ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬಕ್ರೀದ್ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಒಂದಾಗಿ ಆಚರಿಸಿ ಸಮಾಜದಲ್ಲಿ ಶಾಂತಿ ಕಾಪಾಡುವಂತೆ ನಾಗಮಂಗಲ ಡಿವೈಎಸ್ಪಿ ಚಲುವರಾಜು ಮನವಿ ಮಾಡಿದರು.ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ತಾಲೂಕಿನ ಹಿಂದೂ ಮುಸ್ಲಿಂ ಬಾಂಧವರೊಂದಿಗೆ ಕೋಮು ಸೌಹಾರ್ದ ಸಭೆ ನಡೆಸಿ ಮಾತನಾಡಿ, ಕೆ.ಆರ್.ಪೇಟೆ ತಾಲೂಕು ಕೋಮು ಸೌಹಾರ್ದತೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ. ಮುಸ್ಲಿಂ ಬಾಂಧವರು ಆಚರಿಸುವ ಹಬ್ಬದಲ್ಲಿ ಹಿಂದೂಗಳು ಭಾಗವಹಿಸಿ ನಾಡಿಗೆ ಸೌಹಾರ್ದತೆ ಸಂದೇಶ ನೀಡಬೇಕು ಎಂದರು.
ಗಾಳಿ ಸುದ್ದಿಗೆ ಕಿವಿಗೊಡದೆ ಸಮಾಜಘಾತುಕ ಶಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಮಾರಾಣಿ, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಆನಂದೇಗೌಡ, ಕಿಕ್ಕೇರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರೇವತಿ, ಪುರಸಭೆ ಸದಸ್ಯ ಡಿ. ಪ್ರೇಮಕುಮಾರ್, ಮಾಜಿ ಸದಸ್ಯ ಕೆ.ಆರ್. ನೀಲಕಂಠ, ಪುರಸಭೆ ಮಾಜಿ ಅಧ್ಯಕ್ಷ ಕೆ. ಗೌಸ್ ಖಾನ್, ಸೌದಿ ಫಯಾಜ್, ಸೈಯ್ಯದ್ ಖಲಿಲ್, ಚಾಂದ್ ಬೈಯ್ಯಾ, ಫಯಾಜ್, ನಾವಿದ್ ಅಹಮದ್, ಅಫಸರ್ ಅಹಮದ್, ನವಿದ್ ಅಹಮದ್, ಕರವೇ ತಾಲೂಕು ಅಧ್ಯಕ್ಷ ಟೆಂಪೋ ಶ್ರೀನಿವಾಸ್, ದಡದಹಳ್ಳಿ ಅತಿಕ್ ಅಹಮದ್, ಮಾಂಬಳ್ಳಿ ಜಯರಾಮ್, ಹೊಸಹೊಳಲು ರತ್ನ, ಶಿವಪ್ರಸಾದ್ ಇದ್ದರು.
ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ವಿದ್ಯಾರ್ಥಿಗಳಿಂದ ಬೀಜದುಂಡೆ ಬಿತ್ತನೆಹಲಗೂರು:
ಜೆ.ಜೆ.ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಪರಿಸರ ದಿನಾಚರಣೆ ಅಂಗವಾಗಿ ಬೀಜದುಂಡೆ ತಯಾರಿಸಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಹಾಕಿ ಪರಿಸರ ಸಂರಕ್ಷಣೆಗೆ ಮುಂದಾದರು.ಶಾಲೆ ಸಂಸ್ಥಾಪಕ ಸೋಮಶೇಖರ್ ಮತ್ತು ಪ್ರಾಂಶುಪಾಲೆ ಲಲಿತಾಂಬ ಮತ್ತು ವಿದ್ಯಾರ್ಥಿಗಳು ಸೇರಿ ಶಾಲಾ ಆವರಣದಲ್ಲಿ ಗಿಡ ನೆಟ್ಟು ಪರಿಸರದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ವಿದ್ಯಾರ್ಥಿಗಳು ತಯಾರಿಸಿದ ಬೀಜದ ಉಂಡೆಗಳನ್ನು ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಹಾಕಿದರು.
ಈ ವೇಳೆ 10ನೇ ತರಗತಿ ಮುತ್ತುರಾಜ್ ಮಾತನಾಡಿ, ಬೀಜದ ಉಂಡೆಗಳ ತಯಾರಿಕೆಗೆ ಮಣ್ಣು, ನೀರು, ಗೊಬ್ಬರ ಹಾಗೂ ಹಲಸು ಮತ್ತು ಮಾವಿನ ಬೀಜಗಳನ್ನು ಬಳಸಿದ್ದೇವೆ. ಈ ಬೀಜ ದುಂಡೆಗಳನ್ನು ಅರಣ್ಯ ಪ್ರದೇಶದಲ್ಲಿ ಬಿತ್ತನೆ ಮಾಡಿದಾಗ ಮಳೆಗಾಲದಲ್ಲಿ ಅವು ಮೊಳಕೆಯೊಡೆದು ಮರಗಳಾಗಿ ಬೆಳೆದು ಕಾಡುಪ್ರಾಣಿಗಳು, ಪಕ್ಷಿಗಳಿಗೆ ಆಶ್ರಯದ ಜೊತೆಗೆ ಆಹಾರ ದೊರಕಲು ಅನುಕೂಲವಾಗುತ್ತದೆ ಎಂದರು. ಈ ವೇಳೆ ಶಿಕ್ಷಕವೃಂದ ಉಪಸ್ಥಿತರಿದ್ದರು.