ತಂತ್ರಜ್ಞಾನದಿಂದ ಏನೆಲ್ಲಾ ಸಾಧಿಸಿದ್ದೇವೆ, ಆದರೆ ಇಂದಿಗೂ ಮಾನವನಿಗೆ ಅವಶ್ಯವಿರುವ ರಕ್ತವನ್ನು ಮಾತ್ರ ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗಿಲ್ಲ. ಹೀಗಾಗಿ ರಕ್ತದಾನ ಶಿಬಿರಗಳೇ ರಕ್ತವನ್ನು ಸಂಗ್ರಹಿಸಲು ಏಕೈಕ ಮಾರ್ಗವಾಗಿದೆ.
ಬ್ಯಾಡಗಿ: ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಉತ್ಪಾದಿಸಲಾಗುತ್ತಿಲ್ಲ. ಹೀಗಾಗಿ ಆರೋಗ್ಯವಂತರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಮಾಜಿ ಶಾಸಕ ಹಾಗೂ ಬಿಆರ್ಇ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯಪಟ್ಟರು.ಮೊಟೆಬೆನ್ನೂರಿನ ಬಳ್ಳಾರಿ ರುದ್ರಪ್ಪ ಶಿಕ್ಷಣ ಸಂಸ್ಥೆ ಮಹಾವಿದ್ಯಾಲಯದಲ್ಲಿ ಹಾವೇರಿ ವಿಶ್ವವಿದ್ಯಾಲಯ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ರಕ್ತಕೇಂದ್ರ, ಬಿಆರ್ಇ ಔಷಧೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಂತ್ರಜ್ಞಾನದಿಂದ ಏನೆಲ್ಲಾ ಸಾಧಿಸಿದ್ದೇವೆ, ಆದರೆ ಇಂದಿಗೂ ಮಾನವನಿಗೆ ಅವಶ್ಯವಿರುವ ರಕ್ತವನ್ನು ಮಾತ್ರ ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗಿಲ್ಲ. ಹೀಗಾಗಿ ರಕ್ತದಾನ ಶಿಬಿರಗಳೇ ರಕ್ತವನ್ನು ಸಂಗ್ರಹಿಸಲು ಏಕೈಕ ಮಾರ್ಗವಾಗಿದೆ ಎಂದರು.ರಕ್ತಕೇಂದ್ರ ತಾಂತ್ರಿಕ ಅಧಿಕಾರಿ ಬಸವರಾಜ ಕಮತದ ಮಾತನಾಡಿ, ಬಹುತೇಕ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ತುರ್ತು ಪರಿಸ್ಥಿತಿಯಲ್ಲಿ ರಕ್ತ ಸಂಗ್ರಹಿಸಲು ರಕ್ತನಿಧಿಗಳನ್ನು ಹೊಂದಿವೆ. ರಕ್ತದಾನ ಮಾಡಲು ದಾನಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಬಹುದು. ಆಸ್ಪತ್ರೆಗಳಲ್ಲಿ ಕೆಲ ಅಪರೂಪದ ರಕ್ತ ಗುಂಪುಗಳು ಹೊಂದಿರುವವರಲ್ಲಿ ಕೇವಲ ಶೇ. 1ರಷ್ಟು ದಾನಿಗಳಿರುತ್ತಾರೆ. ಹೀಗಾಗಿ ವಿಶೇಷ ಗುಂಪುಗಳನ್ನು ಹೊಂದಿರುವ ಜನರು ತಮ್ಮ ರಕ್ತದಾನ ಮಾಡಲು ಮುಂದೆ ಬರುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಷಣ್ಮುಖಪ್ಪ ಬಳ್ಳಾರಿ, ಖಜಾಂಚಿ ಚನ್ನವೀರಪ್ಪ ಬಳ್ಳಾರಿ, ರಕ್ತಕೇಂದ್ರ ವೈದ್ಯಾಧಿಕಾರಿ ಡಾ. ಸುಧಾ, ಶಶಿಕುಮಾರ್ ಶಿಮೊಗ್ಗಿ, ಶುಶ್ರೂಷಾಧಿಕಾರಿ ಸಿದ್ದು ಹಿರಗಣ್ಣವರ, ಆಪ್ತ ಸಮಾಲೋಚಕ ಆರ್.ಸಿ. ಈರಣ್ಣ, ಕಾಲೇಜು ಪ್ರಾಚಾರ್ಯ ಪ್ರೊ. ಎಂ. ಸುರೇಶ, ಡಾ. ರೇಣುಕಾರಾಧ್ಯ ಚಿಟ್ಟಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.