ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಾದೇಶ್ವರ ಬೆಟ್ಟದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಒಳಚರಂಡಿ ಕಾಮಗಾರಿಗೆ ಸರ್ಕಾರದ ವತಿಯಿಂದ 13.5 ಕೋಟಿ ಅನುದಾನ ಬಿಡುಗಡೆಯಾಗಲು ಬೇಕಿತ್ತು. ಈ ಬಗ್ಗೆ ಸಚಿವರು ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿಗಳಿಗೆ ಹಾಗೂ ಒಳಚರಂಡಿ ಮಂಡಳಿಯವರಿಗೆ ಶೀಘ್ರವೇ ಅನುದಾನ ನೀಡುವಂತೆ ಸೂಚನೆ ನೀಡಿದರು. ತಾಳಬೆಟ್ಟದಿಂದ ಕತ್ತಿ ಪವಾಡದವರೆಗೆ ನಿರ್ಮಾಣ ಮಾಡುತ್ತಿರುವ ಮೆಟ್ಟಿಲು ಕಾಮಗಾರಿ ಅಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿ, ಮಾರ್ಗ ಮಧ್ಯದಲ್ಲಿ ಶೌಚಾಲಯ ಹಾಗೂ ತಂಗುದಾಣ ಮಾಡಲು ಅರಣ್ಯ ಇಲಾಖೆಯವರು ತೊಂದರೆ ನೀಡಬಾರದು ಎಂದು ಉಪ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಪಾಟೀಲ್ ಅವರಿಗೆ ಸೂಚನೆ ನೀಡಿದರು.
ಇನ್ನು ಎಂಎಸ್ಐಎಲ್ ವತಿಯಿಂದ ಒಂದು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ಸೋಲಾರ್ ಪ್ರಾಜೆಕ್ಟ್ ಮಾಡಲಾಗಿದ್ದು, ಇನ್ನು 3 ತಿಂಗಳೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು.ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಆರಂಬಾಡಿ ಗ್ರಾಮದಲ್ಲಿ ಜುಂಜೇಗೌಡರು ನಿರ್ಮಾಣ ಮಾಡಿರುವ ರಂಗಸ್ವಾಮಿ ದೇವಾಲಯ ಅಳಿವಿನಂಚಿನಲ್ಲಿರುವುದರಿಂದ ಪುರಾತತ್ವ ಇಲಾಖೆ ವತಿಯಿಂದ ಜೀರ್ಣೋದ್ಧಾರ ಮಾಡಲು ಮುಂದಿನ ಬಜೆಟ್ ನಲ್ಲಿ 1 ಕೋಟಿ ನೀಡುವುದಾಗಿ ತಿಳಿಸಿದರು. ಈ ಕಾಮಗಾರಿಗೆ 3 ಕೋಟಿಗೂ ಹೆಚ್ಚು ಹಣ ಬೇಕಾಗಿರುವುದರಿಂದ ಹೆಚ್ಚುವರಿ ಹಣವನ್ನು ಪ್ರಾಧಿಕಾರದಿಂದ ನೀಡಿ ದೇವಾಲಯ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.108 ಮಲೆ ಮಹದೇಶ್ವರ ಪ್ರತಿಮೆಯ ಒಳ ಆವರಣದಲ್ಲಿ ಲೀಲೆಗಳ ಕಾಮಗಾರಿ ಪ್ರಗತಿಯಲ್ಲಿದ್ದು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು, ಇನ್ನು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹದಿಮೂರು ಕಾಮಗಾರಿಗಳಾದ ರಸ್ತೆ, ಶೌಚಾಲಯ ತಡೆಗೋಡೆ ಸೇರಿದಂತೆ ವಿನೂತನ ಮಾದರಿಯಲ್ಲಿ ದೀಪಾಲಂಕರದ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.