ಕನ್ನಡಪ್ರಭ ವಾರ್ತೆ ಹಿರಿಯೂರು
ದಾರಿಯುದ್ಧಕ್ಕೂ ಸಚಿವ ಡಿ.ಸುಧಾಕರ್ ಅಭಿಮಾನಿಗಳು, ಕಾರ್ಯಕರ್ತರ ದೊಡ್ಡ ದಂಡೇ ಮೃತದೇಹದ ಜೊತೆಗೆ ಸಾಗಿತು. ಆನಂತರ ನೆಹರೂ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಸಿದ್ದಪಡಿಸಲಾಗಿದ್ದ ಸ್ಥಳದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬೆಳಗ್ಗೆ 11 ಗಂಟೆಯಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಸಾವಿರಾರು ಜನರು ನೆಹರೂ ಮೈದಾನದಲ್ಲಿ ಕಾಯುತ್ತಿದ್ದರು.
ಸಚಿವರ ಮೃತದೇಹದ ವಾಹನ ಆವರಣದೊಳಕ್ಕೆ ಬರುತ್ತಿದ್ದಂತೆ ಅವರ ಅಭಿಮಾನಿಗಳು, ಕಾರ್ಯಕರ್ತರು ಜೋರಾಗಿ ಅಳತೊಡಗಿದರು. ಮಹಿಳಾ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಎರಡು ಗಂಟೆಗೆ ಮೃತ ದೇಹ ನೆಹರೂ ಮೈದಾನಕ್ಕೆ ಬಂದಾಗಿನಿಂದ ಸಂಜೆ ಐದು ಗಂಟೆಯವರೆಗೂ ಸಚಿವರ ಪಾರ್ಥಿವ ಶರೀರವನ್ನು ನೋಡಲು ಜನರ ನೂಕು ನುಗ್ಗಲು ಇದ್ದೇ ಇತ್ತು. ಬಡವರು, ಅಲ್ಪ ಸಂಖ್ಯಾತರ ಕಣ್ಮಣಿಯಾಗಿದ್ದ ನಮ್ಮ ಶಾಸಕರು ಹೋದ ಮೇಲೆ ನಮಗಿನ್ಯಾರು ದಿಕ್ಕು ಎಂದು ರೋಧಿಸುತ್ತಿದ್ದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಗೋವಿಂದ ಕಾರಜೋಳ, ಶಾಸಕರಾದ ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ವೀರೇಂದ್ರ ಪಪ್ಪಿ, ಮಾಜಿ ಶಾಸಕ ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ವೆಂಕಟೇಶ್, ಸಿಇಒ ಆಕಾಶ್, ಎಡಿಸಿ ಕುಮಾರಸ್ವಾಮಿ, ಎಂಎಲ್ಸಿ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಎಸ್.ಪಿ ರಂಜಿತ್ ಕುಮಾರ್ ಬಂಡಾರು, ಮಾಜಿ ಸಚಿವ ಎಚ್.ಏಕಾಂತಯ್ಯ, ಜೆಡಿಎಸ್ ಮುಖಂಡ ಎಂ.ರವಿಂದ್ರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮೀಕಾಂತ್, ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ಮುಖಂಡರಾದ ಜಯರಾಮಯ್ಯ, ಬಿ.ಸೋಮಶೇಖರ್ ಸೇರಿದಂತೆ ಸಾವಿರಾರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಕಾರ್ಯಕರ್ತರು, ಸಚಿವರ ಅಭಿಮಾನಿಗಳು ಪಾರ್ಥಿವ ಶರೀರದ ದರ್ಶನ ಪಡೆದರು.
ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಶಿವಕುಮಾರ್ ರವರಿಗೆ ರಾಹುಲ್ ಗಾಂಧಿಯವರು ಫೋನ್ ಕರೆ ಮಾಡಿ ಸುಧಾಕರ್ ಪುತ್ರ ಸುಹಾಸ್ ರವರಿಗೆ ಸಾಂತ್ವನ ಹೇಳಿದರು. ಬಳಿಕ ಡಿ.ಕೆ.ಶಿವಕುಮಾರ್ ರವರ ಜೊತೆ ರಾಹುಲ್ ಗಾಂಧಿ ಮಾತನಾಡಿದರು.