ಕನ್ನಡಪ್ರಭ ವಾರ್ತೆ ಕಲಬುರಗಿ
ಗುರುವಾರ ಜಿಲ್ಲೆಯಲ್ಲಿ 44. 1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅದರಲ್ಲೂ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾದಲ್ಲಿ 44. 1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇದೇ ರೀತಿ ಜಿಲ್ಲೆಯ ಎಲ್ಲಾ ತಾಲೂಕು ಪ್ರದೇಶಗಳಲ್ಲಿಯೂ ತಾಪಮಾನ 43ರಿಂದ 44 ಡಿಗ್ರಿ ಸೆಲ್ಸಿಯಸ್ ಸರಾಸರಿ ದಾಕಲಾಗಿದೆ. ಹೀಗಾಗಿ ಜಿಲ್ಲಾದ್ಯಂತ ಸತತ 2ನೇ ದಿನವೂ ಉಷ್ಣಗಾಳಿ ಅಲೆಗಳು ಕಾಡಲಾರಂಭಿಸಿವೆ.ಜನ ಮನೆಯಿಂದ ಹೊರಬರದಂತಗಿದೆ. ಮನೆಯಿಂದ ಹೊರಗಡೆ ಬರಬೇಕಾದರೆ ಮುಖಕ್ಕೆ ಕರವಸ್ತ್ರ, ಬಟ್ಟೆ ಬಳಸಿ ಮುಖ ಮುಚ್ಚಿಕೊಂಡೇ ಬರುವಂತಾಗಿದೆ. ಇನ್ನೂ ಹೊರ ಬಂದರೆ ಸಾಕು ಬಾಯಾರಿಕೆ ಕಾಡುತ್ತಿದೆ.
ತಾಪಮಾನ ಹೆಚ್ಚುತ್ತಿದ್ದಂತೆಯೇ ಕಲಬುರಗಿಯಲ್ಲಿ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಶರಣಬಸವೇಶ್ವರ ಕೆರೆಯಲ್ಲಿಯೂ ನೀರಿನ ಮಟ್ಟ ತಳ ಕಂಡಿದೆ. ಇದರಿಂದಾಗಿ ಈ ಕೆರೆ ಸುತ್ತಲಿರುವ ಬ್ರಹ್ಮಪೂರ, ಜನತಾ ನಗರ, ಲಾಲಗೇರಿ ಕ್ರಾಲ್, ಲಕ್ಷ್ಮೀ ಬಡಾವಣೆ, ಶರಣ ನಗರ, ಶರಣಬಸವೇಶ್ವರ ಸಂಸ್ಥಾನ ಹಿಭಾಗದ ವಸತಿ ಪ್ರದೇಶ ಸೇರಿದಂತೆ 15 ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ.
ನರೇಗಾ ಕೂಲಿಕಾರರ ಕೆಲಸದ ಪ್ರಮಾಣದಲ್ಲಿ ಶೇ.30ರಷ್ಟು ರಿಯಾಯಿತಿ: ಬೇಸಿಗೆ ತಾಪಮಾನ ಹೆಚ್ಚಾಗಿರುವುದರಿಂದ ಕಲಬುರಗಿ ಮತ್ತು ಬೆಳಗಾವಿ ವಿಭಾಗದ 14 ಜಿಲ್ಲೆಗಳಲ್ಲಿ 2024-25ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ನಿಗದಿಪಡಿಸಿದ ಕೆಲಸದ ಪ್ರಮಾಣದಲ್ಲಿ ಶೇ.30ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.
ಇನ್ನು ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಕಡ್ಡಾಯವಾಗಿ ನೆರಳು, ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇತ್ಯಾದಿ ಮೂಲ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಲು ಸರ್ಕಾರದ ಆದೇಶದಲ್ಲಿ ತಿಳಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಲ್ಲಿರುವ ರೀಟಾ, ಜಿಮ್ಮಿ, ರಾಕಿ, ರಾಣಿ ಎಂಬ ನಾಲ್ಕು ಶ್ವಾನಗಳಿಗೆ ಶೂ ಒದಗಿಸಲಾಗಿದೆ. ನಾಲ್ಕೂಕಾಲುಗಳಿಗೆ ಶೂ ಹಾಕಿ ಅವುಗಳಿಗೆ ಬಿಸಿಲಿನಿಂದ ಕಾಪಾಡುವ ಕೆಲಸ ಸಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಅಂಗವಾಗಿರುವ ಈ ಶ್ವಾನಗಳಿಗೆ ಹಸಿವು- ಬಾಯಾರಿಕೆ ಆದಾಗ ರಾಗಿ, ಸಾಬುದಾಣಿ ಗಂಟಿ ನೀಡಲಾಗುತ್ತಿದೆ. ಎಳೆನೀರನ್ನು ಇವುಗಳಿಗೆ ಒದಗಿಸಲಾಗುತ್ತಿದೆ.