ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಶನಿವಾರ ಸಂತ ಸೆಬಾಸ್ಟೀನ್ ರವರ ದೇವಾಲಯದ ಧರ್ಮಗುರು ವಂ.ರೆ.ಫಾದರ್ ಸೆಬಾಸ್ಟೀನ್ ಪೂವತ್ತಿಗಲ್ ಅವರು ಸಂಜೆ ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ನೂತನ ದೇವಾಲಯದಲ್ಲಿ ಹಬ್ಬದ ಆರಾಧನೆ ಹಾಗೂ ವಿಶೇಷ ಬಲಿ ಪೂಜೆ ಸಲ್ಲಿಸಿದರು.
ಭಾನುವಾರ ಬೆಳಗ್ಗೆ 10 ಗಂಟೆಗೆ ಸಂತ ಸೆಬಾಸ್ಟೀನ್ ಅವರ ವಾರ್ಷಿಕೋತ್ಸವದ ಅಂಗವಾಗಿ ಮಡಿಕೇರಿ, ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಕುಶಾಲನಗರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕ್ರೈಸ್ತ ಬಾಂಧವರು ಅಂಬು ಕಾಣಿಕೆಯ ಹರಕೆಗಳನ್ನು ಸಲ್ಲಿಸಿದರು. ನಂತರ ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಗುರು ವಂ.ರೆ.ಫಾದರ್ ಟೋಮಿ ಕಳ್ಳಿಪಾತ್ ಅವರು ಹಬ್ಬದ ಆಡಂಬರ ಬಲಿಪೂಜೆ ಹಾಗೂ ಮಕ್ಕಳಿಗೆ ನೂತನ ಪರಮ ಪ್ರಸಾದವನ್ನು ನೀಡಿದರು. ನಂತರ ಸಂತ ಸಬಾಸ್ಟೀನ್ ಅವರ ಮೂರ್ತಿಯನ್ನು ಹಿಡಿದು ದೇವಾಲಯದ ಆವರಣದಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ಕೊನೆಯಲ್ಲಿ ಆಶೀರ್ವಚನವನ್ನು ನೀಡುವ ಮೂಲಕ 2 ದಿನದ ವಾರ್ಷಿಕೋತ್ಸವ ಸಮಾರಂಭಕ್ಕೆ ತೆರೆ ಎಳೆದರು.ಇದೇ ಸಂದರ್ಭ ನೂತನ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮರದ ಕೆತ್ತನೆ ಕೆಲಸ ನಿರ್ವಹಿಸಿದ್ದ ಕೆತ್ತನೆಗಾರರಿಗೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.