ಭದ್ರಾ ನಾಲೆಗಳಿಗೆ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ದಾವಣಗೆರೆ ಟಿವಿ ಸ್ಟೇಷನ್ ಕೆರೆ ಮತ್ತು ಕುಂದುವಾಡ ಕೆರೆಗಳ ತುಂಬಿಸಿಕೊಳ್ಳಬಹುದು. ತಕ್ಷಣ ಐಸಿಸಿ ಸಭೆ ಕರೆದು, ನೀರು ಹರಿಸುವ ವೇಳೆಪಟ್ಟಿ ಪ್ರಕಟಿಸಬೇಕು. ಇದರಿಂದ ರೈತರು ನೀರು ಹರಿಸುವ ವೇಳಾಪಟ್ಟಿ ನೋಡಿಕೊಂಡು, ಯಾವ ಬೆಳೆ ಬೆಳೆಯಬೇಕೆಂಬ ಬಗ್ಗೆ ತೀರ್ಮಾನಿಸುತ್ತಾರೆ. ಕೆಲ ರೈತರು ತೋಟ ಉಳಿಸಿಕೊಳ್ಳುತ್ತಾರೆ.
ರೈತ ಒಕ್ಕೂಟದ ಬಿ.ಎಂ.ಸತೀಶ ಕೊಳೇನಹಳ್ಳಿ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ । ನೀರು ಪೋಲಾಗುವುದು ತಡೆಯಿರಿ ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ತುರ್ತಾಗಿ ಕರೆದು, ಭದ್ರಾ ಅಣೆಕಟ್ಟೆಯಿಂದ ಭದ್ರಾ ನಾಲೆಗಳಿಗೆ 72 ದಿನಗಳ ನೀರು ಹರಿಸುವ ವೇಳಾಪಟ್ಟಿ ನಿರ್ಣಯಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸಲು ರೈತ ಒಕ್ಕೂಟವು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ ಮುಖಾಂತರ ರೈತ ಒಕ್ಕೂಟದ ಬಿ.ಎಂ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಬಿ.ಎಂ.ಸತೀಶ, ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂನಲ್ಲಿ 151.5 ಅಡಿ ನೀರು ಸಂಗ್ರಹವಿದೆ. ಜಲಾಶಯದ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 71.535 ಟಿಎಂಸಿ ಇದ್ದು, ಪ್ರಸ್ತುತ ಸಂಗ್ರಹ ಪ್ರಮಾಣ 35.37 ಟಿಎಂಸಿ ಇದೆ. ಇದರಲ್ಲಿ 13.83 ಟಿಎಂಸಿ ಡೆಡ್ ಸ್ಟೋರೆಜ್ ಇದ್ದು, ಅದು ಬಳಕೆಗೆ ಬರುವುದಿಲ್ಲ. ಉಳಿದ 21.54 ಟಿಎಂಸಿ ನೀರು ಮಾತ್ರ ಬಳಕೆಗೆ ಬರುತ್ತದೆ. ಅದಕ್ಕೆ ಅಧಿಕಾರಿಗಳು ಕುಡಿಯುವ ನೀರಿಗಾಗಿ, ಕೈಗಾರಿಕೆಗಳಿಗೆಂದು ನೆಪ ಮಾಡಿ, ಪೋಲು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಭದ್ರಾ ನಾಲೆಗಳಿಗೆ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ದಾವಣಗೆರೆ ಟಿವಿ ಸ್ಟೇಷನ್ ಕೆರೆ ಮತ್ತು ಕುಂದುವಾಡ ಕೆರೆಗಳ ತುಂಬಿಸಿಕೊಳ್ಳಬಹುದು. ತಕ್ಷಣ ಐಸಿಸಿ ಸಭೆ ಕರೆದು, ನೀರು ಹರಿಸುವ ವೇಳೆಪಟ್ಟಿ ಪ್ರಕಟಿಸಬೇಕು. ಇದರಿಂದ ರೈತರು ನೀರು ಹರಿಸುವ ವೇಳಾಪಟ್ಟಿ ನೋಡಿಕೊಂಡು, ಯಾವ ಬೆಳೆ ಬೆಳೆಯಬೇಕೆಂಬ ಬಗ್ಗೆ ತೀರ್ಮಾನಿಸುತ್ತಾರೆ. ಕೆಲ ರೈತರು ತೋಟ ಉಳಿಸಿಕೊಳ್ಳುತ್ತಾರೆ. ಕೆಲ ರೈತರು ಅರೆ ನೀರಾವರಿ ಬೆಳೆ ಬೆಳೆಯುತ್ತಾರೆ. ಹೆಚ್ಚುವರಿ ನೀರಿನ ಸೌಲಭ್ಯ ಹೊಂದಿರುವ ರೈತರು ಕೆಲ ಕಡೆ ಬತ್ತ ಬೆಳೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಭದ್ರಾ ನೀರು ಅವಲಂಬಿಸಿದ ದಾವಣಗೆರೆ ಮತ್ತು ಇತರೆ ನಗರಗಳು ನಾಲೆಯಲ್ಲಿ ನೀರು ಹರಿಸಿದಾಗ ಕುಡಿಯುವ ನೀರಿನ ಕೆರೆಗಳ ತುಂಬಿಸಿಕೊಳ್ಳಲು ಅವಕಾಶವಾಗುವುದರಿಂದ ಅಂತಹ ಊರುಗಳ ನೀರಿನ ಬವಣೆ ತೀರಿಸಬಹುದು. ತಕ್ಷಣ ಐಸಿಸಿ ಸಭೆ ಕರೆದು, 72 ದಿನ ನೀರು ಹರಿಸುವ ವೇಳಾಪಟ್ಟಿ ನಿರ್ಣಯಿಸಬೇಕು. ಭದ್ರಾ ಡ್ಯಾಂನಲ್ಲಿ ಪ್ರತಿನಿತ್ಯ ಸುಮಾರು 300-400 ಕ್ಯೂಸೆಕ್ ನೀರು ಪೋಲಾಗುತ್ತಿರುವುದು ಗಮನಿಸಿ, ನೀರು ಸೋರಿಕೆ ನಿಯಂತ್ರಿಸಬೇಕು.
ಬಿ.ಎಂ.ಸತೀಶ ಕೊಳೇನಹಳ್ಳಿ, ರೈತ ಮುಖಂಡ
....................
ನಿಗಮದ ನಿರ್ಲಕ್ಷ್ಯ, ಅಪಾರ ನೀರು ಪೋಲು
ಭದ್ರಾ ಡ್ಯಾಂನಿಂದ ನೀರು ಹರಿಸಿದಾಗ ಹಿರೇಕೋಗಲೂರು ಸೂಪರ್ ಪ್ಯಾಸೇಜ್ ಒಡೆದಿದ್ದು, ಬೆಳ್ಳಿಗನೂಡು, ಮತ್ತಿ, ಸಂತೇಬೆನ್ನೂರು ಮತ್ತಿತರೆ ಕಡೆ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು ಶಿಥಿಲಗೊಂಡು ಅಪಾರ ಪ್ರಮಾಣದ ನೀರು ರಸ್ತೆಯಲ್ಲಿ ಹರಿದು ಪೋಲಾಗುತ್ತಿದೆ. ಇದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ತಕ್ಷಣ ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ನಾಲೆಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿದು ಹೋಗಿ, ವ್ಯರ್ಥವಾಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಆಗ್ರಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.