ಕನ್ನಡಪ್ರಭ ವಾರ್ತೆ ಹರಿಹರ
ಸಾರಥಿ ಗ್ರಾಮದಲ್ಲಿ ಅ.27 ರಂದು ಮಹಾಸಾದ್ವಿ ಶಿವಶರಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಗಣಪತಿಯ ನೂತನ ಶಿಲಾಮಂದಿರ ಅನಾವರಣ ಹಾಗೂ ಪ್ರಾಣ ಪತಿಷ್ಠಾಪನೆ, ಗೋಪುರ ಕಳಸಾರೋಹಣ, ಸರ್ವಧರ್ಮ ಸಮನ್ವಯ ಭಾವೈಕ್ಯತೆ ಧಾರ್ಮಿಕ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಟ್ರಸ್ಟ್ ಅಧ್ಯಕ್ಷ ಜಿ.ಹನುಮಂತಗೌಡ ತಿಳಿಸಿದರು.ತಾಲೂಕಿನಲ್ಲಿ ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅ.26 ರಂದು ಭಾನುವಾರ ಸಂಜೆ 5 ಗಂಟೆಗೆ ಗಂಗಾಪೂಜೆಯೊಂದಿಗೆ ಗೋಮಾತೆಯ ದೇವಾಲಯ ಪ್ರವೇಶ, ನಂತರ ಗಣಪತಿಪುಣ್ಯಹ, ನಾಂದೀಸಮಾರಾಧನೆ, ಗುರುಕಲಶ, ಅಂಕುರಾರೋಹಣ ನವಗ್ರಹ, ಮಹಾಲಕ್ಷ್ಮಿ, ಅಘೋರ ವಾಸ್ತು, ಪ್ರಧಾನ ಕಲಶಗಳ ಸ್ಥಾಪನೆ ಪೂಜೆ ರಾತ್ರಿ 8 ಗಂಟೆಗೆ ಗಣಹೋಮ, ರುದ್ರಹೋಮ, ನವಗ್ರಹ ಹೋಮ, ಶಕ್ತಿ ದುರ್ಗಾಹೋಮ ನಂತರ ಶಿಲಾಮೂರ್ತಿಗಳನ್ನು ನ್ಯಾಸದಿಗಳಿಂದ ಸಂಸ್ಕರಿಸಿ ಸ್ಥಾಪಿಸಲಾಗುವುದು ಎಂದು ಹೇಳಿದರು.
ಅ.27 ರಂದು ಸೋಮವಾರ ಬೆಳಿಗ್ಗೆ ಶ್ರೀ ಗಣಪತಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಿ ಶಿಲಾಮೂರ್ತಿಗೆ ಏಕವಾರ ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ ವಿಶೇಷ ಅಲಂಕಾರ ನಂತರ 9 ಗಂಟೆಯಿಂದ 10.30ರವರೆಗೆ ಶುಭಮುಹೂರ್ತದಲ್ಲಿ ಪುಜ್ಯರ ಅಮೃತ ಹಸ್ತದಿಂದ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಮಹಾಮಂಗಳಾರತಿ ಎರೆಹೊಸಳ್ಳಿ ಶ್ರೀ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಮತ್ತು ಅವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಜಿ ನೇತೃತ್ವದಲ್ಲಿ ನಡೆಯಲಿದೆ ಎಂದರು.ಬೆಳಿಗ್ಗೆ 11.30ಕ್ಕೆ ಸರ್ವಧರ್ಮ ಸಮನ್ವಯ ಭಾವೈಕೆತೆಯ ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸಿರಿಗೆರಿ ತರಳಬಾಳು ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಪ್ರಸನ್ನಾನಂದ ಸ್ವಾಮೀಜಿ, ನಿರಂಜನಾನಂದಪುರಿ ಮಹಾಸ್ವಾಮೀಜಿ, ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ, ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ, ಶತಶ್ರೀ ಶಂಕರಾತ್ಮನಂದ ಸರಸ್ವತಿ ಮಹಾಸ್ವಾಮೀಜಿ, ಪ್ರಭುಲಿಂಗ ಮಹಾಸ್ವಾಮೀಜಿ, ಬಸವರಾಜ ಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಸಭಾ ಉದ್ಘಾಟನೆಯನ್ನು ಶಾಸಕ ಬಿ.ಪಿ. ಹರೀಶ್ ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಾಜದ ಹಿರಿಯರಾದ ಎಸ್.ಜಿ. ರಾಜಶೇಖರಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಾನೂನು ಸಚಿವ ಎಚ್.ಕೆ. ಪಾಟೀಲ್, ಹಿಂದುಳಿದ ಅಭಿವೃದ್ಧಿ ಸಚಿವ ಶಿವರಾಜ್ ತಂಗಡಗಿ, ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಶಾಸಕ ಬಸವರಾಜ್ ರಾಯರಡ್ಡಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.ಅಧ್ಯಕ್ಷ ಜಿ.ಹನುಮಂತಗೌಡ, ಪ್ರಧಾನ ಕಾರ್ಯದರ್ಶಿ ಎಚ್.ನಿಂಗಪ್ಪ, ಖಜಾಂಚಿ ಯುವರಾಜ್ ಪಾಟೀಲ್, ನಿರ್ದೇಶಕರಾದ ಎಂ.ಲೋಹಿತ್, ಕೆ.ಮಲ್ಲಿಕಾರ್ಜುನ, ಎಚ್.ಸಿದ್ದಪ್ಪ, ಎಂ.ನಾಗರಾಜ್, ಬಿ.ಜಿ.ಗಿರೀಶ್, ಎಸ್.ಜಿ.ಶಿವಕುಮಾರ್, ಎನ್.ನಾಗರಾಜ್, ಸಾರಥಿ ಗ್ರಾಮಸ್ಥರು ಇತರರು ಹಾಜರಿದ್ದರು.