ಜಮೀನು ನೀಡಿದ್ದಾರೆ. ಮುಡಾ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ನಂತರ ಅದನ್ನು ನಿವೇಶನಗಳಾಗಿ ಮಂಜೂರು ಮಾಡಿತು.
ಸಿದ್ದರಾಮಯ್ಯ ಅವರ ಪತ್ನಿ ಈ ಕ್ರಮವನ್ನು ಪ್ರಶ್ನಿಸಿ ಮುಡಾಕ್ಕೆ ಪತ್ರ ಬರೆದು ಭೂಮಿಯನ್ನು ಹಿಂದಿರುಗಿಸುವಂತೆ ಅಥವಾ ಅದಕ್ಕೆ ಸಮಾನವಾದ ನಿವೇಶನವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಅದರಂತೆ ಆಕೆಗೆ 50:50 ಅನುಪಾತದಲ್ಲಿ ನಿವೇಶನ ನೀಡಲಾಗಿದೆ. ನಿವೇಶನ ಮಂಜೂರು ಮಾಡುವಾಗ ಬಿಜೆಪಿ ಅಧಿಕಾರದಲ್ಲಿತ್ತು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡ ಮುಡಾದಲ್ಲಿ ಅರ್ಜಿ ಸಲ್ಲಿಸಿ 21 ಸಾವಿರ ಚ.ಅಡಿ ನಿವೇಶನ ಪಡೆದಿದ್ದಾರೆ. ಅವರಿಗೆ ನಿವೇಶನ ಹೇಗೆ ಮಂಜೂರು ಮಾಡಲಾಯಿತು? ಸಾ.ರಾ. ಮಹೇಶ್, ಜಿ.ಟಿ. ದೇವೇಗೌಡ ಕೂಡ ನಿವೇಶನ ಪಡೆದಿದ್ದಾರೆ. ಅವುಗಳ ಬಗ್ಗೆ ಏಕೆ ಚರ್ಚೆ ನಡೆಯುತ್ತಿಲ್ಲ? ಸಿದ್ದರಾಮಯ್ಯನವರಿಗೆ ನಿವೇಶನ ಸಿಕ್ಕರೆ ಮಾತ್ರ ಹಗರಣವೇ? ಕುಮಾರಸ್ವಾಮಿ ಅವರು ಮೈಸೂರು ನಿವಾಸಿಯಾಗಿದ್ದು, ನಿವೇಶನ ಬೇಕು ಎಂದು ಅರ್ಜಿಯಲ್ಲಿ ಬರೆದಿದ್ದರು.ಸಿದ್ದರಾಮಯ್ಯ ಹಗರಣದಲ್ಲಿ ಭಾಗಿಯಾಗಿಲ್ಲ, ಹಂಚಿಕೆಯಲ್ಲಿ ಅವರ ಕುರುಹು ಇಲ್ಲ, ಬಿಜೆಪಿ ಅಧಿಕಾರಾವಧಿಯಲ್ಲಿಯೇ ಅಕ್ರಮ ನಡೆದಿದೆ. ಈಗ ಅವರ ಮೈಸೂರು ಪಾದಯಾತ್ರೆಯ ಉದ್ದೇಶವೇನು? ಈಗಾಗಲೇ ಆರೋಪ ಮಾಡಿರುವ ಅಕ್ರಮಗಳ ತನಿಖೆ ಪ್ರಗತಿಯಲ್ಲಿದೆ. ಬಿಜೆಪಿ ಪಾದಯಾತ್ರೆಯ ಉದಾತ್ತ ಗುರಿ ಏನೆಂಬುದು ನನಗೂ ಗೊತ್ತಾಗಿದೆ. ಹೀಗಾಗಿ ಮೈಸೂರು ಚಲೋ ಪಾದಯಾತ್ರೆಯಿಂದ ಸಿದ್ದರಾಮಯ್ಯನವರ ಹೆಸರಿಗೆ ಕಳಂಕ ತರಲು ಸಾಧ್ಯವಿಲ್ಲ,ಇದನ್ನು ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.