ಆರೋಗ್ಯ ಇಲಾಖೆ ಡಿಕಾಯ್ ಕಾರ್ಯಾಚರಣೆ ಯಶಸ್ವಿ

KannadaprabhaNewsNetwork |  
Published : Jul 31, 2026, 01:15 AM IST
    ಸಿಕೆಬಿ-2 ಅಕ್ರಮ ಗರ್ಭಪಾತ ನಡೆಸಲಾಗುತ್ತಿದೆ ಎಂಬ ಗೌಪ್ಯ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಪಿಸಿ-ಪಿಎನ್‌ಡಿಟಿ ವಿಭಾಗದ ಅಧಿಕಾರಿಗಳು ಚಿಂತಾಮಣಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವಿಚಾರಣೆ ನಡೆಸುತ್ತಿರುವುದು | Kannada Prabha

ಸಾರಾಂಶ

ಬೆಂಗಳೂರು ಹಾಗೂ ಮಂಡ್ಯ ಭಾಗಗಳಿಂದ ಗರ್ಭಿಣಿಯರನ್ನು ಜಿಲ್ಲೆಯ ಚಿಂತಾಮಣಿ ನಗರಕ್ಕೆ ಕರೆತಂದು ಭ್ರೂಣ ಲಿಂಗ ಪತ್ತೆ ಹಾಗೂ ಅಕ್ರಮ ಗರ್ಭಪಾತ ನಡೆಸಲಾಗುತ್ತಿದೆ.

ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಜಾಲ ಪತ್ತೆ ಕಾರ್ಯಾಚರಣೆ । ಏಜೆಂಟ್, ಗರ್ಭಪಾತದ ಮಾತ್ರೆಗಳು, ಮಹತ್ವದ ಸಾಕ್ಷ್ಯ ವಶಕ್ಕೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡಿ, ಹೆಣ್ಣು ಮಗು ಎಂದು ತಿಳಿದರೆ ಗರ್ಭಪಾತ ನಡೆಸಲಾಗುತ್ತಿದೆ ಎಂಬ ಆರೋಪದ ಜಾಲವನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸಿದ ''''''''ಡಿಕಾಯ್'''''''' ಕಾರ್ಯಾಚರಣೆ ಯಶಸ್ವಿಯಾಗಿದ್ದು, ಓರ್ವ ಮಹಿಳಾ ಏಜೆಂಟ್‌ನ್ನು ವಶಕ್ಕೆ ಪಡೆದು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಬೆಂಗಳೂರು ಹಾಗೂ ಮಂಡ್ಯ ಭಾಗಗಳಿಂದ ಗರ್ಭಿಣಿಯರನ್ನು ಜಿಲ್ಲೆಯ ಚಿಂತಾಮಣಿ ನಗರಕ್ಕೆ ಕರೆತಂದು ಭ್ರೂಣ ಲಿಂಗ ಪತ್ತೆ ಹಾಗೂ ಅಕ್ರಮ ಗರ್ಭಪಾತ ನಡೆಸಲಾಗುತ್ತಿದೆ ಎಂಬ ಗೌಪ್ಯ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಪಿಸಿ-ಪಿಎನ್‌ಡಿಟಿ ವಿಭಾಗದ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಕಳೆದ ಒಂದು ವಾರದಿಂದ ರಹಸ್ಯ ಕಾರ್ಯಾಚರಣೆ ರೂಪಿಸಿದ್ದರು.

ಕಾರ್ಯಾಚರಣೆಯ ಭಾಗವಾಗಿ ಆರೋಗ್ಯ ಇಲಾಖೆಯ ತಂಡ ನಕಲಿ ಗರ್ಭಿಣಿಯೊಬ್ಬರನ್ನು ಸಿದ್ಧ ಗೊಳಿಸಿ ಜಯಲಕ್ಷ್ಮಿ ಎಂಬ ಏಜೆಂಟ್ ಸಂಪರ್ಕಿಸಿತ್ತು. ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತಕ್ಕಾಗಿ 35,000 ರು.ಗಳನ್ನು ನೀಡುವಂತೆ ಏಜೆಂಟ್ ಬೇಡಿಕೆ ಇಟ್ಟಿದ್ದು, ಬಳಿಕ ಗರ್ಭಿಣಿಯನ್ನು ಕಾರಿನಲ್ಲಿ ಚಿಂತಾಮಣಿಯ ಕೇಂದ್ರವೊಂದಕ್ಕೆ ಕರೆತಂದಿದ್ದಳು ಎನ್ನಲಾಗಿದೆ.

ಆದರೆ ಅಧಿಕಾರಿಗಳ ಚಲನವಲನದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರದಲ್ಲಿದ್ದವರು ಸ್ಕ್ಯಾನಿಂಗ್ ಮಾಡಲು ನಿರಾಕರಿಸಿ ವಾಪಸ್ ಕಳುಹಿಸಲು ಯತ್ನಿಸಿದ್ದಾರೆ. ಈ ವೇಳೆ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳು ಹಾಗೂ ಪೊಲೀಸರು ಏಜೆಂಟ್ ಮತ್ತು ಆಕೆಯೊಂದಿಗೆ ಇದ್ದವರನ್ನು ತಡೆದು ವಿಚಾರಣೆಗೆ ಒಳಪಡಿಸಿದರು.

ಕಾರ್ಯಾಚರಣೆ ವೇಳೆ ಏಜೆಂಟ್ ಜೊತೆಗಿನ ದೂರವಾಣಿ ಸಂಭಾಷಣೆಯ ಆಡಿಯೋ ದಾಖಲೆಗಳು, ಗರ್ಭಿಣಿಯರ ಹೇಳಿಕೆಗಳು ಹಾಗೂ ಏಜೆಂಟ್ ಬ್ಯಾಗ್‌ನಲ್ಲಿದ್ದ ಗರ್ಭಪಾತದ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನು ಸಾಕ್ಷ್ಯವಾಗಿ ಪರಿಗಣಿಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ.

ಈ ವೇಳೆ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬೆಟ್ಟಸ್ವಾಮಿ ಮಾತನಾಡಿ, ಈ ಅಕ್ರಮದ ಹಿಂದೆ ಯಾವುದೇ ಆಸ್ಪತ್ರೆ, ನರ್ಸಿಂಗ್ ಹೋಮ್ ಅಥವಾ ವೈದ್ಯರ ಕೈವಾಡವಿದೆಯೇ ಎಂಬ ಬಗ್ಗೆ ಹಿಮ್ಮುಖ ತನಿಖೆ ನಡೆಸಲಾಗುವುದು. ತನಿಖೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಇಂದಿನ ಸಮಾಜದಲ್ಲಿ ಗಂಡು-ಹೆಣ್ಣು ಎಂಬ ಭೇದಭಾವಕ್ಕೆ ಅವಕಾಶವಿಲ್ಲ. ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಭ್ರೂಣ ಹತ್ಯೆ ಗಂಭೀರ ಅಪರಾಧವಾಗಿದ್ದು, ಇಂತಹ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಸಿಕೆಬಿ-2 ಅಕ್ರಮ ಗರ್ಭಪಾತ ನಡೆಸಲಾಗುತ್ತಿದೆ ಎಂಬ ಗೌಪ್ಯ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಪಿಸಿ-ಪಿಎನ್‌ಡಿಟಿ ವಿಭಾಗದ ಅಧಿಕಾರಿಗಳು ಚಿಂತಾಮಣಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವಿಚಾರಣೆ ನಡೆಸುತ್ತಿರುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ ರೋಸ್ಟರ್ ತಿದ್ದುಪಡಿಗೆ ಆಗ್ರಹಿಸಿ ಲಂಬಾಣಿ ಸಮಾಜದಿಂದ ಮನವಿ
ವಿಷಾಹಾರದಿಂದ 57 ವಿದ್ಯಾರ್ಥಿಗಳು ಅಸ್ವಸ್ಥ: ಭುಗಿಲೆದ್ದ ಆಕ್ರೋಶ