ಪೆಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಹಿಂದೂ ಮಲಯಾಳಿ ಸಮಾಜ ಮೊಂಬತ್ತಿ ಪ್ರತಿಭಟನೆ

KannadaprabhaNewsNetwork | Published : May 2, 2025 12:09 AM

ಸಾರಾಂಶ

ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿಯನ್ನು ಖಂಡಿಸಿ ಹಿಂದೂ ಮಲೆಯಾಳಿ ಬಾಂಧವರು ಮತ್ತು ಸಂಘಟನೆಗಳಿಂದ ಮೊಂಬತ್ತಿ ಬೆಳಗಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿಯನ್ನು ಖಂಡಿಸಿ ಹಿಂದೂ ಮಲಯಾಳಿ ಬಾಂಧವರು ಮತ್ತು ಸಂಘಟನೆಗಳಿಂದ ಮೊಂಬತ್ತಿ ಪ್ರತಿಭಟನೆ ನಡೆಸಿದರು.

ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ, ಹಿಂದೂ ಮಲಯಾಳಿ ಅಸೋಸಿಯೇಷನ್, ಹಿಂದೂ ಮಲಯಾಳಿ ಅಸೋಸಿಯೇಷನ್ ಮಹಿಳಾ ಘಟಕ ವಿರಾಜಪೇಟೆ ಮತ್ತು ಎಸ್.ಎನ್.ಡಿ.ಪಿ ವಿರಾಜಪೇಟೆ ಶಾಖೆಯ ವತಿಯಿಂದ ಬುಧವಾರ ಸಂಜೆ ನಗರದ ಗಡಿಯಾರ ಕಂಬದ ಬಳಿ ಪೆಹಲ್ಗಾಮ್ ನಲ್ಲಿ ಉಗ್ರರಿಂದ ನಡೆಸಿದ ನರಮೇಧ ವನ್ನು ಖಂಡಿಸಿ ಮೋಂಬತ್ತಿ ಹಚ್ಚಿ ತಮ್ಮ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮುತ್ತಪ್ಪ ಮಲಯಾಳಿ ಸಮಾಜ ಅದ್ಯಕ್ಷ ಪಿ.ಜಿ. ಸುಮೇಶ್, ಉಗ್ರರ ದಾಳಿಯನ್ನು ಎಲ್ಲಾ ಸಮಾಜ ಬಾಂಧವರು ಬಲವಾಗಿ ಖಂಡಿಸುತ್ತೇವೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ಜಾರಿಗೆ ಮಾಡಿರುವುದನ್ನು ಸಹಿಸಲಾರದ ಪಾಕಿಸ್ತಾನವು ಪ್ರತೀಕಾರದ ರೂಪದಲ್ಲಿ ಉಗ್ರರಿಂದ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿಗೈದು ಹತ್ಯೆ ಮಾಡಿರುತ್ತಾರೆ. ಪುಲ್ವಾಮ ದಾಳಿ ನಡೆದ ನಂತರದಲ್ಲಿ ಭೀಕರ ಹತ್ಯಾಕಾಂಡ ನಡೆದಿರುವುದು ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ. ಉಗ್ರರ ದಮನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಹಿಂದಿರುವ ಶಕ್ತಿಗಳ ವಿರುದ್ಧ ಹೋರಾಡಲು ದೇಶ ಪ್ರಧಾನ ಮಂತ್ರಿಗಳು ಮತ್ತು ರಕ್ಷಣಾ ಸೇನೆಗಳೊಂದಿಗೆ ನಾವುಗಳು ಸಂಪೂರ್ಣ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದರು.

ಹಿಂದೂ ಮಲಯಾಳಿ ಅಸೋಸಿಯೇಷನ್ ವಿರಾಜಪೇಟೆ ಅಧ್ಯಕ್ಷರಾದ ಎ. ವಿನೂಪ್ ಕುಮಾರ್ ಮಾತನಾಡಿ, ಪಾಕಿಸ್ತಾನದ ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ನಡೆಸಿರುವ ಕೃತ್ಯ ರಾಕ್ಷಸ ಪ್ರವೃತ್ತಿಯಾಗಿದೆ. ಪ್ರವಾಸಿಗರನ್ನು ವಿವಸ್ತೃಗೊಳಿಸಿ ಹಿಂದೂ ಎನ್ನುವ ಕಾರಣಕ್ಕೆ ಭೀಭತ್ಸವಾಗಿ ಹತ್ಯೆ ಮಾಡಿರುವುದು ಖಂಡನೀಯ. ರಾಜ್ಯದಲ್ಲಿ ಆಂತರಿಕ ಭಿನ್ನಭಿಪ್ರಾಯಗಳಿವೆ ಎಂದು ಹೇಳಿಕೆ ನೀಡುತ್ತಿರುವ ರಾಜಕಾರಣಿಗಳ ಇ ರೀತಿ ಹೇಳಿಕೆ ನಿಲ್ಲಬೇಕು. ನಾವು ಭಾರತೀಯರು ಎನ್ನುವ ಮನೋಭಾವ ಬೆಳಸಿಕೊಂಡು ಕೇಂದ್ರ ಸರ್ಕಾರದೊಂದಿಗೆ ಎಲ್ಲ ಸಮುದಾಯಗಳು ಬೆಂಬಲವಾಗಿ ನಿಲ್ಲಬೇಕು. ಉಗ್ರವಾದಿಗಳಿಗೆ ದಿಟ್ಟ ಉತ್ತರ ನೀಡುವಂತಾಗಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದರು, ಕೃತ್ಯವನ್ನು ಖಂಡಿಸಿ ಉಗ್ರವಾದ ವಿರುದ್ಧ ಘೋಷಣೆ ಮಾಡಿದರು. ಘಟನೆಯಲ್ಲಿ ಮಡಿದ ಕುಟುಂಬಗಳಿಗೆ ಪುಷ್ಪ ನಮನ ಸಲ್ಲಿಸಿ ಮೋಂಬತ್ತಿ ಹಚ್ಚಿ ಕೃತ್ಯವನ್ನು ಖಂಡಿಸಿದರು.

ಹಿಂದೂ ಮಲಯಾಳಿ ಅಸೋಸಿಯೇಷನ್ ನ ಮಹಿಳಾ ಘಟಕದ ಅಧ್ಯಕ್ಷೆ ಶೀಭಾ ಪ್ರಥ್ವಿನಾಥ್ ಮಾತನಾಡಿ, ಪೆಹಲ್ಗಾಮ್ ನಲ್ಲಿ ನಡೆದಿರುವ ಭೀಕರ ಹತ್ಯೆಯನ್ನು ಖಂಡಿಸುತ್ತೇವೆ. ಮಹಿಳೆಯರು. ಮಕ್ಕಳು ಎನ್ನುವ ಕನಿಕರ ಭಾವವಿಲ್ಲದೆ ಧರ್ಮ ಹಾಗೂ ಜಾತಿ ಆಧಾರದ ಮೇಲೆ ದಾಳಿ ನಡೆಸಿರುವುದು ಖಂಡನೀಯ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಸ್.ಎನ್.ಡಿ.ಪಿ. ವಿರಾಜಪೇಟೆ ಶಾಖೆಯ ಅದ್ಯಕ್ಷರಾದ ಟಿ.ಎನ್. ನಾರಾಯಣ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಜನಾಂಗ ಬಾಂಧವರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Share this article