ಹೊಸಪೇಟೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಕಳೆದ ಐದು ದಿನಗಳಿಂದ ಬಿಜೆಪಿ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಸೂಚನೆ ಮೇರೆಗೆ ಶುಕ್ರವಾರ ಕೊನೆಗೊಂಡಿತು.
ಹಗರಿಬೊಮ್ಮನಹಳ್ಳಿ ಬಿಜೆಪಿ ಮಂಡಲದ ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಬಿಜೆಪಿಯವರಿಗೆ ದಲಿತರನ್ನು ಕಂಡರೆ ಆಗುವುದಿಲ್ಲ. ಆದ್ದರಿಂದ, ಅವರು ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಆರೋಪಿಸುತ್ತಿರುವುದು ಸರಿಯಲ್ಲ. ಆದರೆ, ಬಿಜೆಪಿಯವರು ಯಾರನ್ನೂ ದ್ವೇಷಿಸುವುದಿಲ್ಲ. ದಲಿತರ ಹಣವನ್ನು ಲೂಟಿ ಮಾಡಿರುವ ನಾಗೇಂದ್ರ ಅವರು ಸಚಿವರಾಗಿರುವುದು ಎಷ್ಟು ಸರಿ? ಅವರು ಮಾಡಿರುವ ಹಗರಣವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ವಾಲ್ಮೀಕಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಸಲ್ಲಬೇಕಾದ ಹಣವನ್ನು ಅವರು ದುರಪಯೋಗ ಪಡಿಸಿಕೊಂಡಿರುವುದರಿಂದ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಸಂಜೀವ ರೆಡ್ಡಿ ಮಾತನಾಡಿ, ನಾಗೇಂದ್ರ ಅವರು ರಾಜೀನಾಮೆ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಬೇರೆ ರೀತಿಯಲ್ಲಿಯೇ ಹೋರಾಟ ನಡೆಸಲು ಪಕ್ಷ ನಿರ್ಧರಿಸಿದೆ, ರಾಜೀನಾಮೆ ನೀಡುವವರೆಗೂ ಹೊರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಬಿಜೆಪಿ ಮುಖಂಡರಾಧ ಚನ್ನಬಸವನಗೌಡ ಪಾಟೀಲ್, ಅಯ್ಯಾಳಿ ತಿಮ್ಮಪ್ಪ, ಕೆ.ಎಸ್. ರಾಘವೇಂದ್ರ, ಕಿಚಡಿ ಕೊಟ್ರೇಶ್, ಬೆಣಗಲ್ ಪ್ರಕಾಶ್, ಜೋಗಿ ಹನುಮಂತ ಗುಂಡದ ಕೃಷ್ಣ, ನಾಗರಾಜ, ಮಹೇಂದ್ರ, ಪಂಪಾಪತಿ, ಗಂಡಿ ಬಸವರಾಜ್, ಮಹೇಂದ್ರ ಹಂಪಾಪಟ್ಟಣ, ವೀರೇಶ್ವರ ಸ್ವಾಮಿ, ಮಂಜುನಾಥ, ರವಿಕಿರಣ, ಮಜ್ಜಿಗೆ ನಾಗರಾಜ್, ಮುಟ್ಟುಗನಹಳ್ಳಿ ಕೊಟ್ರೇಶ್, ನಟರಾಜ್, ಹೊನ್ನೂರಪ್ಪ, ಇಮ್ತಿಯಾಸ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಪಿ.ಮುರಳಿಧರ್ ನೇತೃತ್ವದಲ್ಲಿ ಪಿಐಗಳಾದ ಡಿ.ಹುಲುಗಪ್ಪ, ಗುರುರಾಜ ಕಟ್ಟಿಮನಿ, ಮಹಮದ್ ಗೌಸ್, ಫೈಜುಲ್ಲಾ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.