ಬಳ್ಳಾರಿ: ಆಧುನಿಕ ಸಮಾಜದಲ್ಲಿ ಅಸಹನೆ, ಹಿಂಸೆ ವಿಜೃಂಭಿಸುತ್ತಿದೆ. ಮನುಷ್ಯ ಕೇಂದ್ರಿತ ಹಿಂಸೆಯನ್ನು ಮೊದಲು ವಿರೋಧಿಸಬೇಕು. ಶರಣ ಸಾಹಿತ್ಯಕ್ಕೆ ಜೀವಪರ ನಿಲುವುಗಳನ್ನು ಎತ್ತಿ ಹಿಡಿದ ಶ್ರೇಯಸ್ಸು ಸಲ್ಲುತ್ತದೆ ಎಂದು ದಾವಣಗೆರೆಯ ಹಿರಿಯ ಲೇಖಕ ದಾದಾಪೀರ್ ನವಿಲೇಹಾಳು ಅಭಿಪ್ರಾಯಪಟ್ಟರು.
ಸಾಮಾಜಿಕ ಜಾಲತಾಣಗಳು ವಿಕೃತಿಯನ್ನು ಮೆರೆಯುತ್ತಿವೆ. ಹೊಸ ತಲೆಮಾರನ್ನು ದಾರಿ ತಪ್ಪಿಸುತ್ತಿವೆ. ಇದನ್ನು ಕುಗ್ಗಿಸಲು, ನೈತಿಕತೆಯನ್ನು ಉಳಿಸಲು ಶರಣ ಸಾಹಿತ್ಯವನ್ನು ಬಳಸುವುದು ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಹನ್ನೆರಡನೆಯ ಶತಮಾನದ ಶರಣರು ತಮ್ಮ ಜೀವನಾನುಭವಗಳ ಸೃಜನಶೀಲ ಅಭಿವ್ಯಕ್ತಿಗೆ ವಚನ ರೂಪವನ್ನು ಬಳಸಿದರು. ದೇಸಿಯ ನುಡಿಗಟ್ಟುಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದು ಅವರ ಹೆಚ್ಚುಗಾರಿಕೆ. ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಬರೆದರಲ್ಲದೆ ಅದರಂತೆ ಬದುಕಿದರು. ದುಡಿಯುವ ವರ್ಗವನ್ನು ಸಮಾನ ನೆಲೆಯಲ್ಲಿ ಗೌರವಿಸಿದರು. ಕಾಯಕಕ್ಕೆ ಘನತೆಯನ್ನು ತಂದು ಕೊಟ್ಟರು. ಕಾಯಕದಿಂದ ಬಂದ ಉತ್ಪನ್ನವನ್ನು ದಾಸೋಹಕ್ಕೆ ಬಳಸಿದರು. ಬಹಳ ಮುಖ್ಯವಾಗಿ ಸಮಾಜದಲ್ಲಿನ ತಾರತಮ್ಯ ನಾಶವಾಗಿ ಒಟ್ಟಿಗೆ ಕೂತು ಉಣ್ಣುವ ಸಂಸ್ಕೃತಿಯನ್ನು ಎತ್ತಿ ಹಿಡಿದರು ಎಂದು ವಿಶ್ಲೇಷಿಸಿದರು.ವಚನಕಾರರು ಅಸಮಾನತೆ, ಮೂಢನಂಬಿಕೆ, ಗೊಡ್ಡು ಸಂಪ್ರದಾಯಗಳನ್ನು ಪ್ರತಿರೋಧಿಸಿ ವೈಚಾರಿಕತೆಯ ಶೋಧ ನಡೆಸಿದರು. ಸಾಮರಸ್ಯ, ಸಹಬಾಳ್ವೆಯ ಬದುಕಿಗೆ ತೆರೆದುಕೊಂಡರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಮಂಜುನಾಥ್, ಗೋವಿಂದಪ್ಪ, ಅಜ್ಜಪ್ಪ, ಚಂದ್ರಶೇಖರ್, ಹನುಮಂತರಾಯ, ಲೇಖಕರಾದ ವೀರೇಂದ್ರ ರಾವಿಹಾಳ ಉಪಸ್ಥಿತರಿದ್ದರು.