ಚಳ್ಳಕೆರೆ: ಈ ನಾಡು ಕಂಡ ಅಪ್ರತಿಮ ದಾರ್ಶನಿಕಿ, ಶ್ರೀಶೈಲ ಜಗದ್ಗುರು ಅನುಗ್ರಹಿಸಿದ ಮಹಾನ್ ಭಕ್ತಶ್ರೇಷ್ಠೆ ಹೇಮರೆಡ್ಡಿಮಲ್ಲಮ್ಮ ಕಡುಬಡತನದಲ್ಲಿ ಜನಿಸಿದರೂ ಮಹಿಳೆಯರ ಪಾವಿತ್ರತೆಯ ಮೌಲ್ಯವನ್ನು ಸಾರಿಹೇಳಿದ ಮಹಾನ್ ಮಹಿಳೆ ಎಂದು ಚನ್ನಗಾನಹಳ್ಳಿಯ ಸಮಾಜದ ಹಿರಿಯ ದುರೀಣ ತಿಮ್ಮಾರೆಡ್ಡಿ ತಿಳಿಸಿದರು.
ಪ್ರತಿಯೊಂದು ಸಮುದಾಯದಲ್ಲೂ ಅವರದ್ದೆಯಾದ ಜಾತಿ ಅಭಿಮಾನವಿರುತ್ತದೆ. ಆದರೆ, ಹೇಮರೆಡ್ಡಿಮಲ್ಲಮ್ಮ ಜಾತಿಕಟ್ಟಳೆಗಳನ್ನು ಮೀರಿ ನಿಂತು ಸಮಾಜದಲ್ಲಿ ಮಹಿಳೆಯರ ಮೌಲ್ಯವನ್ನು ಪ್ರತಿಪಾದಿಸುವ ಮೂಲಕ ಗೃಹಿಣಿಯಪಾವಿತ್ರೆಯ ಬಗ್ಗೆ ಸಾರಿ, ಸಾರಿ ಹೇಳಿದ್ದಾರೆ. ನಾವೆಲ್ಲರೂ ಹೇಮರೆಡ್ಡಿಮಲ್ಲಮ್ಮನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಹೇಮರೆಡ್ಡಿಮಲ್ಲಮ್ಮ ಅವರು ಚಿಕ್ಕವಯಸ್ಸಿನಲ್ಲೇ ಅಪಾರವಾದ ಜ್ಞಾನವನ್ನು ಹೊಂದಿದ್ದರು. ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ವಿಶ್ವಾಸವಿದ್ದ ಅವರು ಧಾರ್ಮಿಕ ವಿಚಾರಧಾರೆಗಳ ಬಗ್ಗೆ ಎಲ್ಲರೊಂದಿಗೆ ಚರ್ಚೆ ನಡೆಸುತ್ತಿದ್ದರು. ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯನೀಡದೆ ಸಾಮಾಜಿಕ ಜಾಗೃತಿ ಚಿಂತನೆಗಳಿಗೆ ಆದ್ಯತೆ ನೀಡಿದವರು. ಹೇಮರೆಡ್ಡಿಮಲ್ಲಮ್ಮ ಮಹಿಳೆಯರೂ ಸೇರಿದಂತೆ ಎಲ್ಲರಿಗೂ ಆದರ್ಶಪ್ರಾಯರು ಎಂದು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಿಳಾ ಸಮುದಾಯಕ್ಕೆ ಅಭಯ:
ರೆಡ್ಡಿಸಮುದಾಯದ ಮಹಿಳೆಯರು ಹೇಮರೆಡ್ಡಿಮಲ್ಲಮ್ಮ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಕೂಡಲೇ ಶಾಸಕರು ತಹಸೀಲ್ದಾರ್, ಇಒ ಮತ್ತು ಪೌರಾಯುಕ್ತರಿಗೆ ನಗರಸಭೆಯಿಂದ ನಿವೇಶನ ಮಂಜೂರು ಮಾಡುವ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಿದರು.