ಕನ್ನಡಪ್ರಭವಾರ್ತೆ ಹನೂರು
ಪಟ್ಟಣದ ಮಾರಿಗುಡಿ ಬೀದಿ ನಿವಾಸಿ ನಾಗೇಂದ್ರ ಮತ್ತು ಮೀನಾ ಪುತ್ರಿ ಲಕ್ಷ್ಮಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 569 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಲಕ್ಷ್ಮಿ ಅವರ ತಂದೆ ನಾಗೇಂದ್ರ ಗಾರೆ ಕೆಲಸ ಮಾಡಿಕೊಂಡು ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ತಾಯಿ ಮೀನಾ ಸಹ ಪತಿಗೆ ಸಾಥ್ ನೀಡಿ ಪ್ರತಿನಿತ್ಯ ಹೂ ಕಟ್ಟಿ ಮಕ್ಕಳ ಓದಿಗೆ ನೆರವಾಗಿದ್ದಾರೆ.ತಂದೆ ತಾಯಿಗೆ ತಕ್ಕ ಮಗಳು:
ಲಕ್ಷ್ಮಿ ಪಟ್ಟಣದ ಕ್ರಿಸ್ತ ರಾಜ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು. ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ 98, ಇಂಗ್ಲಿಷ್ 91, ವ್ಯವಹಾರ ಅಧ್ಯಯನ 100, ಲೆಕ್ಕಶಾಸ್ತ್ರ 98, ಸಂಖ್ಯಾಶಾಸ್ತ್ರ 100, ಕಂಪ್ಯೂಟರ್ ವಿಜ್ಞಾನದಲ್ಲಿ 82, ಒಟ್ಟು 569 ಅಂಕಗಳನ್ನು ಪಡೆದಿದ್ದಾಳೆ. ಬಿಡುವಿನ ವೇಳೆ ತಾಯಿ ಜೊತೆ ಹೂ ಕಟ್ಟಿ ಈ ಸಾಧನೆ ಮಾಡಿದ್ದಾಳೆ.ಲಕ್ಷಿ ಸಾಧನೆಗೆ ಕ್ರಿಸ್ತರಾಜ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಪಾ.ರೋಷನ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇಶ್ ಎಂ, ಪೋಷಕರು, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.ನಾವು ವಿದ್ಯಾಭ್ಯಾಸ ಮಾಡಿಲ್ಲ ಇವತ್ತಿನ ಪ್ರಪಂಚಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಅತಿ ಮುಖ್ಯ, ನಾವು ಕಷ್ಟ ಪಟ್ಟಂತೆ ನಮ್ಮ ಮಕ್ಕಳು ಕಷ್ಟಪಡಬಾರದು ಎಂಬ ಉದ್ದೇಶದಿಂದ ಉತ್ತಮ ಶಿಕ್ಷಣ ಕೊಡಿಸಲಾಗುತ್ತಿದೆ. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ವಿದ್ಯೆ ನೀಡಿ ಉನ್ನತ ವಿದ್ಯಾರ್ಥಿಯಾಗಿ ಉನ್ನತ ಹುದ್ದೆ ಅಲಂಕಾರ ಮಾಡುವುದು ಮಕ್ಕಳು ತಂದೆ ತಾಯಿಗೆ ನೀಡುವ ಗೌರವವಾಗಿದೆ.
ನಾಗೇಂದ್ರ, ಲಕ್ಷ್ಮಿಯ ತಂದೆ