ಹೊಲೆಯ, ಮಾದಿಗ ಜನಾಂಗ ಉಪಜಾತಿ ನಮೂದಿಸಿ: ಪಾಪು

KannadaprabhaNewsNetwork | Published : May 8, 2025 12:31 AM
Follow Us

ಸಾರಾಂಶ

ಚಾಮರಾಜನಗರದಲ್ಲಿ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣ ಸ್ವಾಮಿ (ಪಾಪು) ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಒಳ ಮೀಸಲಾತಿ ಜಾರಿಯ ಹಿನ್ನೆಲೆ ಜಾತಿ ಗಣತಿ ಮನೆ ಮನೆ ಸಮೀಕ್ಷೆ ಪ್ರಾರಂಭವಾಗಿದ್ದು, ಅನಾದಿಕಾಲದಿಂದಲೂ ಇರುವ ಹೊಲೆಯ ಮತ್ತು ಮಾದಿಗ ಜನಾಂಗದವರು ಉಪಜಾತಿಯನ್ನು ಸರಿಯಾಗಿ ದಾಖಲಿಸಬೇಕು ಎಂದು ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣ ಸ್ವಾಮಿ (ಪಾಪು) ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಠ ಜಾತಿಯಲ್ಲಿರುವ 101 ಜಾತಿಗಳಲ್ಲಿ ಹೆಚ್ಚು ಶೋಷಣೆಗೆ ಒಳಗಾಗಿರುವ ಹೊಲೆಯ ಮತ್ತು ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಜಾತಿ ಗಣತಿಯನ್ನು ಸರ್ಕಾರ ಕೈಗೊಂಡಿದ್ದು, ದಲಿತ ಸಂಘರ್ಷ ಸಮಿತಿ ಸ್ವಾಗತಿಸಿದೆ ಎಂದರು.

ಮೇ 5ರಿಂದ ಸಮೀಕ್ಷೆ ಆರಂಭಗೊಂಡಿದ್ದು, ಈಗಾಗಲೇ 2 ದಿನ ಕಳೆದಿದೆ. ಹೊಲೆಯ ಎಂದು ನಮೂದಿಸಲು 0441 ಸಂಖ್ಯೆಗೆ ನೋಂದಾಯಿಸಬೇಕು ಆದರೆ ಆ್ಯಪ್ನಲ್ಲಿ ಓಪನ್‌ ಆಗದಿರುವುದರಿಂದ ಗೊಂದಲಗಳಿವೆ. ಸರ್ಕಾರ ಇದನ್ನು ಸರಿಪಡಿಸಬೇಕು. ಸರಿಪಡಿಸುವವರಗೆ 0445 ಸಂಖ್ಯೆಯಲ್ಲೂ ಹೊಲೆಯ ಎಂದಿದ್ದು ಎರಡು ಒಂದೇ ಆಗಿರುವುದರಿಂದ ಹೊಲೆಯ ಜಾತಿಯವರು 0441 ಅಥವಾ 0445ಗೆ ನಮೂದಿಸಬೇಕು ಎಂದರು.

ಮೇ 17ರ ತನಕ ಮನೆ ಮನೆ ಸಮೀಕ್ಷೆ ನಡೆಯಲು ಅವಕಾಶ ನೀಡಲಾಗಿದ್ದು, ಮನೆ ಮನೆಗೆ ಸಮೀಕ್ಷೆಗೆ ನೇಮಕವಾಗಿರುವವರ ಮಾಹಿತಿ ವಾರ್ಡ್‌ಗಳು ಹಾಗೂ ಗ್ರಾಮಗಳ ಜನರಿಗೆ ತಿಳಿದಿಲ್ಲ, ಆದ್ದರಿಂದ ನೇಮಕವಾಗಿರುವವರ ಮೊಬೈಲ್‌ ನಂಬರ್‌ಗಳನ್ನು ಹಾಗೂ ಹೆಸರನ್ನು ಸರ್ಕಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು. ಈಗಾಗಲೇ ಗಣತಿ ಆರಂಭಗೊಂಡು ಎರಡು ದಿನಗಳೇ ಕಳೆದು ಹೋಗಿದೆ. ಮನೆ ಮನೆಗಳಿಗೆ ನೇಮಕಗೊಂಡಿರುವ ಗಣತಿದಾರರು ಹೋಗಿಲ್ಲ. ಗಣತಿದಾರರು ಸರಿಯಾಗಿ ಸಮೀಕ್ಷೆ ಮಾಡುತ್ತಿಲ್ಲ ಎಂಬ ದೂರು ಹೆಚ್ಚಾಗಿದೆ ಆದರಿಂದ ಸಮಾಜಕ್ಕೆ ಅನ್ಯಾಯವಾಗದಂತೆ ಸಮೀಕ್ಷೆ ನಡೆಸಲು ಅಧಿಕಾರಿಗಳು ಗಮನಹರಿಸಬೇಕು ಎಂದರು. ಸುದ್ದಿಗೋಷ್ಟಿಯಲ್ಲಿ ದಸಂಸ ಸಂಚಾಲಕ ಸಿ.ಎಂ.ಶಿವಣ್ಣ, ಯಜಮಾನರಾದ ನಾಗರಾಜು, ಪ್ರಾಂಶುಪಾಲ ರಂಗಸ್ವಾಮಿ, ಮುಖಂಡ ಗೌರಿಶಂಕರ್ ಇದ್ದರು.