ಭಾರಿ ಮಳೆ: ಪ್ರವಾಸಿ ತಾಣಗಳಲ್ಲಿ ಹದ್ದಿನಗಣ್ಣು

KannadaprabhaNewsNetwork |  
Published : May 27, 2025, 11:56 PM IST
ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ನಿಯೋಜನೆಗೊಂಡಿರುವ ಬಣಕಲ್‌ ಠಾಣೆಯ ಪೊಲೀಸರು. | Kannada Prabha

ಸಾರಾಂಶ

ಗಿರಿ ಪ್ರದೇಶದಲ್ಲಿ ನಿರಂತರವಾಗಿ ಮಳೆ ಬಂದಿದ್ದರಿಂದ ಜಲಪಾತಗಳು ಅವಧಿಗೂ ಮುನ್ನ ಮೈದುಂಬಿ ಧುಮುಖುತ್ತಿವೆ. ಈ ಸೊಬಗನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಅವಘಡ ಸಂಭವಿಸಬಾರದೆಂದು ಜಿಲ್ಲಾ ಪೊಲೀಸ್‌ ಇಲಾಖೆ ಮಂಗಳವಾರದಿಂದಲೇ ಹೈ ಅಲರ್ಟ್‌ ಆಗಿದೆ.

ಜಿಲ್ಲಾ ಪೊಲೀಸ್‌ ಇಲಾಖೆ ಕ್ರಮ । ಕಲ್ಲತ್ತಗಿರಿ ಫಾಲ್ಸ್‌, ಸೀತಾಳಯ್ಯನಗಿರಿ ಜಲಪಾತಗಳಲ್ಲಿ ಪ್ರವಾಸಿಗರ ಮೇಲೆ ನಿಗಾ

ಚಾರ್ಮಾಡಿ, ಅಬ್ಬಿ ಫಾಲ್ಸ್‌, ಇತರೆಡೆ ಬ್ಯಾರಿಕೇಡ್‌ ಹಾಕಿ ಪೊಲೀಸರ ನಿಯೋಜನೆ । ಮೋಜು, ಮಸ್ತಿಗೆ ಪೊಲೀಸರ ಬ್ರೇಕ್‌

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗಿರಿ ಪ್ರದೇಶದಲ್ಲಿ ನಿರಂತರವಾಗಿ ಮಳೆ ಬಂದಿದ್ದರಿಂದ ಜಲಪಾತಗಳು ಅವಧಿಗೂ ಮುನ್ನ ಮೈದುಂಬಿ ಧುಮುಖುತ್ತಿವೆ. ಈ ಸೊಬಗನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಅವಘಡ ಸಂಭವಿಸಬಾರದೆಂದು ಜಿಲ್ಲಾ ಪೊಲೀಸ್‌ ಇಲಾಖೆ ಮಂಗಳವಾರದಿಂದಲೇ ಹೈ ಅಲರ್ಟ್‌ ಆಗಿದೆ.

ಚಿಕ್ಕಮಗಳೂರು - ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ ರಸ್ತೆಯ ಉದ್ದಕ್ಕೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಝರಿಗಳು ಸಿಗುತ್ತವೆ. ಅವೆಲ್ಲವೂ ಮೈದುಂಬಿ ಹರಿಯುತ್ತಿವೆ. ಕಲ್ಲತ್ತಗಿರಿ ಫಾಲ್ಸ್‌, ಅಬ್ಬೆ ಫಾಲ್ಸ್‌ಗಳಲ್ಲೂ ನೀರು ಹರಿಯುತ್ತಿವೆ. ಗಿರಿ ಪ್ರದೇಶದಲ್ಲಿ ಆಗಾಗ ಮೋಡ, ದಟ್ಟವಾದ ಮಂಜು, ಮಳೆಯ ಸೊಬಗನ್ನು ನೋಡಲು ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ಝರಿಗಳನ್ನು ನೋಡಲು ಬರುವವರು ಅಲ್ಲಿ ಸ್ನಾನ ಮಾಡುವುದು ಹಾಗೂ ಎತ್ತರದ ಪ್ರದೇಶಕ್ಕೆ ತೆರಳಿ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟ ಮಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕಲು ಸ್ಥಳದಲ್ಲಿ ಬ್ಯಾರಿಕೇಡ್‌ ಹಾಕಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಚಾರ್ಮಾಡಿ ಘಾಟ್‌ ರಸ್ತೆಯ ಉದ್ದಕ್ಕೂ ಪ್ರವಾಸಿಗರು ಕಾರನ್ನು ನಿಲ್ಲಿಸಿ ಅಲ್ಲಲ್ಲಿ ನಿಂತಿರುತ್ತಾರೆ. ಇದರಿಂದ ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆಯೂ ಕೂಡ ಇರುತ್ತದೆ. ಹಾಗಾಗಿ ಮಂಗಳವಾರ ಬಣಕಲ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯಲ್ಲಿ ನಿಂತಿದ್ದ ಪ್ರವಾಸಿಗರ ವಾಹನಗಳನ್ನು ತೆರವುಗೊಳಿಸಿದರು. ಕೆಲವೆಡೆ ಸೂಚನಾ ಫಲಕಗಳನ್ನು ಅಳವಡಿಸಿದರು.

ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ದತ್ತಪೀಠದ ಮಾರ್ಗಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ತೆರಳುವ ಪ್ರವಾಸಿಗರನ್ನು ಕೈಮರದ ಬಳಿ ಪೊಲೀಸರು ತಡೆದು, ಮಳೆಗಾಲದಲ್ಲಿ ಅನಾಹುತಗಳು ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಚ್ಚರ ವಹಿಸಬೇಕು. ಝರಿಗಳಲ್ಲಿ ಮೊಬೈಲ್‌ ಸೆಲ್ಪಿ ತೆಗೆಯಬಾರದೆಂದು ಸೂಚನೆ ನೀಡಿದರು.

ಗಿರಿ ಪ್ರದೇಶದ ದಾರಿಯಲ್ಲಿ ಬಿದ್ದಿರುವ ಸಣ್ಣ ಪುಟ್ಟ ಮರಗಳನ್ನು ಸಹ ಪೊಲೀಸರು ತೆರವುಗೊಳಿಸಿದರು. ಒಟ್ಟಾರೆ ಜಿಲ್ಲೆಯಾದ್ಯಂತ ಪೊಲೀಸ್‌ ಇಲಾಖೆ ಫುಲ್‌ ಅಲರ್ಟ್‌ ಆಗಿದೆ.

ಕೊಟ್ಟಿಗೆಹಾರ:

ಚಾರ್ಮಾಡಿ ಘಾಟಿಯ ಅಪಾಯಕಾರಿ ಜಲಪಾತಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿದ್ದು ಇದರಿಂದ ಪ್ರವಾಸಿಗರ ಮೋಜು ಮಸ್ತಿಗೆ ಬ್ರೇಕ್ ಬಿದ್ದಿದೆ.

ಕಳೆದ ಕೆಲವು ದಿನಗಳಿಂದ ಚಾರ್ಮಾಡಿ ಘಾಟಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಜಲಪಾತಗಳು ಮೈದುಂಬಿಕೊಂಡಿದ್ದು ಪ್ರವಾಸಿಗರು ಇಲ್ಲಿ ಬಂಡೆ ಹತ್ತುವುದು, ಸೆಲ್ಫಿಗಾಗಿ ಸಿಕ್ಕಸಿಕ್ಕ ಅಪಾಯಕಾರಿ ಸ್ಥಳಗಳನ್ನು ಹತ್ತಿ, ಇಳಿಯುವುದು, ಮೊದಲಾದ ನಿಯಮ ಉಲ್ಲಂಘನೆಗೆ ಕಾರಣರಾಗುತ್ತಿದ್ದರು. ಮಂಗಳವಾರದಿಂದ ಚಾರ್ಮಾಡಿ ಘಾಟಿ ಪ್ರದೇಶದ ಆಯ್ದ ಸ್ಥಳಗಳಲ್ಲಿ ಮೂಡಿಗೆರೆ ಪೊಲೀಸ್ ವಿಭಾಗದಿಂದ ಬಣಕಲ್ ಠಾಣೆಯ ಪೊಲೀಸರನ್ನು ನಿಯೋಜಿಸಲಾಗಿದೆ.

ಕೆಲವು ಸ್ಥಳಗಳಲ್ಲಿ ಬ್ಯಾರಿಕೇಡ್ ಇರಿಸಿ ಪ್ರವಾಸಿಗರು ಜಲಪಾತ, ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ವ್ಯವಸ್ಥೆ ಮಾಡಲಾಗಿದೆ. ಬಂಡೆ ಹತ್ತುವುದು ಜಲಪಾತಗಳ ಬುಡ ಭಾಗಕ್ಕೆ ತೆರಳುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನಾಲ್ವರ ವಿರುದ್ಧ ಪ್ರಕರಣ

ಮಂಗಳವಾರ ಚಾರ್ಮಾಡಿ ಘಾಟಿಯ ಅಪಾಯಕಾರಿ ಜಲಪಾತ ಪ್ರದೇಶದಲ್ಲಿ ವಿಡಿಯೋ ತೆಗೆಯುತ್ತಿದ್ದ ನಾಲ್ವರ ವಿರುದ್ಧ ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್ ಮಾರ್ಗದರ್ಶನದಲ್ಲಿ ಬಣಕಲ್ ಪಿಎಸ್ ಐ ಪ್ರತಾಪ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನಧಿಕೃತ ಪ್ರವೇಶ ಹಾಗೂ ಸಾರ್ವಜನಿಕ ಭದ್ರತಾ ನಿಯಮ ಉಲ್ಲಂಘನೆಗಾಗಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾ.ನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು
ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು