ಸಚ್ಚಿದಾನಂದಾಶ್ರಮದಲ್ಲಿ ದೇವಾಲಯಗಳ ಪ್ರತಿಷ್ಠಾಪನೆ ಉತ್ಸವ
ಸನಾತನ ಹಿಂದು ಸಂಸ್ಕೃತಿಯಲ್ಲಿ ಗುರು ಪರಂಪರೆ ಬಗ್ಗೆ ಶಿಷ್ಯವೃಂದ ಅಪಾರ ನಂಬಿಕೆ ಇಟ್ಟಿದ್ದು, ಗುರುವಿನ ಮೂಲಕವೇ ದೈವತ್ವವನ್ನು ಕಾಣುವ ನಮ್ಮ ಆಚಾರ ವಿಚಾರಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದ ಸತೀಶ್ ಶರ್ಮ ಗೂರೂಜಿ ತಿಳಿಸಿದರು.
ನಗರದ ಹಾಸನ ರಸ್ತೆ ಶ್ರೀ ವಿದ್ಯಾನಗರದ ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ವಿಷ್ಣು ಪಂಚಾಯತನ ವೈಶಿಷ್ಟ್ಯತೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯವರ ಸನ್ನಿಧಿಯಲ್ಲಿ ಕ್ಷೇತ್ರಪಾಲಕ ಶ್ರೀ ಪಂಚಮುಖಿ ಆಂಜನೇಯಸ್ವಾಮಿ, ಶ್ರೀ ಪಂಚಮುಖಿ ಗಣಪತಿ, ಶ್ರೀ ಕಂಠೇಶ್ವರ, ಶ್ರೀ ಅಂಬಿಕಾದೇವಿ ಸೂರ್ಯದೇವರ ದೇವಾಲಯಗಳ ಪ್ರತಿಷ್ಠಾಪನಾ ಮಂಡಲ ಮಹೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಸುದರ್ಶನ ಹೋಮ, ಶ್ರೀ ಲಕ್ಷ್ಮೀ ನರಸಿಂಹ ಮೂಲ ಮಂತ್ರ ಹೋಮ, ಶತ ಕುಂಭಾಭಿಷೇಕ ಮತ್ತು ಮಹಾ ಅಭಿಷೇಕ ವಿಶೇಷ ಪೂಜಾ ಕಾರ್ಯಗಳ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸನಾತನ ಹಿಂದು ಧರ್ಮದಲ್ಲಿ ಗುರು ಪರಂಪರೆಯ ಮೇಲೆ ಅಪಾರವಾದ ನಂಬಿಕೆ ಇಟ್ಟು ಗುರುವಿನ ಮೂಲಕ ದೈವತ್ವವನ್ನು ಕಾಣುವ ನಮ್ಮ ಸಂಸ್ಕೃತಿಯೂ ಅತ್ಯಂತ ಮಹತ್ವದಾಗಿದ್ದು, ಹರ ಮುನಿದರೂ ಗುರು ಕಾಯುವನು ಎಂಬ ನಂಬಿಕೆಯೇ ಶಿಷ್ಯ ಕುಲವನ್ನು ಕೈಹಿಡಿದು ನಡೆಸುತ್ತಿದ್ದು, ಗುರುವಿನ ಅನುಗ್ರಹ ಹಾಗೂ ಮಾರ್ಗದರ್ಶನವನ್ನು ಯಾರು ಹೊಂದಿರುತ್ತಾರೋ ಅವರ ಬದುಕು ಮತ್ತೊಬ್ಬರಿಗೆ ಮಾದರಿಯಾಗಿರುತ್ತದೆ ಎಂದು ಹೇಳಿದರು.
ಆಗಮಿಕರಾದ ಮುರುಳಿ ಕೇದ್ಲಾಯ್ ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಪರಂಪರಾ ಅವಧೂತ ಸತೀಶ್ ಶರ್ಮ ಗೂರೂಜಿಗಳು ನಿರಂತರವಾಗಿ ಹವನ, ಹೋಮಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದು ಜಾತಿ, ಮತ, ಧರ್ಮ ನೋಡದೆ ಸರ್ವಜನಾಂಗದ ಶಾಂತಿಯ ತೋಟದಂತೆ ಎಲ್ಲರನ್ನು ಒಂದೆಡೆ ಸೇರಿಸಿಕೊಂಡು ಧಾರ್ಮಿಕ ಸಮಾರಂಭಗಳನ್ನು ವಿಶೇಷವಾಗಿ ಆಚರಿಸುವ ಮೂಲಕ ಸಾಮರಸ್ಯವನ್ನು ಗಟ್ಟಿಗೊಳಿಸುವ ಸುಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಗೂರೂಜಿ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಎರ್ಪಡಿಸಲಾಗಿತ್ತು,ಕಾರ್ಯಕ್ರಮದಲ್ಲಿ ಶ್ರೀಲಕ್ಷ್ಮೀ ನರಸಿಂಹ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು, ಶ್ರೀ ವಿದ್ಯಾನಗರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು, ಅವಧೂತ ಶಿಷ್ಯ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.