ಕಾಪು: ಇಲ್ಲಿನ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ಐಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಎಚ್ಐವಿ / ಏಡ್ಸ್ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ ಅವರು ವಹಿಸಿದ್ದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ಸಮಾಲೋಚಕಿ ವಸಂತಿ ಅವರು ಎಚ್ಐವಿ / ಏಡ್ಸ್ ಸೋಂಕು ಹರಡುವ ಮತ್ತು ಹರಡದ ಮಾರ್ಗಗಳು, ಸೋಂಕು ತಡೆಗಟ್ಟುವ ಕ್ರಮಗಳು, ಸುರಕ್ಷಿತ ಜೀವನ ಶೈಲಿಯ ಮಹತ್ವ, ಪರೀಕ್ಷೆಯ ಅಗತ್ಯತೆ ಹಾಗೂ ಸೋಂಕಿತರ ನಡುವಿನ ತಾರತಮ್ಯ ಮತ್ತು ಮೂಢನಂಬಿಕೆಗಳ ಬಗ್ಗೆ ವಿವರಗಳನ್ನು ನೀಡಿದರು. ಸೋಂಕಿತರ ಬಗ್ಗೆ ಪೂರ್ವಾಗ್ರಹ ತೊರೆದು ಮಾನವೀಯ ದೃಷ್ಟಿಕೋನ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.