ಕನ್ನಡಪ್ರಭ ವಾರ್ತೆ ಬಾದಾಮಿಕಬ್ಬಿಗೆ ಎಂ.ಎಸ್.ಪಿ.ದರ ನಿಗದಿ, ಮಹದಾಯಿ ಯೋಜನೆ ಜಾರಿ, ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾದಾಮಿ
ಕಬ್ಬಿಗೆ ಎಂ.ಎಸ್.ಪಿ.ದರ ನಿಗದಿ, ಮಹದಾಯಿ ಯೋಜನೆ ಜಾರಿ, ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹೇಳಿದರು.ನಗರದ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ಬಾದಾಮಿ ತಾಲೂಕು ಬರಗಾಲ ಘೋಷಣೆಗೆ ಆಗ್ರಹಿಸಿ ರೈತ ಸಂಘದವರು ಹಮ್ಮಿಕೊಂಡಿದ್ದ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಮಳೆಯಾಗಿಲ್ಲ ಎನ್ನುವುದು ಹುಚ್ಚರೂ ಹೇಳುವಂತಿದೆ. ಆದರೂ ಸರ್ಕಾರಕ್ಕೆ ಗೊತ್ತಿಲ್ಲ ಎಂದು ಹೇಳುವುದು ಎಷ್ಟು ಸರಿ. ಹಿಂಗಾಗಿ ರೈತರ ಬಾಳು ಹುಚ್ಚರಂತಾಗಿದೆ ಎಂದರು.
ಉಭಯ ಸರ್ಕಾರಗಳು ನಾಟಕ ಮಾಡುತ್ತಿವೆ. ಸ್ವಾತಂತ್ರ ಸಿಕ್ಕು 80 ವರ್ಷಗಳು ಗತಿಸಿದರೂ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಮೂರು ಪಕ್ಷಗಳು ರೈತರನ್ನು ನಿರ್ಲಕ್ಷಿಸಿವೆ. ನಮ್ಮನ್ನು ಯಾರೂ ಕೇಳುತ್ತಿಲ್ಲ. ರೈತರಿಗೆ ಮೋಸ ಮಾಡಿದವರು ಯಾರೂ ಉಳಿಯಲ್ಲ. ನಮ್ಮ ಶ್ರಮ ಸಾರ್ಥಕ ಆಗಬೇಕು. ರೈತರ ಬೆಳೆಗೆ ಬೆಲೆ ಇಲ್ಲ. ಎಲ್ಲ ಸಮಸ್ಯೆಗಳನ್ನು ಈಡೇರಿಕೆಗೆ ಆಗ್ರಹಿಸಿ ಸೆ.29ಕ್ಕೆ ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿ ಮನೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸುಮಾರು 10 ಲಕ್ಷ ರೈತರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಶಶಿಕಾಂತ ಗುರುಜಿ ಮಾತನಾಡಿದರು. ತಾಲೂಕು ರೈತ ಸಂಘದ ಮುಖಂಡರು ಹಾಜರಿದ್ದರು. ನಂತರ ತಹಶೀಲ್ದಾರ್ ಎಸ್.ಎಫ್.ಬೊಮ್ಮನ್ನವರ ಅವರಿಗೆ ಬರಗಾಲ ಘೋಷಣೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.