ಗೋಸೇವೆ ಪವಿತ್ರ ಕಾರ್ಯ: ರಾಘವೇಶ್ವರ ಶ್ರೀ

KannadaprabhaNewsNetwork |  
Published : May 12, 2024, 01:16 AM IST
ತಾಲೂಕಿನ  ಭಾನ್ಕುಳಿ ಶ್ರೀ ರಾವದೇವ ಮಠದಲ್ಲಿ ನಡೆದ ಶಂಕರ ಪಂಚಮೀ ಉತ್ಸವದಲ್ಲಿ ಗೋಪಾಲ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಬೆಂಚು, ಡೆಸ್ಕ್‌, ಚಾಕ್‌ಪೀಸ್ ಇಲ್ಲದಿದ್ದರೂ ಗೋವುಗಳು ಮೌನದಲ್ಲಿ ಮಾಡುವ ಬೋಧನೆ ಮನುಷ್ಯರನ್ನು ಸರಿದಾರಿಯಲ್ಲಿ ಹಚ್ಚುವ ದಾರಿದೀಪವಾಗಿದೆ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.

ಸಿದ್ದಾಪುರ: ಒಂದು ಕಾಲದಲ್ಲಿ ಗೋಪಾಲಕ ಎಂದರೆ ಯಾತಕ್ಕೂ ಬೇಡದವ ಎನ್ನುವ ಭಾವನೆ ಇತ್ತು. ಹೀಗಾಗಿಯೇ ವಾಡಿಕೆಯಲ್ಲಿ ಕಡಿಮೆ ಬುದ್ಧಿ ಇದ್ದವರನ್ನು ದನ ಕಾಯಲು ಹೋಗು ಎಂದು ಜರೆಯಲಾಗುತ್ತಿತ್ತು. ಆದರೆ ಶ್ರೀಕೃಷ್ಣ ಪರಮಾತ್ಮ ಮಾಡಿದ ಈ ಕಾಯಕದಷ್ಟು ಪವಿತ್ರ ಕಾರ್ಯ ಬೇರೆ ಯಾವುದೂ ಇಲ್ಲ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳು ತಿಳಿಸಿದರು.

ತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವಮಠದಲ್ಲಿ ನಡೆಯುತ್ತಿರುವ ಶಂಕರಪಂಚಮಿ ಉತ್ಸವದಲ್ಲಿ ಗೋವಿನ ಕುರಿತಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಐವರಿಗೆ ಕಾಮದುಘಾ ಟ್ರಸ್ಟ್‌ ವತಿಯಿಂದ ಗೋಪಾಲ ಗೌರವವನ್ನು ಅನುಗ್ರಹಿಸಿ ಆಶೀರ್ವಚನ ನೀಡಿದರು.

ಗೋಸೇವೆ ಮಾಡಿದರೆ ಅಂಥವರ ಬುದ್ಧಿಶಕ್ತಿ ಚುರುಕಾಗುತ್ತದೆ ಎಂಬ ಕಾರಣಕ್ಕೆ ಬಹುಶಃ ಹಿಂದಿನವರು ದನ ಕಾಯಲು ಕಳಿಸುತ್ತಿದ್ದರು ಎಂದು ತರ್ಕಿಸಲೂ ಅವಕಾಶವಿದೆ. ಗೋವುಗಳೆಂದರೆ ಒಂದು ದೃಷ್ಟಿಯಲ್ಲಿ ಚಲಿಸುವ ವಿಶ್ವವಿದ್ಯಾಲಯಗಳೆಂದು ಪರಿಗಣಿಸಬೇಕು. ಬೆಂಚು, ಡೆಸ್ಕ್‌, ಚಾಕ್‌ಪೀಸ್ ಇಲ್ಲದಿದ್ದರೂ ಗೋವುಗಳು ಮೌನದಲ್ಲಿ ಮಾಡುವ ಬೋಧನೆ ಮನುಷ್ಯರನ್ನು ಸರಿದಾರಿಯಲ್ಲಿ ಹಚ್ಚುವ ದಾರಿದೀಪವಾಗಿದೆ. ಇಂತಹ ಗೋವುಗಳ ವಿಚಾರದಲ್ಲಿ ಹಲವು ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಈ ಐವರೂ ಸಾಧಕರು ಸಮಾಜದ ಆಸ್ತಿ ಎಂದು ಶ್ರೀಗಳು ವಿಶ್ಲೇಷಿಸಿದರು.ಗೋಪಾಲ ಗೌರವ ಕಾರ್ಯಕ್ರಮದಲ್ಲಿ ಸಹಯೋಗ ನೀಡಿದ ಮುಂಬೈನ ದಿನೇಶ ಶಹರಾ ಫೌಂಡೇಶನ್ ಸಂಸ್ಥಾಪಕ ಉದ್ಯಮಿ ದಿನೇಶ ಶಹರಾ ಮಾತನಾಡಿ, ನಮ್ಮದು ಸನಾತನ ಧರ್ಮ. ನಾವು ವಸುದೈವ ಕುಟುಂಬಕಂ ಎಂಬ ಧ್ಯೇಯವನ್ನು ಹೊಂದಿದವರು. ಹೀಗೆ ಒಂದೇ ಭೂಮಿಯಲ್ಲಿ ಹುಟ್ಟಿ ಬೆಳೆದ ನಾವು ಏಕೆ ಪರಸ್ಪರರಲ್ಲಿ ದ್ವೇಷ, ಭಯೋತ್ಪಾದನೆ, ದೊಂಬಿಯಂತಹ ಕಾರ್ಯದಲ್ಲಿ ತೊಡಗಿಕೊಳ್ಳಬೇಕು? ಇರುವ ಮೂರು ದಿನದಲ್ಲಿ ನಮ್ಮಿಂದಾಗುವಷ್ಟು ಸತ್ಕಾರ್ಯ ಮಾಡಬೇಕು. ಹೀಗಾಗಿಯೇ ನಮ್ಮ ಫೌಂಡೇಶನ್ ಮೂಲಕ ಅಂಗವಿಕಲರಿಗಾಗಿ, ಜನಸಾಮಾನ್ಯರಿಗಾಗಿ, ಗೋವಿಗಾಗಿ, ಆರೋಗ್ಯ ತಪಾಸಣೆ, ಚಿಕಿತ್ಸೆ, ಉಚಿತ ಔಷಧೋಪಚಾರ ನೀಡಲು ಮುಂದಾಗಿದ್ದೇವೆ. ಇಂತಹ ಕಾರ್ಯಗಳಿಂದಾಗಿ ಮನಸ್ಸಿಗೆ ಸಂತಸ ದೊರೆಯುವ ಜತೆ, ಜೀವನಕ್ಕೆ ಸಾರ್ಥಕತೆ ಬರುತ್ತದೆ. ಇಲ್ಲಿ ನಡೆಯುತ್ತಿರುವ ಗೋಸೇವೆಯ ಕಾಯಕದಲ್ಲಿ ರಾಘವೇಶ್ವರಭಾರತೀ ಶ್ರೀಗಳು ನಮಗೂ ಕಿಂಚಿತ್ ಸೇವೆಯ ಅವಕಾಶ ನೀಡಿದ್ದು ನಮ್ಮ ಸುದೈವ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಗೋವಿನ ಕುರಿತಾಗಿ ಸತ್ಕಾರ್ಯ ಮಾಡುತ್ತಿರುವ ಕೇರಳ ಕಾಸರಗೋಡಿನ ಪೆರಿಯದ ಶ್ರೀಮತಿ ನಾಗರತ್ನಾ ವಿಷ್ಣು ಹೆಬ್ಬಾರ, ಹುಬ್ಬಳ್ಳಿಯ ಸಮಾಜಸೇವಕ ಮಹೇಂದ್ರ ಸಿಂಘಿ, ಕಾಸರಗೋಡಿನ ನೆಕ್ಕಲಕೆರೆಯ ಸುಬ್ರಹ್ಮಣ್ಯಪ್ರಸಾದ, ದೊಡ್ಡಬಳ್ಳಾಪುರ ಘಾಟಿಸುಬ್ರಹ್ಮಣ್ಯದ ಡಾ. ಜೀವನಕುಮಾರ, ಬೈಲಹೊಂಗಲದ ಬಾಬುರಾವ್ ಪಾಟೀಲ ಅವರಿಗೆ ರಾಘವೇಶ್ವರ ಭಾರತೀ ಸ್ವಾಮಿಗಳು ಗೋಪಾಲ ಗೌರವ ಪ್ರಶಸ್ತಿ ಪ್ರದಾನ ಮಾಡಿದರು.

ದಿನೇಶ ಶಹರಾ ಫೌಂಡೇಶನ್‌ನ ಮೀರಾಜಿ ಉಪಸ್ಥಿತರಿದ್ದರು. ಜಾನ್ಹವಿ ಶಿರಸಿ ಪ್ರಾರ್ಥಿಸಿದರು. ಕಾಮದುಘಾ ಟ್ರಸ್ಟನ ಡಾ. ವೈ.ವಿ. ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ