ಲಕ್ಷ್ಮೇಶ್ವರ: ಪಟ್ಟಣದ ಹಳೆಯ ಆಸಾರ ಓಣಿಯಲ್ಲಿ ಪುರಸಭೆಯ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಸಾಯಿಖಾನೆ ಮೇಲೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಗುರುವಾರ ದಾಳಿ ನಡೆಸಿದ್ದಾರೆ. ಈ ವೇಳೆ ಕಸಾಯಿಖಾನೆಯವರು ಹಿಂದೂಪರ ಸಂಘಟನೆ ಕಾರ್ಯಕರ್ತರ ಜತೆ ಮಾತಿನ ಚಕಮಕಿ ನಡೆಸಿದರು.
ಸಿಪಿಐ ಬಿ.ವಿ. ನೇಮಗೌಡರ, ಪಿಎಸ್ಐ ನಾಗರಾಜ ಗಡದ ಹಾಗೂ ಕ್ರೈಂ ಪಿಎಸ್ಐ ಟಿ.ಕೆ. ರಾಠೋಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಅಕ್ರಮ ಕಸಾಯಿಖಾನೆಯಲ್ಲಿ 15ಕ್ಕೂ ಹೆಚ್ಚು ಜರ್ಸಿ, ಗೀರ್ ತಳಿ ಆಕಳು, ಜವಾರಿ ಆಕಳುಗಳು ಇದ್ದವು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ, ಗೋಮಾಂಸ ವಶಪಡಿಸಿಕೊಂಡು ಅಲ್ಲಿದ್ದ ವ್ಯಕ್ತಿಗಳ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಪುರಸಭೆ ಮುಖ್ಯಾಧಿಕಾರಿ ಗುಡದಾರಿ ಹಾಗೂ ಪುರಸಭೆಯ ಸಿಬ್ಬಂದಿ ಇದ್ದರು.ಹಿಂದೂ ಸಂಘಟನೆಯ ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಫಕ್ಕೀರೇಶ ಕರ್ಜಕ್ಕಣ್ಣವರ, ಪ್ರಾಣೇಶ ವ್ಯಾಪಾರಿ, ಅಮರೀಶ ಗಾಂಜಿ, ಪ್ರತಾಪ ಅಂಕಲಿ, ವಿಜಯಕುಮಾರ ಕುಂಬಾರ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಅಕ್ರಮವಾಗಿ ಗೋ ಹತ್ಯೆ ಮಾಡುತ್ತಿದ್ದ ರಸೂಲಸಾಬ ಮಕಾಂದಾರ, ಮುಜಿಮಿತ ಬೇಪಾರಿ, ಮೆಹಬೂಬ ಹುಲಗೂರ, ಹಮಿದಿ ಮಕಾಂದಾರ, ಮುಕ್ತಿಯಾರ್ ಅಲಿ ಬೇಪಾರಿ, ಉಸ್ಮಾನ್ ಬೇಪಾರಿ, ಮಲ್ಲಿಕ್ ಇನ್ನೂ ಹಲವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.