ನರಗುಂದ: ಎಚ್ಐವಿ ಹರಡದಂತೆ ತಡೆಯಲು ಪ್ರತಿಯೊಬ್ಬರಿಗೂ ಆರೋಗ್ಯ ಶಿಕ್ಷಣ ಬಹಳ ಅವಶ್ಯವಾಗಿದೆ ಎಂದು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ರೇಣುಕಾ ಕೊರವನವರ ತಿಳಿಸಿದರು.
ತಾಲೂಕಿನಲ್ಲಿ 886ಕ್ಕಿಂತ ಹೆಚ್ಚು ಎಚ್ಐವಿ ಸೋಂಕಿತರಿದ್ದಾರೆ. ಅದರಲ್ಲಿ 365ಕಿಂತಲು ಹೆಚ್ಚು ಜನರು ಸಾವಿಗಿಡಾಗಿದ್ದು, 405 ಜನ ಎಆರ್ಟಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಅವರೆಲ್ಲರ ಆರೋಗ್ಯವು ಚೆನ್ನಾಗಿದೆ ಎಂದರು.
ಆಪ್ತ ಸಮಾಲೋಚಕ ಎನ್.ಎಲ್. ಮಡಿವಾಳ ಮಾತನಾಡಿ, ತಾಲೂಕಿನಲ್ಲಿ ಸದ್ದಿಲ್ಲದೆ ಎಚ್ಐವಿ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ನೈತಿಕ ನಡವಳಿಕೆ ಅಳವಡಿಸಿಕೊಂಡಿದ್ದಲ್ಲಿ ಈ ರೋಗದಿಂದ ದೂರ ಇಡಬಹುದು ಎಂದರು.ಸದ್ಯದ ಅಂಕಿ ಅಂಶದ ಪ್ರಕಾರ ತಾಲೂಕಿನಲ್ಲಿ 14 ಜನರಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ಎಆರ್ಟಿ ಚಿಕಿತ್ಸೆಯಲ್ಲಿದ್ದಾರೆ ಎಂದರು.ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್. ಗಂಜಿ ಮಾತನಾಡಿ, ಯುವಕರಿಗೆ ಎಚ್ಐವಿ ಬರದಂತೆ ಪ್ರಮಾಣವಚನ ಬೋಧಿಸಿದರು.
ಪವಿತ್ರಾ ಎಸ್. ಅವರು ಬೀದಿನಾಟಕ ರಚಿಸಿ ಪ್ರಸ್ತುತಪಡಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯರಾದ ಡಾ. ಆನಂದಕುಮಾರ ಲಾಳಸಂಗಿ, ಡಾ. ಜಡೇಶ ಭದ್ರಗೌಡ್ರ, ಡಾ. ಮಂಜುನಾಥ ಕುದರಿ, ಸಿ.ಎಫ್. ಕುಂಬಾರ, ಶಿವಾನಂದ ಕುರಹಟ್ಟಿ, ಪ್ರತಿಭಾ ಎ.ಕೆ., ಡಾ. ರಾಮು ಎಂ.ಎಸ್., ಫಕೀರಬಿ ನದಾಫ ಇತರರು ಇದ್ದರು. ಎನ್.ಆರ್. ಮಡಿವಾಳಕರ ಸ್ವಾಗತಿಸಿದರು. ಬಿಸ್ಮಿಲ್ಲಾಬಿ ನಿರೂಪಿಸಿದರು. ಮುತ್ತು ಪೂಜಾರ ವಂದಿಸಿದರು.