ಬ್ಯಾಡಗಿ: ದೈಹಿಕವಾಗಿ ಅಸಮರ್ಥರಿಗೆ ಸಹಾಯ ಮತ್ತು ಸಹಕಾರ ಸಲ್ಲಿಸುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಅವರ ಸಂಖ್ಯೆ ಕಡಿಮೆಯಿದ್ದರೂ ಅವರೂ ಕೂಡ ಸಮಾಜದ ಭಾಗವಾಗಿದ್ದು ಸದರಿ ವಿಷಯದಲ್ಲಿ ಸರ್ಕಾರ ಎಂದಿಗೂ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದಿಲ್ಲ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಜನರು ವಿಶೇಷ ಚೇತನರನ್ನು ಅಪ್ಪಿಕೊಳ್ಳಿ: ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ವಿಶೇಷ ಚೇತನರ ಮಹತ್ವಾಕಾಂಕ್ಷೆಗಳು ಸಹಜ ಮಾನವರಂತೆಯೇ ಇರುತ್ತದೆ. ಕರುಣೆ ಮತ್ತು ಸಹಾನುಭೂತಿ ನೋಟವು ಅವರ ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಹೀಗಾಗಿ ಜನರು ವಿಶೇಷ ಚೇತನರನ್ನು ಅಪ್ಪಿಕೊಂಡು ಅವರಿಗೆ ಸಹಾಯಹಸ್ತ ನೀಡಬೇಕು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವ ಕಾನೂನು ಹೊಂದಿರಬೇಕು ಮತ್ತು ಗೌರವಿಸಬೇಕು ಆದಾಗ್ಯೂ ವಿಕಲ ಚೇತನ ಹಕ್ಕುಗಳು ಕೇವಲ ಘೋಷಣೆಗಳಾಗಿ ನಿಲ್ಲಬಾರದು ಎಂದರು.
ವಿಕಲಾಂಗರ ಸಂಖ್ಯೆ ಶೇ.15 ರಕ್ಕೇರಿದೆ:ಸದಸ್ಯ ಬಸವರಾಜ ಛತ್ರದ ಮಾತನಾಡಿ, ವಿಶ್ವದಲ್ಲಿ ಅಂಗವಿಕಲರ ಪ್ರಮಾಣವು ಎಪ್ಪತ್ತರ ದಶಕದಲ್ಲಿ ಶೇ.10ರಿಂದ 15ಕ್ಕೇರಿದ್ದು, ವಿಶ್ವದ ಜನಸಂಖ್ಯೆ ಸುಮಾರು ಶೇ.15ರಷ್ಟು ವಿಕಲಾಂಗರ ಸಂಖ್ಯೆಯಿದೆ. ಇದು ಪ್ರಪಂಚಕ್ಕೆ ಹೋಲಿಸಿದರೇ ಶತಕೋಟಿ ದಾಟಲಿದೆ. ಹೀಗಾಗಿ ಅವರಿಗೆ ಸಿಗಬೇಕಾದ ಸೌಲಭ್ಯಗಳು ಇನ್ನೂ ಹೆಚ್ಚಾಗಬೇಕಾಗಿದೆ ಎಂದರು. ಈ ವೇಳೆ ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಸ್ಥಾಯಿ ಸಮಿತಿ ಚೇರಮನ್ ಚಂದ್ರಣ್ಣ ಶೆಟ್ಟರ, ಸದಸ್ಯರಾದ ರಫೀಕ್ ಮುದಗಲ್, ರಾಮಣ್ಣ ಕೋಡಿಹಳ್ಳಿ, ಮೆಹಬೂಬ ಅಗಸನಹಳ್ಳಿ, ಶಂಕರ ಕುಸಗೂರ, ರಾಜಣ್ಣ ಕಳ್ಯಾಳ, ಸೋಮಣ್ಣ ಸಂಕಣ್ಣನವರ, ಸುಮಂಗಲ ರಾರಾವಿ, ಈರಪ್ಪ ಕರ್ಚಾಡ, ಮುಖ್ಯಾಧಿಕಾರಿ ವಿನಯಕುಮಾರ ಇನ್ನಿತರರಿದ್ದರು.