ತೀವ್ರ ಮಳೆ: ಸ್ಪೀಕರ್ ಖಾದರ್ ತುರ್ತು ಸಭೆ

KannadaprabhaNewsNetwork | Published : Dec 3, 2024 12:34 AM

ಸಾರಾಂಶ

ಜಿಲ್ಲೆಯಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಸೋಮವಾರ ರೋಮ್‌ನಿಂದ ನೇರವಾಗಿ ಕಲ್ಲಿಕೋಟೆ ಮೂಲಕ ಮಂಗಳೂರಿಗೆ ಬಂದು ಜಿಲ್ಲೆಯ ಪ್ರಾಕೃತಿಕ ಸ್ಥಿತಿಗತಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಜಿಲ್ಲೆಯಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಸೋಮವಾರ ರೋಮ್‌ನಿಂದ ನೇರವಾಗಿ ಕಲ್ಲಿಕೋಟೆ ಮೂಲಕ ಮಂಗಳೂರಿಗೆ ಬಂದು ಜಿಲ್ಲೆಯ ಪ್ರಾಕೃತಿಕ ಸ್ಥಿತಿಗತಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ವಿವಿಧ ತಾಲೂಕು ಅಧಿಕಾರಿಗಳಿಂದ ವೀಡಿಯೊ ಸಂವಾದ ಮೂಲಕ ಪ್ರಾಕೃತಿಕ ವಿಕೋಪದ ಮಾಹಿತಿ ಪಡೆದರು.

ಗುಡ್ಡ ಸಮೀಪ ಮನೆಯಲ್ಲಿ ವಾಸ್ತವ್ಯದಲ್ಲಿರುವವರಿಗೆ ಮುಂದಿನ ಎರಡು ದಿನಗಳವರೆಗೆ ತಂಗದಂತೆ ತಿಳಿಸಬೇಕು. ರಸ್ತೆ, ವಿದ್ಯುತ್ ತೊಂದರೆಗಳನ್ನು ಎದುರಿಸಲು ಅಗತ್ಯ ಯಂತ್ರೋಪಕರಣಗಳೊಂದಿಗೆ ಸನ್ನದ್ಧರಾಗಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಕೃತಿ ವಿಕೋಪ ತೀವ್ರವಾಗಿರುವುದರಿಂದ ರೆಸಾಟ್೯ಗಳಿಗೆ ಬರುವ ಪ್ರವಾಸಿಗರಿಗೆ ವಾಸ್ತವ್ಯ ಹೂಡದಂತೆ ಮನವರಿಕೆ ಮಾಡಬೇಕು. ಒಂದು ವೇಳೆ ರೆಸಾಟ್೯ನಲ್ಲಿ ತಂಗಿ, ಪ್ರವಾಸಿಗರಿಗೆ ಯಾವುದೇ ಜೀವಹಾನಿಯಾದರೆ ಸಂಬಂಧಪಟ್ಟ ರೆಸಾಟ್೯ ಮಾಲೀಕರ ವಿರುಧ್ಧ ನಿದಾ೯ಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಜಿ.ಪಂ. ಸಿಇಒ ಡಾ. ಆನಂದ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮತ್ತಿತರರು ಇದ್ದರು.ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಬೆಳ್ತಂಗಡಿ ತಾಲೂಕಿನ ಕೆಲವೆಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆ ತುಂತುರು ಮಳೆಯಾಗತೊಡಗಿತ್ತು. ಬಳಿಕ ಸಂಜೆ 3 ಗಂಟೆಯಿಂದ ಉತ್ತಮ ಮಳೆ ಸುರಿದಿದೆ. ಬೆಳ್ತಂಗಡಿ, ಗುರುವಾಯನಕೆರೆ ಸುತ್ತಮುತ್ತ, ವೇಣೂರು, ನಾರಾವಿ ಪರಿಸರದಲ್ಲಿ, ಅಳದಂಗಡಿ, ಸುಲ್ಕೇರಿ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಕಳೆದ ಹತ್ತು-ಹದಿನೈದು ದಿನಗಳಿಂದ ಮಳೆ ಇಲ್ಲದೆ ಬಿಸಿಲು ಕಾಯುತ್ತಿತ್ತು. ಇನ್ನೇನು ಮಳೆಗಾಲ ಮುಗಿದು ಚಳಿಗಾಲ ಬಂತು ಎನ್ನುವ ಹೊತ್ತಿಗೆ ಸೋಮವಾರ ಧಾರಾಕಾರ ಮಳೆ ಸುರಿದು ವಾತಾವರಣ ತಂಪಾಗಿದೆ.

Share this article