ಶಿವಮೊಗ್ಗ: ಸನಾತನ ಹಿಂದೂ ಧರ್ಮ, ಜಗತ್ತಿನ ಧರ್ಮಗಳಲ್ಲಿಯೇ ಪುರಾತನವಾದದ್ದು. ಸುಮಾರು 5 ಸಾವಿರ ವರ್ಷಗಳ ಪ್ರಾಚೀನತೆಯನ್ನು ಹೊಂದಿದೆ. ನಂತರ ಯಹೂದಿ ಧರ್ಮ, ಜೈನ ಧರ್ಮ, ಬೌದ್ಧ ಧರ್ಮ, ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ, ಹೀಗೆ ಧರ್ಮಗಳು ಅಸ್ತಿತ್ವಕ್ಕೆ ಬಂದವು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾ ನಂದನಾಥ ಸ್ವಾಮೀಜಿ ತಿಳಿಸಿದರು. ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಬುಧವಾರ ಏರ್ಪಡಿಸಿದ್ದ
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಒಂದು ದಿನದ ಸಮಾಜ ವಿಜ್ಞಾನ ಮತ್ತು ಕನ್ನಡ ವಿಷಯಗಳ ಕುರಿತು ನಡೆಯುತ್ತಿರುವ ರಾಜ್ಯ ಮಟ್ಟ ಕಾರ್ಯಾಗಾರದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಧರ್ಮ ಧರ್ಮಗಳ ನಡುವೆ ಸಾಮರಸ್ಯದ ಬದುಕಿನಿಂದ ಶಾಂತಿ ನೆಲೆಸಲು ಸಾಧ್ಯ, ಆ ನಿಟ್ಟಿನಲ್ಲಿ ನಾವೆಲ್ಲರೂ ಚಿಂತನೆ ಮಾಡಬೇಕಾಗಿದೆ. ಧರ್ಮ ನಮ್ಮ ಭೌತಿಕ ಬದುಕನ್ನು ಸಮೃದ್ಧಗೊಳಿಸುವುದಲ್ಲದೇ, ಭೂಮಿಯ ಮೇಲೆ ಆನಂದ ಸಂತೋಷದಿಂದ ಬದುಕುವುದನ್ನು ತಿಳಿಸುವುದೇ ಧರ್ಮದ ಕೆಲಸವಾಗಿದೆ ಎಂದರು.ವಿಶ್ವ ಅಸ್ತಿತ್ವಕ್ಕೆ ಬಂದು ಒಂದು ಸಾವಿರ 382 ಕೋಟಿ ವರ್ಷಗಳು ಆಗಿವೆ, ಸೂರ್ಯ ಅಸ್ತಿತ್ವಕ್ಕೆ ಬಂದು 500 ಕೋಟಿ ವರ್ಷಗಳು, ಭೂಮಿ ಅಸ್ತಿತ್ವಕ್ಕೆ ಬಂದು 450 ಕೋಟಿ ವರ್ಷಗಳು ಸಂದಿವೆ, ಆದರೆ ಮಾನವನ ವಿಕಾಸವಾಗಿ 2 ಲಕ್ಷ ವರ್ಷಗಳು ಆಗಿವೆ, ಭೂಮಿಗೆ ವಸಾಹತುಶಾಹಿ ವ್ಯವಸ್ಥೆ ನೆಲೆಗಗೊಳ್ಳಲು 60 ಸಾವಿರ ವರ್ಷ ಹೀಗೆ ವಿಶ್ವ ಅಸ್ತಿತ್ವ ಬಂದಿತು.
ಎರಡು ಸಾವಿರ ಐದು ನೂರು ವರ್ಷಗಳ ಹಿಂದೆ ಬಂದ ಬುದ್ಧ, ಭೋಧಿಸಿದ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.ಪ್ರತಿಯೊಬ್ಬ ಶಿಕ್ಷಕರು ಮಕ್ಕಳ ಜೊತೆ ಉತ್ತಮ ಒಡನಾಟದಿಂದ ಇರಬೇಕು, ಅವರಿಗೆ ಬೇಕು-ಬೇಡಗಳ ಬಗ್ಗೆ ತಿಳಿದು ತರಬೇತಿ ಕೊಟ್ಟಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಒಂದು ಶಾಲೆಯಲ್ಲಿ ಮಕ್ಕಳಲ್ಲಿ ಶಿಸ್ತು, ಸಂಯಮ, ಇದೆ ಅಂದರೆ ಅದಕ್ಕೆ ಶಿಕ್ಷಕರ ಪಾತ್ರ ದೊಡ್ಡದು, ಪೋಷಕರ ಜೊತೆಗೆ ಆತ್ಮೀಯತೆಯಿಂದ ಇರಬೇಕು ಎಂದರು.ಈಗಾಗಲೇ ರಾಜ್ಯದ ನುರಿತ ವಿವಿಧ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಪನ್ಮೂಲ ವ್ಯಕ್ತಿಗಳಿಂದ ತಮಗೆ ಕಾರ್ಯಾಗಾರ ನಡೆಸುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು, ತಮ್ಮ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕೊಟ್ಟು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಂದ ತಾವು ಉತ್ತಮ ಸಾಧನೆ ಮಾಡಿಸಬೇಕಾಗಿದೆ ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿ ವಹಿಸಿದ್ದರು.
ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಪ್ರಭಾಕರ ರಾವ್, ವಕೀಲ ಸುಧೀರ ಕುಮಾರ ಮುರೊಳ್ಳಿ, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗವದವರು ಉಪಸ್ಥಿತರಿದ್ದರು.ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಯಶಸ್ವಿಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾ ಮಠದ 34ನೇ ವಾರ್ಷಿಕೋತ್ಸವದ ನಿಮಿತ್ತ ಭಗವತ್ ಚಿಂತನ, ಧರ್ಮ ಸಂಕಥನ ಮನು ಕುಲದ ಪರಿವರ್ತನೆ, ವಿಶ್ವಶಾಂತಿ ಹಾಗೂ ಸೌಹಾರ್ದತೆಯಲ್ಲಿ ಧರ್ಮಗಳ ಪಾತ್ರ ಕುರಿತು ಎರಡು ದಿನ ಉಪನ್ಯಾಸ, ಹಾಗೂ ಸತ್ಸಂಗ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಸಂಸ್ಥೆಯ ಶಿಕ್ಷಕ ಹಿರಿಯ ವಿದ್ಯಾರ್ಥಿಗಳಿಗೆ ಪೂಜ್ಯರಿಂದ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಒಂದು ದಿನದ ಸಮಾಜ ವಿಜ್ಞಾನ ಮತ್ತು ಕನ್ನಡ ವಿಷಯಗಳ ಕುರಿತು ನಡೆಸಲಾದ ರಾಜ್ಯ ಮಟ್ಟ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು.