ಹಿಂದೂ ಸಮಾಜ ಒಗ್ಗಟ್ಟಾಗಿ ತನ್ನ ಶಕ್ತಿ ಪ್ರದರ್ಶಿಸಬೇಕಿದೆ: ಯತ್ನಾಳ

KannadaprabhaNewsNetwork |  
Published : Sep 17, 2026, 03:00 AM IST
ತಾಳಿಕೋಟೆ,  3 | Kannada Prabha

ಸಾರಾಂಶ

ತಾಳಿಕೋಟೆ : ಸಮಾಜದಲ್ಲಿ ಜಾತಿ-ಜಾತಿಗಳಾಗಿ ವಿಭಜನೆಯಾದರೆ ದೇಶದ ಏಕತೆಗೆ ಧಕ್ಕೆಯಾಗುತ್ತದೆ. ಹಿಂದೂ ಸಮಾಜ ಒಗ್ಗಟ್ಟಾಗಿ ತನ್ನ ಶಕ್ತಿ ಪ್ರದರ್ಶಿಸುವ ಅಗತ್ಯವಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಸಮಾಜದಲ್ಲಿ ಜಾತಿ-ಜಾತಿಗಳಾಗಿ ವಿಭಜನೆಯಾದರೆ ದೇಶದ ಏಕತೆಗೆ ಧಕ್ಕೆಯಾಗುತ್ತದೆ. ಹಿಂದೂ ಸಮಾಜ ಒಗ್ಗಟ್ಟಾಗಿ ತನ್ನ ಶಕ್ತಿ ಪ್ರದರ್ಶಿಸುವ ಅಗತ್ಯವಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಹೇಳಿದರು.

ತಾಳಿಕೋಟೆಯಲ್ಲಿ ಭಗತ್ ಸಿಂಗ್ ಯುವಕ ಮಂಡಳಿಯ ಗಣೇಶೋತ್ಸವ ದಶಮಾನೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ಹಿಂದೂ ಏಕತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ಅಂತಹ ದೇಶಭಕ್ತರ ಜೀವನದಿಂದ ಪ್ರೇರಣೆ ಪಡೆದುಕೊಳ್ಳಬೇಕು. ಅವರ ತ್ಯಾಗವನ್ನು ಕೇವಲ ಭಾಷಣಗಳಲ್ಲಿ ಸ್ಮರಿಸುವುದಲ್ಲದೆ, ದೇಶದ ಹಿತಕ್ಕಾಗಿ ಕೆಲಸ ಮಾಡುವ ಮೂಲಕ ಗೌರವಿಸಬೇಕು ಎಂದು ಕರೆ ನೀಡಿದರು.

ಮನೆಗೆ ಸೀಮಿತವಾಗಿದ್ದ ಗಣೇಶೋತ್ಸವವನ್ನು ಬಾಲ ಗಂಗಾಧರ ತಿಲಕರು ಹಿಂದೂ ಸಮಾಜವನ್ನು ಒಗ್ಗೂಡಿಸುವುದಕ್ಕಾಗಿ ಸಾರ್ವಜನಿಕವಾಗಿ ಆಚರಿಸಲು ನಿರ್ಧರಿಸಿದರು. ಜಾತಿ, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಒಂದಾಗಿ ಗಣೇಶೋತ್ಸವ ಆಚರಿಸುವ ಮೂಲಕ ಸಮಾಜವನ್ನು ಸಂಘಟಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಆಡಳಿತಾತ್ಮಕ ವಿಚಾರಗಳಿಗಿಂತ ಜನರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಜೆಗಳ ಸುರಕ್ಷತೆ ಖಾತ್ರಿಪಡಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಸನಾತನ ಧರ್ಮದ ಉತ್ತಮ ಮೌಲ್ಯಗಳನ್ನು ಉಳಿಸಿಕೊಂಡು, ಬಸವಣ್ಣನವರ ಸಾಮಾಜಿಕ ಸಂದೇಶ, ಸ್ವಾಮಿ ವಿವೇಕಾನಂದರ ಯುವಶಕ್ತಿ ಹಾಗೂ ನಮ್ಮ ಮಹನೀಯರ ಆದರ್ಶಗಳಿಂದ ಪ್ರೇರಣೆ ಪಡೆದು ಹೊಸ ಭಾರತವನ್ನು, ಬಲಿಷ್ಠ ಕರ್ನಾಟಕವನ್ನು ನಿರ್ಮಿಸೋಣವೆಂದರು.

ಇದಕ್ಕೂ ಮೊದಲು ಪಟ್ಟಣಕ್ಕೆ ಆಗಮಿಸಿದ ಯತ್ನಾಳ ಅವರನ್ನು ಬೈಕ್‌ ರ್ಯಾಲಿ ಮೂಲಕ ಬರಮಾಡಿಕೊಳ್ಳಲಾಯಿತು. ಈ ವೇಳೆ ಆರೇಳು ಜೆಸಿಬಿಗಳು ಪಾಲ್ಗೊಂಡಿದ್ದು ಗಮನ ಸೆಳೆಯಿತು.

ಸಾನ್ನಿಧ್ಯವನ್ನು ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ವಹಿಸಿದ್ದರು. ವೇದಿಕೆಯ ಮೇಲೆ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಸನಗೌಡ ಯಡಿಯಾಪೂರ, ಮಲ್ಲಿಕಾರ್ಜುನ ಹಿಪ್ಪರಗಿ ಇತರರು ಉಪಸ್ಥಿತರಿದ್ದರು.ಭಗತ್‌ಸಿಂಗ್ ಯುವಕ ಮಂಡಳಿ ವತಿಯಿಂದ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಸನ್ಮಾನಿಸಿ ಗೌರವಿಸಿದರು.

ಈಚೆಗೆ ಮುದ್ದೇಬಿಹಾಳದಲ್ಲಿ ಸ್ವಯಂ ಘೋಷಿತ ರೈತ ನಾಯಕರೊಬ್ಬರು ನಾನು ರೈತರಿಗಾಗಿ ಪ್ರಾಣವನ್ನೇ ಕೊಡುತ್ತೇನೆ, ರಕ್ತವನ್ನೇ ಕೊಡುತ್ತೇನೆಂದು ಹೇಳುತ್ತಿದ್ದಾನೆ. ಇವನೇನು ಹನುಮಂತನಾ? ಎದೆ ಬಗೆದು ತೋರಿಸಲಿಕ್ಕೆ ಎಂದು ಹೆಸರು ಹೇಳದ ನಡಹಳ್ಳಿ ವಿರುದ್ಧ ವ್ಯಂಗ್ಯವಾಡಿದರು. ಇಂತವರ ರಾಜಕೀಯ ಅಂತ್ಯ ಬಂದಾಗಿದೆ. ಅದಕ್ಕಾಗಿ ಆರ್.ಎಸ್.ಪಾಟೀಲ (ಕೂಚಬಾಳ), ಪ್ರಭು ದೇಸಾಯಿ ಎರಡು ಹುಲಿಗಳನ್ನು ಕ್ಷೇತ್ರದಲ್ಲಿ ಬಿಟ್ಟಿದ್ದೇನೆ. ಜನರಿಗಾಗಿ ನಿಜವಾಗಿ ಕೆಲಸ ಮಾಡುವ ಮೂಲಕ ತಮ್ಮ ಬದ್ಧತೆ ತೋರಿಸುವ ಕಾರ್ಯ ಮುಂದೆ ಆಗಲಿದೆ.

- ಬಸನಗೌಡ ಪಾಟೀಲ(ಯತ್ನಾಳ) ವಿಜಯಪುರ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟ್ಯಂತರ ಅನುದಾನ: ಆಮೆಗತಿ ಕಾಮಗಾರಿ!
29ಕ್ಕೆ ಸಚಿವ ಪ್ರಹ್ಲಾದ ಜೋಶಿ ಮನೆ ಎದುರು ಪ್ರತಿಭಟನೆ