ವಿದ್ಯಾರ್ಥಿಗಳಿಂದ ಯೋಗಾಭ್ಯಾಸ । ಆರಾಧ್ಯ ಯೋಗ ವಿದ್ಯಾರ್ಥಿ ಬಳಗದಿಂದ ಆಯೋಜನೆ
ಪ್ರತಿಯೊಬ್ಬರೂ ಕೂಡ ಯೋಗ ಅಭ್ಯಾಸ ಮಾಡಿದರೆ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಖ್ಯಾತ ವೈದ್ಯ ಡಾ.ಹನುಮಂತಯ್ಯ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಆರಾಧ್ಯ ಯೋಗ ವಿದ್ಯಾರ್ಥಿ ಬಳಗದ ವತಿಯಿಂದ ನಡೆದ ಯೋಗ ಅಭ್ಯಾಸದ ತರಬೇತಿ ಶಿಬಿರದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಕೂಡ ಯೋಗ ಅಭ್ಯಾಸ ಮಾಡಿದರೆ ಆರೋಗ್ಯವು ಉತ್ತಮವಾಗಿರುತ್ತದೆ. ಆದ್ದರಿಂದ ತಂದೆ ತಾಯಿ ಯೋಗ ಅಭ್ಯಾಸವನ್ನು ಕಲಿತರೆ ತಮ್ಮ ಮಕ್ಕಳಿಗೆ ಉತ್ತಮವಾದ ಯೋಗ ಅಭ್ಯಾಸವನ್ನು ಕಲಿಸಬಹುದು. ಆದ್ದರಿಂದ ತಂದೆ ತಾಯಿಗಳು ಯೋಗ ಅಭ್ಯಾಸವನ್ನು ಮೊದಲು ಕಲಿಯಬೇಕು ಎಂದು ಸಲಹೆ ನೀಡಿದರು.ಒಂದು ಕಾಲದಲ್ಲಿ ನಮ್ಮ ಭಾರತ ದೇಶವನ್ನು ಹಾವಾಡಿಗರ ದೇಶವೆಂದು ಬೇರೆ ರಾಷ್ಟ್ರಗಳು ಕರೆಯುತ್ತಿದ್ದವು. ಇಂದು ಭಾರತ ದೇಶವು ಎಲ್ಲಾ ರಾಷ್ಟ್ರಗಳಿಗಿಂತ ಬೃಹತ್ ಮಟ್ಟದಲ್ಲಿ ಬೆಳೆದು ಹೆಸರು ಮಾಡಿದೆ. ಅಂತಹ ಹೆಸರು ಮಾಡಲು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಾತ್ರವು ಬಹು ಮುಖ್ಯವಾಗಿದೆ. ೨೦೧೪ ರಲ್ಲಿ ವಿಶ್ವಸಂಸ್ಥೆ ಯೋಗ ದಿನಾಚರಣೆ ಆಚರಿಸಲು ನಿರ್ಣಯ ಕೈಗೊಂಡಿದೆ. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಯೋಗ ದಿನಾಚರಣೆಯನ್ನು ಆಚರಿಸುತ್ತ ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಯೋಗ ದಿನಾಚರಣೆಯನ್ನು ಆಚರಿಸಲು ಒಟ್ಟಾರೆ ವಿವಿಧ ರಾಷ್ಟ್ರಗಳು ಒಗ್ಗೂಡಿ ಶೃಂಗ ಸಭೆಯಲ್ಲಿ ಸಹಿ ಹಾಕಿವೆ. ಈ ಒಪ್ಪಂದಕ್ಕೆ ಸುಮಾರು ಆರು ತಿಂಗಳುಗಳ ಕಾಲಾವಕಾಶ ಬೇಕಿತ್ತು ಆದರೆ ವಿವಿಧ ರಾಷ್ಟ್ರಗಳ ನಿರ್ಣಯದ ಪ್ರಕಾರ ೧೦ ನಿಮಿಷದಲ್ಲೇ ಎಲ್ಲಾ ರಾಷ್ಟ್ರಗಳು ಒಪ್ಪಿಗೆ ಸೂಚಿಸಿ ಯೋಗ ದಿನ ಆಚರಿಸಲು ನಿರ್ಣಯ ಸೂಚಿಸಿದವು. ಅದರಂತೆ ಜೂ.೨೧ ರಂದು ಯೋಗ ದಿನಾಚರಣೆಯನ್ನು ಇಡೀ ವಿಶ್ವದಾದ್ಯಂತ ಆಚರಿಸುತ್ತ ಬಂದಿದ್ದೇವೆ. ಅದರಲ್ಲೂ ಭಾರತೀಯ ಸಂಸ್ಕೃತಿಯಲ್ಲಿ ಯೋಗ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ ಸಂಸ್ಕೃತಿ ಮತ್ತು ಆಚಾರ ವಿಚಾರ, ನಡೆ-ನುಡಿಗಳನ್ನು ಆದರಿಸಿ ನಡೆಯುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಆರಾಧ್ಯ ಯೋಗ ವಿದ್ಯಾರ್ಥಿ ಬಳಗದ ಅಧ್ಯಕ್ಷ ಪುಟ್ಟಣ್ಣ ಪ್ರಾಸ್ತಾವಿಕ ನುಡಿಯನ್ನು ಆಡಿದರು. ಇದೇ ಸಂದರ್ಭದಲ್ಲಿ. ಸುರೇಶ್, ನಂಜುಂಡೇಗೌಡ, ದೇವರಾಜ್, ಮಂಜುನಾಥ್, ಮುಂತಾದವರು ಹಾಜರಿದ್ದರು.