ಶಿರಸಿ: ಕಳೆದ ಎರಡು ವರ್ಷಗಳಿಂದ ರಸ್ತೆ ಸಂಪೂರ್ಣ ಕಿತ್ತು ನನೆಗುದಿಗೆ ಬಿದ್ದಿದ್ದ ನಿಲೇಕಣಿ ಭಾಗದಲ್ಲಿ ವಾರದಿಂದ ರಾಷ್ಟ್ರೀಯ ಹೆದ್ದಾರಿ 766ಇ ಕಾಮಗಾರಿ ಆರಂಭಗೊಂಡಿದೆ.
ಶಿರಸಿ-ಕುಮಟಾ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೇಗೊಂಡು ಕಾಮಗಾರಿ ಪ್ರಗತಿಯಲ್ಲಿದೆ. ಮೂರು ವರ್ಷದೊಳಗಡೆ ಕಾಮಗಾರಿ ಮುಕ್ತಾಯಗೊಳ್ಳಬೇಕೆಂಬ ಆದೇಶವಿದ್ದರೂ ಅರಣ್ಯ ಜಾಗ, ಭೂಸ್ವಾಧೀನ ಪ್ರಕ್ರಿಯೆ, ತಾಂತ್ರಿಕ ಸಮಸ್ಯೆ ಹಾಗೂ ಗುತ್ತಿಗೆದಾರರ ವಿಳಂಬದಿಂದ ಕಳೆದ ಮೂರು ವರ್ಷದ ಹಿಂದೆ ಕಾಮಗಾರಿ ವೇಗ ಪಡೆದುಕೊಂಡು ಶಿರಸಿ ತಾಲೂಕಿನಲ್ಲಿ ಬಹುತೇಕ ರಸ್ತೆ ಹಾಗೂ ಸೇತುವೆ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ ನಗರದ ನಿಲೇಕಣಿ ಭಾಗದಲ್ಲಿ 2 ವರ್ಷದ ಹಿಂದೆ ರಸ್ತೆ ಅಗೆದು ಅರ್ಧಂಬರ್ಧ ಚರಂಡಿ ನಿರ್ಮಿಸಿ ಹಾಗೆಯೇ ಬಿಟ್ಟಿದ್ದ ಪರಿಣಾಮ ರಸ್ತೆಯು ಸಂಪೂರ್ಣ ಹೊಂಡ-ಗುಂಡಿಗಳಾಗಿ ಮಳೆಗಾಲದಲ್ಲಿ ತೀವ್ರ ಸಮಸ್ಯೆ ಎದುರಿಸಿದ್ದರು. ರಸ್ತೆಯ ದುಸ್ತಿಯ ವಿರುದ್ಧ ಸ್ಥಳೀಯರೆಲ್ಲರೂ ಸೇರಿ ಹೊಂಡದಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟಿಸಿದ್ದರು. ಆದರೂ ಎನ್ಎಚ್ಎಐ ಹಾಗೂ ಗುತ್ತಿಗೆ ಕಂಪೆನಿ ಕ್ಯಾರೇ ಎನ್ನದೇ ನಿರ್ಲಕ್ಷ್ಯ ವಹಿಸಿತ್ತು. ರಸ್ತೆ ಹೊಂಡ-ಗುಂಡಿಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ, ಮಳೆಗಾಲ ಮುಕ್ತಾಯಗೊಂಡ ಬಳಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಖಡಕ್ ಆದೇಶ ನೀಡಿದ್ದರು. ಆ ನಂತರ ಹೊಂಡ-ಗುಂಡಿಗಳಿಗೆ ಜೆಲ್ಲಿಕಲ್ಲು ಹಾಕಿದ್ದರು.ನನೆಗುದ್ದಿಗೆ ಬಿದ್ದಿದ್ದ ನಿಲೇಕಣಿ ತನಿಖಾ ಠಾಣೆಯಿಂದ ಮೀನು ಮಾರುಕಟ್ಟೆವರೆಗಿನ ರಾಷ್ಟ್ರೀಯ ಹೆದ್ದಾರಿ 766ಇ ಕಾಮಗಾರಿಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶದ ಮೇರೆಗೆ ಗುರುವಾರದಿಂದ ಗುತ್ತಿಗೆ ಕಂಪೆನಿ ಆರಂಭಿಸಿದ್ದು, ಆದಷ್ಟು ಶೀಘ್ರವಾಗಿ ರಸ್ತೆ ಕಾಮಗಾರಿ ಮುಕ್ತಾಯಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.