ಹೊನ್ನಾವರ: ತಾಲೂಕಿನಲ್ಲಿ ವರುಣನ ಅಬ್ಬರ ಶುಕ್ರವಾರವೂ ಮುಂದುವರಿದಿದೆ. ತಾಲೂಕಿನ ಹೊಸಾಕುಳಿ ಗ್ರಾಪಂ ವ್ಯಾಪ್ತಿಯ ಭಾಸ್ಕೇರಿ ಹೊಳೆ ತುಂಬಿ ಹರಿಯುತ್ತಿದ್ದು, ಪ್ರವಾಹ ಮುಂದುವರಿದಿದೆ.
ಕೆಲವರ ಮನೆಯ ಒಳಗೆ ನೀರು ನುಗ್ಗಿದೆ. ಭಾಸ್ಕೇರಿ, ದೊಡ್ಡ ಹಿತ್ತಲ, ಗಜನಿ ಕೇಂದ್ರ, ಶಶಿಹಿತ್ಲ ಸುತ್ತಮುತ್ತಲಿನ ಅಂದಾಜು 118 ಕುಟುಂಬದವರಿಗೆ ನೆರೆ ನೀರಿನ ಸಮಸ್ಯೆ ಉಂಟಾಗಿದೆ. ಸ.ಹಿ.ಪ್ರಾ ಗುಡ್ಡೆಬಾಳ ಕಾಳಜಿ ಕೇಂದ್ರ ತೆರೆಯಲಾಗಿದೆ.
ಸ್ಥಳೀಯ ಗ್ರಾಪಂ ಸದಸ್ಯ ಎಚ್.ಆರ್. ಗಣೇಶ ತಹಶೀಲ್ದಾರ್, ಉಮೇಶ್ ನಾಯ್ಕ, ಗಣಪತಿ ಗೌಡ ಉಳಿದ ಸ್ಥಳೀಯರು ಸಹಕಾರ ನೀಡಿದರು . ನೇರೆ ಪಿಡಿತ 118 ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡಬೇಕು ಅದಕ್ಕೆ ಡಿಸ್ ಫಾರೆಸ್ಟ್ ಜಾಗ ಸಹ ಇದೆ ಎಂದು ಊರಿನ ಪರವಾಗಿ ಎಚ್ ಆರ್ ಗಣೇಶ ತಿಳಿಸಿದರು .ಮುಂದಿನ ದಿನಗಳಲ್ಲಿ 118 ಮನೆಯವರನ್ನು ಸೇರಿಸಿ ಶಾಶ್ವತ ಪರಿಹಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಹಶೀಲ್ದಾರ ಶ್ರೀ ಪ್ರವೀಣ್ ಕರಾಂಡೆ ಭರವಸೆ ನೀಡಿದರು.ಗುಂಡಬಾಳ, ಭಾಸ್ಕೇರಿ, ಬಡಗಣಿ ಹೊಳೆ ಭರ್ತಿಯಾಗಿ ಮೈದುಂಬಿ ಹರಿದಿದೆ. ನೀರು ತುಂಬಿದ ನದಿ ತಟದ ಮನೆಯ ಒಳಗಡೆ ಪ್ರವೇಶ ಮಾಡಿದೆ. ಸುತ್ತಮುತ್ತಲಿನ ತೋಟಗಳು ಸಂಪೂರ್ಣ ಜಲಾವ್ರತಗೊಂಡಿದೆ. ಮುಗ್ವಾ ಗ್ರಾಪಂ ವ್ಯಾಪ್ತಿಯಲ್ಲಿಯೂ ಎರಡು ಕಾಳಜಿ ಕೇಂದ್ರ ಈಗಾಗಲೇ ತೆರೆಲಾಯಲಾಗಿದೆ.ತಾಲೂಕಿನ ಭಾಸ್ಕೇರಿ, ಗುಂಡಬಾಳ, ಬಡಗಣಿ ನದಿಯ ಪ್ರದೇಶದಲ್ಲಿ ನೆರೆ ಭೀತಿಯಿಂದ ಈಗಾಗಲೇ ಪೂರ್ವ ಸಿದ್ಧತೆಯಾಗಿ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕಾಳಜಿ ಕೇಂದ್ರ ತೆರೆಯಲಾಗಿದೆ.
ನೆರೆ ಪ್ರದೇಶಕ್ಕೆ ತಹಸೀಲ್ದಾರ್ ಪ್ರವೀಣ ಕರಾಂಡೆ ಸೇರಿ ಇನ್ನುಳಿದ ಅಧಿಕಾರಿಗಳು ತೆರಳಿ ಮುಂಜಾಗ್ರತಾ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಪಟ್ಟಣದ ಕಮಟೆ ಹಿತ್ತಲ ಮಜಿರೆಯ ರಜನಿ ದಿನಕರ ಮೇಸ್ತ, ಮಂಗಳ ಪ್ರಭಾಕರ ಭಂಡಾರಿ ಅವರ ಮನೆಯ ಮೇಲೆ ಬೃಹದಾಕಾರದ ಮಾವಿನಮರ ಬುಡ ಸಮೇತ ಮುರಿದು ಬಿದ್ದು ತೀವ್ರ ಹಾನಿಯಾಗಿದೆ. ಯಾವುದೇ ಜೀವಹಾನಿ ಆಗಿಲ್ಲ. ಸ್ಥಳದಲ್ಲಿ ಮುಖ್ಯಾಧಿಕಾರಿ ಹಾಗೂ ಪಟ್ಟಣ ಪಂಚಾಯತ ಸದಸ್ಯರು ಹಾಜರಿದ್ದು, ಮರವನ್ನು ತೆರವುಗೊಳಿಸಿದ ನಂತರ ಹಾನಿಯ ಮೊತ್ತ ತಿಳಿದು ಬರಬೇಕಿದೆ.