- ಹೊನ್ನಾಳಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಗಿರೀಶ ಕಾರಂತ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹಿಂದೂ ಎನ್ನುವುದು ಹಿಂಸೆಯನ್ನು ದೂರ ಇಡುವುದಾಗಿದೆ. ಚದುರುತ್ತಿರುವ ಹಿಂದೂಗಳೆಲ್ಲಾ ಒಟ್ಟಾಗಿ ಜೀವನ ಸಾಗಿಸಿ, ಸಂಘಟನೆಯಾಗುವ ಕಾಲ ಸನ್ನಿಹಿತವಾಗಿದೆ ಎಂದು ಆರ್ಎಸ್ಎಸ್ ವಿಭಾಗ ಕಾರ್ಯವಾಹ ಗಿರೀಶ ಕಾರಾಂತ ಹೇಳಿದರು.ತಾಲೂಕಿನ ಬಲಮುರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಆರ್ಎಸ್ಎಸ್ ಶತಾಬ್ದಿ ಆಚರಣೆ ಸಂದರ್ಭದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ಹಿಂದೂ ಎನ್ನುವುದು ಜೀವನದ ಸಂಸ್ಕೃತಿ, ಪರಂಪರೆ, ಸಂಪ್ರದಾಯ ಒಳಗೊಂಡ ಅಸ್ಮಿತೆಯಾಗಿದೆ. ಜಗತ್ತಿನ ಯಾವುದೇ ದೇಶದಲ್ಲಿ ಇಲ್ಲದ ಸಂಸ್ಕೃತಿ, ಸಂಸ್ಕಾರ ನಮ್ಮ ಭಾರತದಲ್ಲಿದೆ. ನಗರ ಪ್ರದೇಶಗಳಲ್ಲಿ ಕುಟುಂಬಗಳು ವಿಘಟನೆಯತ್ತಾ ಸಾಗಿದ್ದರೂ ಕೂಡು ಕುಟುಂಬದಲ್ಲಿ ಬಾಳಿದರೆ ಸ್ವರ್ಗ ಎನ್ನುವ ಕುಟುಂಬದ ಪರಿಕಲ್ಪನೆ ಹಳ್ಳಿಗಳಲ್ಲಿ ಇನ್ನೂ ಉಳಿದಿವೆ. ಇದು ಸಾಕಷ್ಟು ಗಟ್ಟಿಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಆರ್ಎಸ್ಎಸ್ ಕಾರ್ಯ ಮಾಡುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಂಗಮ ಆಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಲಿಂಗರಾಜ ಹವಳದ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆ ಉಳಿಯಲು ತಾಯಂದಿರ ಪಾತ್ರ ಹಿರಿದಾಗಿದೆ. ಮನೆಯಲ್ಲಿ ಉತ್ತಮ ಸಂಸ್ಕಾರಯುಕ್ತ ಶಿಕ್ಷಣವನ್ನು ಮಗುವಿಗೆ ಆರಂಭದಲ್ಲಿಯೇ ಕೊಡಬೇಕು ಎಂದು ಹೇಳಿದರು.
ಮಠ, ಮಂದಿರಗಳಲ್ಲಿ ನಡೆಯುವ ಧರ್ಮ ಸಭೆಗಳು, ಉತ್ಸವಗಳು ಹಾಗೂ ಇತರ ಎಲ್ಲ ಕಾರ್ಯಕ್ರಮಗಳಿಗೆ ಪೋಷಕರು ತಪ್ಪದೇ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.ಸಾಮಾಜಿಕ ಕಾರ್ಯಕರ್ತೆ ಅಶ್ವಿನಿ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ಸ್ವಾಗತಿಸಿ, ದಿವ್ಯಾ ನಿರೂಪಿಸಿ, ಶಿವಕುಮಾರ್ ವಂದಿಸಿದರು.
- - -(ಕೋಟ್) ಶಿವಾಜಿ ಮಹಾರಾಜರು ಸೇರಿದಂತೆ ಇತರ ಎಲ್ಲ ರಾಜರು ಹಿಂದೂ ಸಾಮ್ರಾಜ್ಯದ ಉಳಿವಿಗೆ ಹೋರಾಟ ಮಾಡಿದರು. ಪ್ರಸ್ತುತ ಹಿಂದೂ ಸಂಘಟನೆ ಬಲವರ್ಧನೆ ಅತಿ ಮುಖ್ಯವಾಗಿದೆ. ಆರ್ಎಸ್ಎಸ್ ಸ್ಥಾಪನೆಯಾಗಿ 100 ವರ್ಷಗಳು ತುಂಬಿದ ಹಿನ್ನೆಲೆ ಕುಟುಂಬ ಸಂಸ್ಕಾರ, ಗ್ರಾಮಗಳ ಏಳ್ಗೆ, ಸಾಮರಸ್ಯ, ಸ್ವದೇಶಿ ಮಾರುಕಟ್ಟೆ, ನಾಗರೀಕ ಶಿಷ್ಟಾಚಾರ ಎಂಬ ೫ ಪ್ರಮುಖ ಅಂಶಗಳನ್ನು ಮುಖ್ಯವಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
- ಗಿರೀಶ ಕಾರಂತ, ಆರ್ಎಸ್ಎಸ್ ಮುಖಂಡ.- - -
-20ಎಚ್.ಎಲ್.ಐ1:ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆರ್ಎಸ್ಸ್ ವಿಭಾಗ ಕಾರ್ಯವಾಹ ಗಿರೀಶ ಕಾರಾಂತ ಮಾತನಾಡಿದರು.