ಬೆಂಗಳೂರು : ಮಧ್ಯಂತರ ಜೀವನಾಂಶವಾಗಿ ಮಾಸಿಕ 50 ಸಾವಿರ ರು. ಮತ್ತು ಮೊಕದ್ದಮೆ ವೆಚ್ಚವೆಂದು‌‌ 1 ಲಕ್ಷ ರು. ಪಾವತಿಸುವಂತೆ ಪತಿಗೆ ನಿರ್ದೇಶಿಸಲು ಕೋರಿ‌ ಪತ್ನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿ‌ ವಿಚಾರಣೆ

ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿ‌ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಮನ್ಮಥ ರಾವ್‌ ಅವರ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಮಧ್ಯಂತರ ಜೀವನಾಂಶದ ಪ್ರಮಾಣ ನಿರ್ಧರಿಸಲು ಹಿಂದೂ ವಿವಾಹ ಕಾಯ್ದೆಯ ಸೆಕ್ಷ ನ್‌ 24ರ ಯಾವುದೇ ಕಠಿಣ ಸೂತ್ರ ಸೂಚಿಸುವುದಿಲ್ಲ. ಬದಲಿಗೆ ಮದುವೆಯ ಅವಧಿ, ಇಬ್ಬರೂ ಸಂಗಾತಿಗಳ ಆರ್ಥಿಕ ವಿಧಾನಗಳು ಮತ್ತು ನಡವಳಿಕೆ, ಅವರ ಗಳಿಕೆಯ ಸಾಮರ್ಥ್ಯ‌, ಮಕ್ಕಳನ್ನು ನಿರ್ವಹಿಸುವ ಜವಾಬ್ದಾರಿ ಮತ್ತು ಹಕ್ಕುದಾರರ ಶೈಕ್ಷಣಿಕ ಅರ್ಹತೆಗಳಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡು‌‌ ಮಧ್ಯಂತರ ಪರಿಹಾರ ನಿರ್ಣಯಿಸಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.


ಸಂಗಾತಿಗೆ ಆರ್ಥಿಕ ಬೆಂಬಲ ಒದಗಿಸುವುದು

ಮಧ್ಯಂತರ ಜೀವನಾಂಶ ಮತ್ತು ಮೊಕದ್ದಮೆ ವೆಚ್ಚಗಳನ್ನು ನೀಡುವ ಪ್ರಾಥಮಿಕ ಉದ್ದೇಶ ಸಂಗಾತಿಗೆ ಆರ್ಥಿಕ ಬೆಂಬಲ ಒದಗಿಸುವುದು, ಅವರು ತಮ್ಮನ್ನು ತಾವು ಉಳಿಸಿಕೊಳ್ಳಲು ಮತ್ತು ಕಾನೂನು ಕ್ರಮಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹಿಂದೂ ವಿವಾಹ ಕಾಯ್ದೆ-1955 ರ ಸೆಕ್ಷ ನ್‌ 24ರ ಅಡಿ ಅರ್ಜಿಯನ್ನು ನಿರ್ಧರಿಸುವಾಗ, ನ್ಯಾಯಾಲಯವು ಒಬ್ಬ ಸಂಗಾತಿಯು ಇನ್ನೊಬ್ಬರಿಗೆ ಪಾವತಿಸಬೇಕಾದ ಮಧ್ಯಂತರ ಜೀವನಾಂಶದ ಮೊತ್ತವನ್ನು ನಿರ್ಧರಿಸುವಲ್ಲಿ ವಿವೇಚನಾ ಅಧಿಕಾರ ಚಲಾಯಿಸಬೇಕಾಗುತ್ತದೆ.‌ ಹಾಲಿ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ಪತ್ನಿಯ ಅರ್ಜಿ ತಿರಸ್ಕರಿಸಲು ಸಾಕಷ್ಟು ಕಾರಣಗಳನ್ನು ಒದಗಿಸಲು ವಿಫಲವಾಗಿದೆ. ಆದ್ದರಿಂದ‌‌ ಪತ್ನಿಯ ಅರ್ಜಿ ತಿರಸ್ಕರಿಸಿದ್ದ ಕೌಟುಂಬಿಕ‌ ನ್ಯಾಯಾಲಯದ ಆದೇಶ ರದ್ದುಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್ ತಿಳಿಸಿದೆ.

ಹಾಗೆಯೇ, ವ್ಯಾಜ್ಯವನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಮತ್ತೆ ಹಿಂತಿರುಗಿಸಿರುವ ಹೈಕೋರ್ಟ್ ಜೂ.10 ರಂದು ವೈಯಕ್ತಿಕವಾಗಿ ಅಥವಾ ಅವರ ವಕೀಲರ ಮೂಲಕ ಹಾಜರಾಗಲು ದಂಪತಿಗೆ ನಿರ್ದೇಶಿಸಿದೆ. ಪ್ರಕರಣದಲ್ಲಿ ದಂಪತಿ ಕೇವಲ ಆರರಿಂದ ಏಳು ತಿಂಗಳುಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಆದ್ದರಿಂದ ಅವರು ಮಧ್ಯಂತರ ಜೀವನಾಂಶ ಅಥವಾ ಮೊಕದ್ದಮೆ ವೆಚ್ಚಗಳಿಗೆ ಅರ್ಹರಲ್ಲ ಎಂದು ತೀರ್ಮಾನಿಸಿ ಕೌಟುಂಬಿಕ ನ್ಯಾಯಾಲಯ 2025ರ ಸೆ.17ರಂದು ಪತ್ನಿಯ ಅರ್ಜಿ ತಿರಸ್ಕರಿಸಿತು. ಆ ಆದೇಶ ಪ್ರಶ್ನಿಸಿದ್ದ ಪತ್ನಿ, ತಾನು ಪ್ರಸ್ತುತ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದು, ನಿರುದ್ಯೋಗಿಯಾಗಿದ್ದೇನೆ.‌ ಇನ್ನು ಪತಿ ದುಬೈನಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 8 ಲಕ್ಷ ರು. ಸಂಪಾದಿಸುತ್ತಾರೆಂದು ವಾದಿಸಿದ್ದರು.