-60 ಸಾವಿರಕ್ಕೂ ಹೆಚ್ಚು ಜನರಿಂದ ಭಕ್ತಿ ಭಾವದ ಶೋಭಾಯಾತ್ರೆ ವೀಕ್ಷಣೆ । ಆಗಸದಲ್ಲಿ ರಂಗುರಂಗಿನ ಚಿತ್ತಾರ ಮೂಡಿಸಿದ ಬೆಳಕಿನ ಚಾಕಚಾಕ್ಯತೆ
-----ಕನ್ನಡಪ್ರಭ ವಾರ್ತೆ ಯಾದಗಿರಿ
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳ, ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಆಶ್ರಯದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಸಮೀಪದ ಜೈಭವಾನಿ ದೇವಸ್ಥಾನ ಬಳಿ ಪ್ರತಿಷ್ಠಾಪಿಸಲಾಗಿದ್ದ ಮಹಾಗಣಪತಿ ವಿಸರ್ಜನೆ ಅದ್ಧೂರಿ, ಭವ್ಯ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳು ಜಂಟಿಯಾಗಿ ಕಳೆದ ನಾಲ್ಕು ವರ್ಷಗಳಿಂದ ಈ ಅದ್ಧೂರಿ ಗಣೇಶ ಉತ್ಸವಕ್ಕೆ ಚಾಲನೆ ನೀಡಿದ್ದು, ಈ 22 ದಿನಗಳಲ್ಲಿ ಲಕ್ಷಾಂತರ ಜನರು ಗಣಪತಿ ದರ್ಶನಕ್ಕೆ ಸಾಕ್ಷಿಯಾಗಿದ್ದಾರೆ. ವಿಸರ್ಜನೆ ದಿನವಾದ ಶನಿವಾರ, ಯಾದಗಿರಿ ಸೇರಿದಂತೆ ಕಲಬುರಗಿ, ರಾಯಚೂರು, ವಿಜಯಪುರ, ಬೀದರ್, ತೆಲಂಗಾಣದ ನಾರಾಯಣಪೇಟ್, ಕೊಡಂಗಲ್ ಸೇರಿದಂತೆ ಅನೇಕ ಭಾಗಗಳಿಂದ ಸುಮಾರು 60 ಸಾವಿರಕ್ಕೂ ಹೆಚ್ಚು ಜನರು ಶೋಭಾಯಾತ್ರೆ ಪಾಲ್ಗೊಂಡು, ಗಣೇಶ ವೈಭವ ಕಣ್ತುಂಬಿಕೊಂಡರು. ಮಧ್ಯಾಹ್ನದ ಮಹಾ ಮಂಗಳಾರತಿ ನಂತರ ಬೃಹತ್ ಕ್ರೇನ್ ಮೂಲಕ ವಿಗ್ರಹಗಳನ್ನು ಅಲಂಕೃತ ಟ್ರ್ಯಾಕ್ಟರ್ನಲ್ಲಿರಿಸಿ, ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಬೆಳಕಿನ ಚಿತ್ತಾರಗಳು ಮುಗಿಲೆತ್ತರಕ್ಕೆ ಚಿಮ್ಮಿ ಆಗಸದಲ್ಲಿ ಮಿಂಚಿನ ಸಂಚಾರ ಮೂಡಿಸಿದ್ದವು. ಬೆಂಗಳೂರಿನಿಂದ ಬಂದಿದ್ದ ತಂಡದ ಈ ಕೈಚೆಳಕ ಆಗಸದಲ್ಲಿ ರಂಗುರಂಗಿನ ಚಿತ್ತಾರಗಳ ಮೂಡಿಸಿದ್ದರೆ, ಮೂಡಲಗಿಯಿಂದ ತರಿಸಿಕೊಂಡಿದ್ದ ಧ್ವನಿವರ್ಧಕಗಳಿಂದ ಹೊಮ್ಮುತ್ತಿದ್ದ ಸಂಗೀತದ ಝೇಂಕಾರಗಳು ಭೂಮಿ ಬಿರಿಯುವಂತಹ ಅನುಭವ ನೀಡಿತ್ತು. ಕೇಸರಿ ಶಾಲುಗಳ ಹೊದ್ದು, ಕಿವಿಗಡಚಿಕ್ಕುವ ಸಂಗೀತ ಹಾಗೂ ಬೆಳಕಿನ ಚಿತ್ತಾರಕ್ಕೆ ಹೆಜ್ಜೆ ಹಾಕುತ್ತ ಸಾಗಿದ ಸಾವಿರಾರು ಭಕ್ತಗಣದ ಜೈಕಾರದ ಝೇಂಕಾರಗಳು ಗುಡುಗು ಸಿಡಿಲಿನ ಅರ್ಭಟದಂತೆ ಭಾಸವಾಗುತ್ತಿತ್ತು.ಹೈದರಾಬಾದಿನಿಂದ ವಿಶೇಷವಾಗಿ ತರಿಸಲಾಗಿದ್ದ 19 ಅಡಿ ಎತ್ತರದ ಗಣೇಶ ವಿಗ್ರಹ, ಧನಸ್ಸುಧಾರಿ ಶ್ರೀರಾಮಚಂದ್ರ ಹಾಗೂ ಎದೆ ಬಗೆದು ನಿಂತ ಹನುಮಾನ್ ಬೃಹತ್ ವಿಗ್ರಹಗಳು ಕಣ್ಮನ ಸೆಳದವು. ಖಡ್ಗಧಾರಿ ಶಿವಾಜಿ ಮಹಾರಾಜರ ವಿಗ್ರಹ ಜನಾಕರ್ಷಿಸಿತು. ದೆಹಲಿಯಿಂದ ಬಂದಿದ್ದ ಕಲಾತಂಡಗಳ ಅಘೋರಿಗಳ ರೂಪಕದ ನೃತ್ಯ ಪ್ರದರ್ಶನ ನೋಡುಗರ ಎದೆ ಝಲ್ಲೆನ್ನಿಸಿತ್ತು. ಉತ್ತರ ಪ್ರದೇಶ- ಹಿಮಾಲಯ ಭಾಗದಲ್ಲಿ ಕಾಣಸಿಗುವ ಅಘೋರಿಗಳ ರೂಪಕದ ಈ ಕಲಾತಂಡಗಳ ಪ್ರದರ್ಶನ ಭಾರಿ ಸಾವಿರಾರು ಜನರ ಅಚ್ಚರಿ ಮೂಡಿಸಿ, ಅನೇಕರು ಭಕ್ತಿಪರವಶರಾದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಮಾರ್ಗವಾಗಿ, ನೇತಾಜಿ ಸುಭಾಶ್ಚಂದ್ರ ಭೋಸ್, ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಕನಕದಾಸರ ವೃತ್ತ, ಡಾ. ಬಾಬು ಜಗಜೀವನ ರಾಂ ವೃತ್ತ, ಮಹಾತ್ಮಾ ಗಾಂಧಿ ವೃತ್ತ ಹಾಗೂ ಶಿವಾಜಿ ಚೌಕ್, ಮೈಲಾಪೂರ್ ಬೇಸ್ ಮುಖ್ಯರಸ್ತೆಗಳ ಮೂಲಕ ದೊಡ್ಡಕೆರೆಯಲ್ಲಿ ಮಹಾ ಗಣಪತಿ ವಿಸರ್ಜನೆ ಮೆರವಣಿಗೆ ಆಯೋಜಿಸಲಾಗಿತ್ತು. ಶೋಭಾಯಾತ್ರೆ ವೀಕ್ಷಿಸಲು ಗಲ್ಲಿಗಲ್ಲಿಗಳಿಂದ ಜನ ತಂಡೋಪತಂಡವಾಗಿ ಮುಖ್ಯರಸ್ತೆಗೆ ಬಂದು ನಿಂತು, ದರುಶನ-ಮಂಗಳಾರತಿ ಮಾಡಿ ಭಕ್ತಿ ಭಾವ ಪ್ರದರ್ಶಿಸುತ್ತಿದ್ದರು.ಪ್ರತಿದಿನ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಷ್ಟ್ರಭಕ್ತಿ ಪ್ರೇರೇಪಿಸುವ, ಬಿಂಬಿಸುವ ವಿವಿಧ ಚಟುವಟಿಕೆಗಳು ಜನಮನ ಸೂರೆಗೊಂಡಿದ್ದವು. ಭರತನಾಟ್ಯ, ಮಲ್ಲಗಂಬ ಪ್ರದರ್ಶನ, ರಂಗೋಲಿ ಸ್ಪರ್ಧೆ ಮುಂತಾದ ದಿನಂಪ್ರತಿ ಕಾರ್ಯಕ್ರಮಗಳು ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧದವರನ್ನು ಭಕ್ತಿ ಭಾವದಲ್ಲಿ ತೇಲಿಸಿದ್ದವು. ದಿನವೊಂದಕ್ಕೆ ಆರೇಳು ಸಾವಿರ ಜನರು ಹಿಂದೂ ಮಹಾ ಗಣಪತಿ ದರುಶನಕ್ಕೆ ಆಗಮಿಸುತ್ತಿದ್ದರು. ಜಾತ್ರಾ ಮಹೋತ್ಸವದಂತೆ ವಾತಾವರಣ ನಿರ್ಮಾಣವಾಗಿತ್ತು. ಭಕ್ತರು, ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಶರಣಪ್ಪಗೌಡ ಮಲ್ಹಾರ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ತಿಪ್ಪಣ್ಣ ಹೂಗಾರ್, ಭಜರಂಗದಳದ ಶಿವಕುಮಾರ್ ಸುಕಾನೂರ್ ಮುಂತಾದವರ ಸಾರಥ್ಯದಲ್ಲಿ ಎರಡೂ ಸಂಘಟನೆಗಳ ಕಾರ್ಯಕರ್ತರು ವಿಜೃಂಭಣೆಯ ಗಣೇಶ ವಿಸರ್ಜನೆಗೆ ಸಾಕ್ಷಿಯಾದರು. ಗಣೇಶ ವಿಸರ್ಜನೆ ಹಾಗೂ ಶೋಭಾಯಾತ್ರೆ ಬಂದೋಬಸ್ತಿಗೆಂದು ಭಾರಿ ಪೊಲೀಸ್ ವ್ಯವಸ್ಥೆ ನಿಯೋಜಿಸಲಾಗಿತ್ತು.-
28ವೈಡಿಆರ್10 : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳ ಜಂಟಿ ಆಶ್ರಯದಲ್ಲಿ, ಯಾದಗಿರಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿ.-
28ವೈಡಿಆರ್11 : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳ ಜಂಟಿ ಆಶ್ರಯದಲ್ಲಿ, ಯಾದಗಿರಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿ ವಿಸರ್ಜನೆ ಶನಿವಾರ ಅದ್ಧೂರಿ ಮೆರವಣಿಗೆಯೊಂದಿಗೆ ನಡೆಯಿತು.-
28ವೈಡಿಆರ್12 : ಯಾದಗಿರಿಯಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನೆಯ ಭವ್ಯ ಶೋಭಾಯಾತ್ರೆಯಲ್ಲಿ ಕಂಡು ಬಂದ ಶ್ರೀರಾಮಚಂದ್ರ, ಹನುಮಾನ್ ಹಾಗೂ ಶಿವಾಜಿ ಮಹಾರಾಜದ ಬೃಹತ್ ಪ್ರತಿಮೆಗಳು ಕಣ್ಮನ ಸೆಳೆದವು.-
28ವೈಡಿಆರ್13 : ಯಾದಗಿರಿಯಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನೆಯ ಭವ್ಯ ಶೋಭಾಯಾತ್ರೆಯಲ್ಲಿ ರಂಗುರಂಗಿನ ಬೆಳಕಿನ ಚಿತ್ತಾರ, ಧ್ವನಿವರ್ಧಕಗಳಲ್ಲಿ ಝೇಂಕರಿಸಿದ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದ ಕಾರ್ಯಕರ್ತರು, ಭಕ್ತಗಣ.-
28ವೈಡಿಆರ್14 : ಯಾದಗಿರಿ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಸದಸ್ಯರ ತಂಡ ವಿಸರ್ಜನೆ ದಿನದಂದು ಕಂಡಿದ್ದು ಹೀಗೆ..-
28ವೈಡಿಆರ್15 : ಯಾದಗಿರಿ ಹಿಂದೂ ಮಹಾ ಗಣಪತಿ ವಿಸರ್ಜನೆ ಶೋಭಾಯಾತ್ರೆಯಲ್ಲಿ ಜನಮನ ಸೂರೆಗೊಂಡ ದೆಹಲಿ ಕಲಾತಂಡಗಳ ಪ್ರದರ್ಶನ.---ಪಾಯಿಂಟ್ಸ್---
-ಕಣ್ಮನ ಸೆಳೆದ ಮೆರವಣಿಗೆ- ಭೂಮಿ ಬಿರಿಯುವಂತೆ ಗರ್ಜಿಸಿದ ಧ್ವನಿ ವರ್ಧಕಗಳು
- ಮುಗಿಲು ಮುಟ್ಟಿದ ಜೈಕಾರಗಳ ಝೇಂಕಾರ- ದೆಹಲಿಯಿಂದ ಬಂದಿದ್ದ ಅಘೋರಿಗಳ ಕಲಾರೂಪಕಗಳ ಪ್ರದರ್ಶನ
-ಭಕ್ತಿಪರವಶರಾದ ಜನರು