- ಮುತ್ತಿನಕೊಪ್ಪದಲ್ಲಿ ಹದಿಹರೆಯದ ಮಕ್ಕಳಿಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಹದಿಹರೆಯದ ಮಕ್ಕಳಲ್ಲಿ ಹೆಚ್ಚಾಗಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕಂಡು ಬರುತ್ತದೆ. ಈ ವಯಸ್ಸಿನಲ್ಲಿ ಹದಿ ಹರೆಯದ ಆರೋಗ್ಯ ಶಿಕ್ಷಣ ಅತಿಮುಖ್ಯ ಎಂದು ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ಹೇಳಿದರು.
ಶುಕ್ರವಾರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಶಾಲೆಯಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ, ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹದಿಹರೆಯದ ಮಕ್ಕಳಿಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 10 ರಿಂದ 19 ವರ್ಷ ವಯಸ್ಸಿನ ಮಕ್ಕಳಿಗೆ ಮಾನಸಿಕ, ದೈಹಿಕ ಬದಲಾವಣೆ ಗಳಾಗುತ್ತವೆ. ನಾನಾ ರೀತಿಯ ಆಕರ್ಷಣೆಗಳಿಗೆ, ವ್ಯಸನಗಳಿಗೆ, ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಅವರ ಜೀವನದ ಸಾಧನೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪ್ರೌಢ ಶಾಲೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆರೋಗ್ಯ ಶಿಕ್ಷಣ ಅತ್ಯಂತ ಮುಖ್ಯ. ಹದಿ ಹರೆಯದವರು ಇಲಾಖೆಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ನಿಮಗೆ ಬರುವ ಸಮಸ್ಯೆಗಳನ್ನ ಪ್ರತೀ ಗುರುವಾರ ನಡೆಸುವಂತಹ ಸ್ನೇಹ ಕ್ಲಿನಿಕ್ ಗೆ ಬಂದು ತಿಳಿಸ ಬಹುದು ಎಂದರು.ಸಾರ್ವಜನಿಕ ಆಸ್ಪತ್ರೆ ಶುಶ್ರೂಷಣಾ ಅಧಿಕಾರಿ ಸೂನ ಮ್ಯಾಥ್ಯೂ ಮಾಹಿತಿ ನೀಡಿ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಮೊದಲು ನಮ್ಮನ್ನು ನಾವು ರಕ್ಷಿಸಿಕೊಳ್ಳುವುದನ್ನ ಕಲಿಯಬೇಕು. ಮುಟ್ಟಿನ ಸಂದರ್ಭದಲ್ಲಿ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು. ಒಳಉಡುಪುಗಳ ಶುಚಿತ್ವ ಕಾಪಾಡಿಕೊಳ್ಳಬೇಕು. ಯುವಶಕ್ತಿ ಬೆಳೆದು ಸದೃಢವಾಗಿ ನಿಂತಾಗ ಭಾರತ ದೇಶ ಅತ್ಯಂತ ಯಶಸ್ವಿ ದೇಶವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ. ಸ್ವಾಮಿ ವಿವೇಕಾನಂದರ ವಾಕ್ಯಗಳಂತೆ ಸಾವಿರಾರು ಜನ ಸಾಧು, ಸಂತರ ಮಾರ್ಗದರ್ಶನದಲ್ಲಿ ಯುವಕರು ದಾರಿ ತಪ್ಪದೇ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ಮಾತನಾಡಿ, ಜೇಸಿ ಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು ಇದರ ಮೂಲ ಉದ್ದೇಶ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವುದು. ಯುವ ಶಕ್ತಿಯಲ್ಲಿ ವ್ಯಕ್ತಿತ್ವ ವಿಕಸನ ಮೂಡಿಸುವುದಾಗಿದೆ ಎಂದರು. ಕ್ಷಯ ರೋಗ ಮೇಲ್ವಿಚಾರಕ ಪವನ್ ಕರ್ ಕ್ಷಯ ರೋಗ ಕುರಿತು ಮಾಹಿತಿ ನೀಡಿದರು.ಸಭೆಯಲ್ಲಿ ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕ ಸುಹಾಸ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹಮ್ಮದ್ ಇಲಿಯಾಸ್, ಎಲ್.ಎಂ.ದರ್ಶನಾಥ್ , ನಾಗೇಂದ್ರಪ್ಪ, ಜೇಸ ಸಂಸ್ಥೆ ಕಾರ್ಯದರ್ಶಿ ವಿನುತ್, ಶಿಕ್ಷಕ ಚಂದ್ರಪ್ರಸಾದ್, ಎಂ.ಓ.ಜಾಯ್ ಉಪಸ್ಥಿತರಿದ್ದರು.