ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಮುಂದುವರಿಸುವಂತೆ ಆಗ್ರಹಿಸಿ ಹೆದ್ದಾರಿ ತಡೆ

KannadaprabhaNewsNetwork | Published : Jun 3, 2025 12:30 AM
ಮಾಗಡಿ ತಾಲೂಕಿನಲ್ಲಿ ಶ್ರೀರಂಗ ಏತ ನೀರಾವರಿ ಯೋಜನೆ ಮೂಲಕ ಕುಣಿಗಲ್ ಹೋಬಳಿಯ ಹುತ್ರಿದುರ್ಗ ಕೆರೆಗಳು ಸೇರಿ ತಾಲೂಕಿನ 83 ಕೆರೆಗಳನ್ನು ನೀರು ತುಂಬಿಸುವ ಯೋಜನೆ ಅನುಷ್ಠಾನದಲ್ಲಿ ಇದೆ.

ಕನ್ನಡಪ್ರಭ ವಾರ್ತೆ ಮಾಗಡಿ

ತುಮಕೂರಿನ ಕೆಲ ಜನಪ್ರತಿನಿಧಿಗಳು ರಾಜಕೀಯ ಬೆಳೆ ಬೇಯಿಸಿಕೊಳ್ಳುವ ಹಿನ್ನೆಲೆಯಲ್ಲಿ ರೈತನ ನಡುವೆ ಕಿತ್ತಾಡುವಂತೆ ಸನ್ನಿವೇಶ ನಿರ್ಮಾಣ ಮಾಡಿದ್ದು, ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮುಂದುವರಿಸುವಂತೆ ಆಗ್ರಹಿಸಿ ಜೂ. 5 ರಂದು ತಾಲೂಕಿನ ಮರೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಬಮುಲ್ ನಿರ್ದೇಶಕ ಎಚ್‌.ಎನ್. ಅಶೋಕ್ ಎಚ್ಚರಿಕೆ ನೀಡಿದರು.

ಪಟ್ಟಣದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಾಗಡಿ ತಾಲೂಕಿನಲ್ಲಿ ಶ್ರೀರಂಗ ಏತ ನೀರಾವರಿ ಯೋಜನೆ ಮೂಲಕ ಕುಣಿಗಲ್ ಹೋಬಳಿಯ ಹುತ್ರಿದುರ್ಗ ಕೆರೆಗಳು ಸೇರಿ ತಾಲೂಕಿನ 83 ಕೆರೆಗಳನ್ನು ನೀರು ತುಂಬಿಸುವ ಯೋಜನೆ ಅನುಷ್ಠಾನದಲ್ಲಿ ಇದ್ದು ಇದಕ್ಕಾಗಿ ಹೇಮಾವತಿ ನೀರಿನ ಮೂಲಕ ಕೆರೆಗಳನ್ನು ತುಂಬಿಸಲು ಮುಕ್ಕಾಲು ಟಿಎಂಸಿ ನೀರು ನಮಗೆ ಮಂಜೂರಾತಿಯಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮೂಲಕ ರಾಮನಗರ ಮತ್ತು ಕನಕಪುರ ತಾಲೂಕಿಗೆ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕರಾದ ಸುರೇಶ್ ಗೌಡ, ಜೆಡಿಎಸ್ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣನವರು ಜನಗಳನ್ನು ದಿಕ್ಕು ತಪ್ಪಿಸಿ ಯಾವುದೇ ಕಾರಣಕ್ಕೂ ಮಾಗಡಿಗೆ ನೀರು ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತಿದ್ದಾರೆ.

ಇದು ರಾಜಕೀಯ ಪ್ರೇರಿತವಾಗಿ ಹೋರಾಟ ಮಾಡುತ್ತಿದ್ದು ತುಮಕೂರಿನ ರೈತರ ಮಾಗಡಿಗೆ ನೀರು ಕೊಡುವುದಿಲ್ಲ ಎಂದು ಹೇಳುತ್ತಿಲ್ಲ. ಇವರು ಮುಂದಿನ ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಈಗಿದಂಲೇ ಅಡಿಪಾಯ ಹಾಕುತ್ತಿದ್ದು ಚುನಾವಣೆ ಸಂದರ್ಭದಲ್ಲಿ ನಿಮ್ಮ ಅಭಿವೃದ್ಧಿ ಹೇಳಿ ಜನಗಳಲ್ಲಿ ಮತ ಕೇಳಿ ಇದನ್ನು ಬಿಟ್ಟು ಮಾಗಡಿಗೆ ಮತ್ತು ಕುಣಿಗಲ್ ರೈತರಿಗೆ ಎತ್ತಿ ಕಟ್ಟುವ ಕೆಲಸವನ್ನು ಅಲ್ಲಿನ ಜನಪ್ರತಿನಿಧಿಗಳು ನಿಲ್ಲಿಸಬೇಕು. ನಮಗೆ ಮಂಜುರಾಗಿರುವ ನೀರನ್ನು ಕೇಳುತ್ತಿದ್ದೇವೆ. ಅದನ್ನು ಬಿಟ್ಟು ತುಮಕೂರಿಗೆ ಮಂಜೂರಾಗಿರುವ 24 ಟಿಎಂಸಿ ನೀರಿನಲ್ಲಿ ನಾವು ಯಾವುದೇ ನಿಮ್ಮ ಪಾಲಿನ ನೀರನ್ನು ಕೇಳುತ್ತಿಲ್ಲ.

ಇಷ್ಟು ದೊಡ್ಡ ಮಟ್ಟದ ಹೋರಾಟ ಮಾಡುವ ಅನಿವಾರ್ಯವಾದರೂ ಇತ್ತ, ವಿಧಾನಸೌಧದಲ್ಲಿ ಮಂತ್ರಿಗಳ ಜೊತೆ ಚರ್ಚೆ ಮಾಡಿ ಯಾವ ತಾಲೂಕಿಗೆ ಎಷ್ಟು ನೀರು ಮಂಜೂರಾಗಿದೆ. ಇದನ್ನು ಯಾವ ರೀತಿ ಸಮನಾಗಿ ಹಂಚಬೇಕು. ಗುಬ್ಬಿಯಲ್ಲೇ ಜಾಕ್‌ಪಾಲ್‌ಗಳನ್ನು ಇಟ್ಟಿ ನೀರು ನಮಗೆ ಎಷ್ಟು ಪ್ರಮಾಣ ಅರಿಯಬೇಕೋ ಅಷ್ಟು ಪ್ರಮಾಣದಲ್ಲಿ ಹರಿಸಿ ನಂತರ ವಾಲ್ ಗಳನ್ನು ಬಂದ್ ಮಾಡಿ ಒಂದು ಹನಿಯು ಹೆಚ್ಚಿಗೆ ನೀರನ್ನು ಬಿಡಬೇಡಿ. ಆದರೆ ನಮ್ಮ ರೈತರನ್ನು ಎತ್ತಿಕಟ್ಟಿ ಉಗ್ರ ಹೋರಾಟ ಮಾಡುತ್ತಿದ್ದು ಇದಕ್ಕಾಗಿ ನಾವು ಕೂಡ ಪಕ್ಷಾತೀತವಾಗಿ ಜೂನ್ 5 ರಂದು ಗುರುವಾರ ಮರೂರು ಹ್ಯಾಂಡ್ ಪೋಸ್ಟ್ ಬಳಿ ರೈತ ಸಂಘದ ಮುಖಾಂತರ ತುಮಕೂರು ಜನಪ್ರತಿನಿಧಿಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ. ಇದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಎಚ್. ಎನ್. ಅಶೋಕ್ ಮನವಿ ಮಾಡಿದರು.

ತುಮಕೂರು ಹಾಲು ಬಂದ್ ಮಾಡುತ್ತೇವೆ:

ತುಮಕೂರು ಗ್ರಾಮಾಂತರ ಶಾಸಕರಾದ ಸುರೇಶ್ ಗೌಡ ಮಾಗಡಿ ತಾಲೂಕಿನ ಹೆಣ್ಣು ಮಗಳನ್ನು ಮದುವೆಯಾಗಿದ್ದಾರೆ. ಅವರು ನಮ್ಮ ತಾಲೂಕಿನ ಅಳಿಯರಾಗಿದ್ದು ಅವರು ಮಾಗಡಿಗೆ ಯಾವುದೇ ಕಾರಣಕ್ಕೂ ನೀರು ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತಾರೆ. ನೀವು ಸಂಬಂಧವನ್ನು ನಮ್ಮ ತಾಲೂಕಿನಲ್ಲಿ ಬೆಳೆಸಿಕೊಂಡಿದ್ದೀರಾ, ನಮ್ಮ ತಾಲೂಕಿನ ರೈತರಿಗೆ ನೀರು ಕೊಡಲ್ಲ ಎಂದು ಹೇಳಲು ಹೇಗೆ ಮನಸ್ಸು ಬರುತ್ತದೆ. ಇದೇ ರೀತಿ ರೈತರನ್ನು ಎತ್ತಿ ಕಟ್ಟಿ ಹೋರಾಟ ಮುಂದುವರೆಸಿದರೆ ನನಗೂ ರೈತರ ಕಷ್ಟ ಗೊತ್ತಿದೆ.

ಆದರೂ ಅನಿವಾರ್ಯದಿಂದ ತುಮಕೂರಿನಿಂದ ಬರುವ ಹಾಲು ಈಗಾಗಲೇ ಕುದೂರು ಮತ್ತು ಬೆಂಗಳೂರಿನ ರಾಜಾಜಿನಗರ ವರೆಗೂ ಹಾಲು ಮಾರಾಟವಾಗುತ್ತಿದೆ. ನಿಮ್ಮ ರೀತಿ ನಾವು ಹಾಲನ್ನು ನಿಲ್ಲಿಸಿದರೆ ಆ ಭಾಗದ ರೈತರಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದು ನಿಮಗೂ ತಿಳಿಯಬೇಕು. ಹೋರಾಟ ಇದೇ ರೀತಿ ಮುಂದುವರಿದರೆ ತುಮಕೂರಿನ ಹಾಲನ್ನು ನಮ್ಮ ಭಾಗದಲ್ಲಿ ಮಾರಾಟ ಮಾಡದಂತೆ ನಿಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಬಮೂಲ್ ನಿರ್ದೇಶಕ ಅಶೋಕ್ ಎಚ್ಚರಿಕೆ ನೀಡಿದರು.ಹೋರಾಟದ ಮೂಲಕ ಹೋಗುವುದು ಬೇಡಾ:

ತುಮಕೂರಿನ ಜನ ಈಗಾಗಲೇ ಹೋರಾಟ ಮಾಡುತ್ತಿದ್ದು, ಹೇಮಾವತಿ ನೀರು ಮಾಗಡಿ ತಾಲೂಕಿನ ಕುಡಿಯುವ ನೀರು ಯೋಜನೆಗಾಗಿ ಮುಕ್ಕಾಲು ಟಿಎಂಸಿ ನೀರು ನಮಗೆ ಮಂಜೂರಾತಿ ಆಗಿರುವುದರಿಂದ ನಾವು ತುಮಕೂರಿನ ರೀತಿ ಹೋರಾಟ ಮಾಡದೆ ನ್ಯಾಯಾಲಯದ ಮೂಲಕ ನಮ್ಮ ನೀರನ್ನು ಪಡೆಯುವ ಕೆಲಸ ಮಾಡಬೇಕು ಎಂದು ಕೆಡಿಪಿ ಸದಸ್ಯ ಟಿ.ಜಿ. ವೆಂಕಟೇಶ ಹೇಳಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಕಲ್ಕೆರೆ ಶಿವಣ್ಣ, ಆಗ್ರೋ ಪುರುಷೋತ್ತಮ್ ಜೆ.ಪಿ. ಚಂದ್ರೇಗೌಡ, ಕಲ್ಕೆರೆ ಕುಮಾರ್, ಚಿಕ್ಕರಾಜು, ತಗ್ಗೀಕುಪ್ಪೆ ರಾಜಣ್ಣ, ಶ್ರೀಪತಿಹಳ್ಳಿ ರಾಜಣ್ಣ, ಅರಳುಕುಪ್ಪೆ ಕಾಂತರಾಜು, ಶಿವರಾಜು, ಮಾಂತೇಶ್, ಸುರೇಶ್, ನರೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.