ಬ್ಯಾಡಗಿ: ವೈದ್ಯಕೀಯ ಸಿಬ್ಬಂದಿ ಮಾನವೀಯತೆ ಮೇಲೆ ಗುಣಮಟ್ಟದ ಸೇವೆ ನೀಡಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕು ಕೇಂದ್ರಗಳಲ್ಲಿ 100 ಹಾಸಿಗೆ ಆಸ್ಪತ್ರೆ, ಕಾಗಿನೆಲೆ, ಚಿಕ್ಕಬಾಸೂರು, ಕದರಮಂಡಲಗಿ ಸೇರಿದಂತೆ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈಗ ತಾಲೂಕಿನ ಮೋಟೆಬೆನ್ನೂರು ಗ್ರಾಮಕ್ಕೂ ಹೊಸದಾಗಿ ಆಸ್ಪತ್ರೆ ಮಂಜೂರಾಗಿದೆ. ಗ್ರಾಪಂ ಮಟ್ಟದಲ್ಲಿ ಉಪ ಆರೋಗ್ಯ ಕೇಂದ್ರಗಳನ್ನು ಆರಂಭಿಸಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಅನುದಾನ ಒದಗಿಸುತ್ತಿದ್ದು, ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿದೆ. ತಾಲೂಕಿನ 21 ಗ್ರಾಪಂಗಳಲ್ಲಿ ಇಂತಹ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ವೈದ್ಯರು ಇರುವುದಿಲ್ಲ, ಆರೋಗ್ಯ ಕಾರ್ಯಕರ್ತರು, ಸ್ಥಳೀಯ ಆಶಾಗಳು ಸೇವೆ ಸಲ್ಲಿಸುತ್ತಿದ್ದು, ಪ್ರಾಥಮಿಕವಾಗಿ ಕಂಡುಬಂದ ಸಣ್ಣಪುಟ್ಟ ರೋಗಗಳಿಗೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶವಿದೆ. ಗರ್ಭಿಣಿ, ಬಾಣಂತಿಯರಿಗೆ ಮಾರಕ ಕಾಯಿಲೆಗಳ ಚಿಕಿತ್ಸೆ, ವಿವಿಧ ಚುಚ್ಚುಮದ್ದುಗಳು, ಜ್ವರ, ವಾಂತಿ-ಭೇದಿ, ತಲೆನೋವು ಸೇರಿದಂತೆ ವಿವಿಧ ಕಾಯಿಲೆಗಳಿಗೆ ನುರಿತ ಆರೋಗ್ಯ ಕಾರ್ಯಕರ್ತರ ಸೇವೆ ಲಭ್ಯವಾಗಲಿದೆ. ಗ್ರಾಮಸ್ಥರು ಕಟ್ಟಡ ನಿರ್ಮಿಸಲು, ಸಹಕಾರ ಹಾಗೂ ಭವಿಷ್ಯದಲ್ಲಿ ಗ್ರಾಮಸ್ಥರ ಆಸ್ತಿಯಂತೆ ಕಾಪಾಡುವ ಜತೆಗೆ ಸಿಬ್ಬಂದಿ ಸೇವೆ ಪಡೆಯುವಂತೆ ಮನವಿ ಮಾಡಿದರು.
ಗ್ರಾಮದಲ್ಲಿ ಪಶು ಆಸ್ಪತ್ರೆ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿರುವೆ. ಗ್ರಾಮಸ್ಥರ ಬೇಡಿಕೆ ಶೀಘ್ರ ಈಡೇರಲಿದೆ. ಅಂಗರಗಟ್ಟಿ, ನಂದಿಹಳ್ಳಿ, ಕೆರೂಡಿ, ರಾಮಗೊಂಡನಹಳ್ಳಿ ಮಾರ್ಗದ ಹೊಸ ರಸ್ತೆಗೆ ₹7 ಕೋಟಿ ಬಿಡುಗಡೆಯಾಗಲಿದೆ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣೆವ್ವ ಯಲಿಗಾರ, ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶಂಭನಗೌಡ್ರ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ದಾನಪ್ಪ ಚೂರಿ, ಮಾರುತಿ ಅಚ್ಚೀಗೇರಿ, ಗ್ರಾಮಸ್ಥರಾದ ರುದ್ರಪ್ಪ ಮಲ್ಲಾಡದ, ಷಣ್ಮುಖಪ್ಪ ಕುಂಚೂರು, ಶೇಖಪ್ಪ ಮತ್ತೂರು, ಶಂಭು ಎಲಿಗಾರ, ನಾಗರಾಜ ಮಲ್ಲಾಡದ ಇತರರಿದ್ದರು.